1985ರಲ್ಲಿ ಉಡುಪಿಯಲ್ಲಿ ನಿರ್ಮಿಸಿದ್ದ ಗಾಂಧಿ ಭವನಕ್ಕೆ ಈಗ 39 ವರ್ಷ ತುಂಬಿದರೂ ಕೂಡ ಗಾಂಧಿ ಭವನ ಮಾತ್ರ ಅನೈತಿಕ ಚಟುವಟಿಕೆ ಮತ್ತು ಮದ್ಯಪಾನಿಗಳ ತಾಣವಾಗಿ ಮಾರ್ಪಟ್ಟಿದೆ. 1985ರಲ್ಲಿ ಅಂದಿನ ನಗರಾಭಿವೃದ್ದಿ ಸಚಿವ ಲಕ್ಷ್ಮೀ ಸಾಗರ್ ಅವರು ಗಾಂಧಿ ಭವನದ ಉದ್ಘಾಟನೆಯನ್ನು ನೆರವೇರಿಸಿದ್ದರು. 14 ವರ್ಷಗಳ ಹಿಂದೆ ಗಾಂಧಿ ಭವನಕ್ಕೆ ₹2 ಲಕ್ಷ ವೆಚ್ಚದಲ್ಲಿ ಪೀಠೋಪಕರಣ ಅಳವಡಿಸಿ, ಕಿಟಕಿ ಬಾಗಿಲು ದುರಸ್ತಿ ಮಾಡಲಾಗಿತ್ತು. ₹4 ಲಕ್ಷ ವೆಚ್ಚದಲ್ಲಿ ಮಾರ್ಬಲ್ ನೆಲಹಾಸು ಇನ್ನಿತರ ದುರಸ್ತಿ ಕೆಲಸ ನಡೆದಿತ್ತು. ಆ ಬಳಿಕ 2016- 17ರಲ್ಲಿ ಆಧಾರ್ ನೋಂದಣಿ ಕಾರ್ಯ ನಡೆಯುತ್ತಿತ್ತು. ಸ್ವಲ್ಪ ದಿನಗಳ ಬಳಿಕ ತಾಂತ್ರಿಕ ಸಮಸ್ಯೆ ಕಾರಣದಿಂದ ಅಂದು ಮುಚ್ಚಿದ್ದ ಗಾಂಧಿಭವನ ಈಗಲೂ ಮುಚ್ಚಿಯೇ ಇದೆ.
ಶಿಥಿಲಾವಸ್ಥೆಗೆ ತಲುಪಿರುವ ಗಾಂಧಿ ಭವನದ ಸಿಮೆಂಟ್ ಶೀಟ್ಗಳು ಬಿರುಕು ಬಿಟ್ಟಿದ್ದು, ಕೆಲ ಭಾಗದಲ್ಲಿ ಕಟ್ಟಡದ ಮೇಲ್ಬಾವಣಿಯ ಶೀಟುಗಳು ನೆಲಕ್ಕುರುಳುವ ಸ್ಥಿತಿಯಲ್ಲಿವೆ. ಕಿಟಕಿ ಬಾಗಿಲುಗಳು ಮುರಿದುಕೊಂಡು ಬಿದ್ದಿವೆ. ಶೌಚಾಲಯ ಹದಗೆಟ್ಟಿದ್ದು, ಕಟ್ಟಡದ ಆವರಣ ಜಾನುವಾರುಗಳ ವಾಸಸ್ಥಾನವಾಗಿದೆ. ಕಟ್ಟಡದ ಸುತ್ತ ಗಿಡಗಂಟಿ, ಹುಲ್ಲಿನ ಪೊದೆ ಬೆಳೆದು ನಿಂತಿದೆ. ಅಪರಿಚಿತರು ಮದ್ಯದ ಬಾಟಲಿ, ತ್ಯಾಜ್ಯವನ್ನು ಎಸೆದಿದ್ದಾರೆ.
ಪ್ರಸ್ತುತ ರಸ್ತೆ ಬದಿಯಿಂದ ಕಂಡರೆ ಗಾಂಧಿ ಭವನ ಎಲ್ಲಿದೆ ಎಂದು ಗುರುತಿಸುವುದು ಕಷ್ಟ. ಸಮರ್ಪಕ ನಿರ್ವಹಣೆ ಇಲ್ಲದೆ ಕಟ್ಟಡ ಸಂಪೂರ್ಣ ದುಃಸ್ಥಿತಿಗೆ ತಲುಪಿದೆ. ಕಟ್ಟಡವನ್ನು ಉಪಯೋಗ ಶೂನ್ಯ ಸ್ಥಿತಿಯಲ್ಲಿ ಬಿಡುವುದಕ್ಕಿಂತ ಆಧುನಿಕ ಶೈಲಿಯಲ್ಲಿ ಸುಸಜ್ಜಿತಗೊಳಿಸಿದರೆ ಸರ್ಕಾರ, ಸಂಘ ಸಂಸ್ಥೆಯ ಸಭೆ, ಸಮಾರಂಭ, ಸಾಂಸ್ಕೃತಿಕ, ತರಬೇತಿ ಕಾರ್ಯಕ್ರಮ ನಡೆಸಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕೆಂಬ ಆಗ್ರಹ ಕೇಳಿಬರುತ್ತಿವೆ.
ಸಾರ್ವಜನಿಕರು ಹೇಳುವ ಪ್ರಕಾರ, “ಹಿಂದೆ ಒಮ್ಮೆ ಈ ಗಾಂಧಿ ಭವನವು ಆಧಾರ್ ಕೇಂದ್ರವಾಗಿದ್ದು ಹಾಗೂ ಅಡಿಷನಲ್ ನ್ಯಾಯಾಲಯ ಆಗಿತ್ತು. ಆರು ತಿಂಗಳ ಹಿಂದೆ ಇಲ್ಲಿ ಕಳ್ಳತನ ಆಗಿದ್ದು, ಮಾಧ್ಯಮಗಳಲ್ಲಿಯೂ ಬಿತ್ತರವಾಗಿದೆ. ಹಿಂದಿನ ಬಾಗಿಲು ಮುರಿದಿದ್ದರು ಯಾರೂ ಕೇಳುವರಿಲ್ಲ. ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಇದ್ದರೂ ಕೂಡ ಕುಡುಕರ ತಾಣವಾಗಿದೆ ಮಾರ್ಪಟ್ಟಿದೆ” ಎಂದು ದೂರಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಸುರೇಂದ್ರ ಉಡುಪಿ ಈ ದಿನ.ಕಾಮ್ನೊಂದಿಗೆ ಮಾತಾನಾಡಿ, “ಬನ್ನಂಜೆಯ ಕೆಎಸ್ಆರ್ಟಿಸಿ ಹೊಸ ಬಸ್ ಸ್ಟ್ಯಾಂಡ್ ಬಳಿ ಎಸ್ಪಿ ಕಚೇರಿಯ ಮುಂಭಾಗದಲ್ಲಿರುವ ಗಾಂಧಿ ಭವನ ಯಾವುದೇ ನಿರ್ವಹಣೆ ಇಲ್ಲದೆ ಅನೈತಿಕತೆಯ ತಾಣವಾಗಿದೆ. ಊರೆಲ್ಲಾ ಬಿಗಿ ಬಂದೋಬಸ್ತ್ ಮಾಡುವ ಎಸ್ಪಿ ಕಚೇರಿಯ ಮುಂಭಾಗವೇ ಅನೈತಿಕ ಚಟುವಟಿಕೆಯ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ. ರಾತ್ರಿ ಹೊತ್ತು ಈ ಗಾಂಧಿ ಭವನದಲ್ಲಿ ಮಧ್ಯಪಾನಿಗಳು ಬಂದು ಹೋಗಿ ಈ ತಾಣವೇ ಕೊಳಕು ತಾಣವಾಗಿ ಮಾರ್ಪಾಡಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಇದನ್ನು ಸಾರ್ವಜನಿಕರಿಗೆ ಬಾಡಿಗೆ ರೂಪದಲ್ಲಿ ನೀಡಿ ಅಂಗಡಿ ಮುಂಗಟ್ಟನ್ನು ಸ್ಥಾಪಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರಮಾಕುಮಾರಿ ರಾಜಕಾರಣಕ್ಕೆ ಬರಬೇಕು: ಮಲ್ಲಿಕಾ ಬಸವರಾಜು
ಈ ದಿನ.ಕಾಮ್ ಜತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್, “ಗಾಂಧಿ ಭವನ ಸುಮಾರು ವರ್ಷಗಳಿಂದ ಯಾವುದೇ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದೆ. ಕೆಲವು ತಿಂಗಳ ಹಿಂದೆ ಸ್ವಲ್ಪ ಸಮಯ ಆಧಾರ್ ಕೇಂದ್ರವಾಗಿ ಕಾರ್ಯ ನಿರ್ವಹಿಸಿತು. ಇದೀಗ ಅದೇ ರೀತಿಯಲ್ಲಿ ಕುಡುಕ ತಾಣವಾಗಿ ಮಾರ್ಪಟ್ಟಿದೆ. ಗಾಂಧಿ ಭನವದ ಮುಂದೆಯೇ ನೂತನವಾಗಿ ಉಡುಪಿ ಬಸ್ ನಿಲ್ದಾಣ ಆರಂಭವಾಗಿದೆ. ಪ್ರತಿದಿನ ಸಾವಿರಾರು ಜನರು ಪ್ರಯಾಣಿಕರಾಗಿ ಜಿಲ್ಲೆಗೆ ಆಗಮಿಸುತ್ತಾರೆ. ಅವರಿಗೆ ಉಪಯೋಗ ಆಗುವ ರೀತಿಯಲ್ಲಿ ವಿಶ್ರಾಂತಿ ತಾಣ ಅಥವಾ ಲಗೇಜ್ ರೂಂ ಆಗಿ ಪರಿವರ್ತಿಸಬಹುದು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ಗೃಹ ಜ್ಯೋತಿ, ಗೃಹಲಕ್ಷಿಗಳಂತಹ ಯೋಜನೆಗಳ ಕುಂದು ಕೊರತೆಗಳನ್ನು ನೀಗಿಸಲು ಸಲಹಾ ಕೇಂದ್ರವಾಗಿ ಕೂಡ ಮಾಡಬಹುದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು” ಎಂದು ಹೇಳಿದರು.