ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ (ಗ್ರಾಕೂಸ) ನೇತೃತ್ವದಲ್ಲಿ ಮನರೇಗಾ ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಭಾರತದ ಸಂವಿಧಾನ ಪೀಠಿಕೆ ಓದುವುದರ ಮೂಲಕ ವಿಭಿನ್ನವಾಗಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಿಸಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಅರಸನಾಳು, ಹಲವಾಗಲು, ಕುಂಚೂರು, ಬೆನ್ನಿಹಳ್ಳಿ, ಹಳ್ಳಿಕೆರೆ, ಗೌರಿಹಳ್ಳಿ, ಕಂಚಿಕೆರೆ, ಕುಣೆಮಾದಿಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಆಚರಿಸಲಾಗಿದೆ.
ಕೂಲಿ ಕಾರ್ಮಿಕರ ಸಂಘಟನೆ ಭಾಗ್ಯಮ್ಮ ಮಾತನಾಡಿ, “ಅಂಬೇಡ್ಕರ್ ನಮ್ಮ ದೇಶದಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯ. ಅವರು ಪ್ರಪಂಚವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಶೋಷಿತ, ದುರ್ಬಲ, ಹಿಂದುಳಿದ ವರ್ಗದ ಜನರಿಗೆ ಮುಳುಗದೆ ಇರುವಂತಹ ಸೂರ್ಯನಾಗಿ ಸದಾ ಬೆಳಕನ್ನು ಚೆಲ್ಲುತ್ತಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸುಳ್ಳು ಆರೋಪ ಖಂಡಿಸಿ ಸಿಯುಕೆ ವಿದ್ಯಾರ್ಥಿ ಉಪವಾಸ ಸತ್ಯಾಗ್ರಹ
“ಡಾ. ಬಿ.ಆರ್ ಅಂಬೇಡ್ಕರ್ ಅವರು ಮತದಾನ ಹಕ್ಕಿನ ಮೂಲಕ ತಮ್ಮ ಭವಿಷ್ಯದ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಕೊಟ್ಟಿದ್ದಾರೆ. ನಾವು ದುರುಪಯೋಗ ಮಾಡಿಕೊಳ್ಳದೆ ಯಾವುದೇ ಆಸೆ ಆಕಾಂಕ್ಷಿಗಳಿಗೆ ಬಲಿಯಾಗದೆ ಉತ್ತಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಮ್ಮ ಮುಂದೆ ಬಂದಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮರನ್ನು ಆಯ್ಕೆ ಮಾಡಿಕೊಳ್ಳೊಣ” ಎಂದು ಸಲಹೆ ನೀಡಿದರು.
“ಪ್ರತಿ ನಿಮಿಷಕ್ಕೂ ಸದಾ ಬೆಳೆಯುತ್ತಿರುವ ವ್ಯಕ್ತಿ ಎಂದರೆ, ಡಾ. ಬಿ ಆರ್ ಅಂಬೇಡ್ಕರ್. ಅವರ ತತ್ವ ಸಿದ್ಧಾಂತಗಳ ಅಡಿಯಲ್ಲಿ ಮುನ್ನಡೆಯೋಣ” ಎಂದು ಮನರೇಗಾ ಕೂಲಿಕಾರ್ಮಿಕರ ಸಂಘದ ಶೃತಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರು ಯಶೋಧ ಮಾರುತಿ ನೀಲಮ್ಮ ಹೊನ್ನಮ್ಮ ಗಂಗಮ್ಮ, ಜಗದೀಶ, ನಾಗಪ್ಪ ಸೇರಿದಂತೆ ಇತರರು ಇದ್ದರು.