ಎಸ್ಐಆರ್ ವಿರೋಧಿ ಕರ್ನಾಟಕ ಪ್ರಗತಿಪರ ಸಂಘಟನೆಗಳ ಹಾಗೂ ಜಾತ್ಯಾತೀತ ಪಕ್ಷಗಳ ಜಿಲ್ಲಾ ಒಕ್ಕೂಟದ ನೇತೃತ್ವದಲ್ಲಿ ನಡೆದ ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿತು.
ಜಾಥಾವು ಬೈಕ್ ರ್ಯಾಲಿಯ ಮೂಲಕ ಗಾಂಧಿ ಚೌಕ್ ತಲುಪಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿತು. ಬಳಿಕ ಎಸ್ಐಆರ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲಾಯಿತು. ನಂತರ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ಆಯೋಜಿಸಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.

ಸಭೆಯಲ್ಲಿ ಎದ್ದೇಳು ಕರ್ನಾಟಕ ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟೇಕರ್, ಇರ್ಪಾನ್ ಬದಾಲ್ ಮಲ್ಲಿಕಾರ್ಜುನ ಸತ್ಯಂಪೇಟ ಸೇರಿದಂತೆ ಹಲವು ಮುಖಂಡರು ಮಾತನಾಡಿ, ‘ಎಸ್ಐಆರ್ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಜನಸಾಮಾನ್ಯರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಪ್ರಯತ್ನವಾಗಿದೆ’ ಎಂದು ಆರೋಪಿಸಿದರು.
ಈ ವೇಳೆ ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಮಾಯಾ ಮಾತನಾಡಿ, “ಕೇಂದ್ರ ಸರ್ಕಾರ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸುವ ಬದಲು ಎಸ್ಐಆರ್ನಂತಹ ಕ್ರಮಗಳ ಮೂಲಕ ನಮ್ಮ ಅಸ್ತಿತ್ವವನ್ನೇ ಪ್ರಶ್ನಿಸುವ ಕೆಲಸ ಮಾಡುತ್ತಿದೆ. ನಾವು ಲಿಂಗತ್ವ ಅಲ್ಪಸಂಖ್ಯಾತರಾಗಿರುವ ಕಾರಣ ಜೀವನದಲ್ಲಿ ಹೆಸರು, ಲಿಂಗ, ವಾಸಸ್ಥಳ, ರಾಜ್ಯ ಸೇರಿದಂತೆ ಅನೇಕ ಬದಲಾವಣೆಗಳನ್ನು ಎದುರಿಸುತ್ತೇವೆ. ಹಲವರನ್ನು ಕುಟುಂಬವೇ ತಿರಸ್ಕರಿಸಿ ಮನೆಯಿಂದ ಹೊರಹಾಕಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಕೇಳುತ್ತಿರುವ ದಾಖಲೆಗಳನ್ನು ನಾವು ಹೇಗೆ ಒದಗಿಸಬೇಕು?” ಎಂದು ಪ್ರಶ್ನಿಸಿದರು.

“2014ರಲ್ಲಿ ನಮಗೆ ಮತದಾನದ ಹಕ್ಕು ದೊರೆತಿದ್ದು, ದೇಶದ ನಾಗರಿಕರೆಂದು ಮಾನ್ಯತೆ ಸಿಕ್ಕಿದೆ. ಈಗ ದಾಖಲೆಗಳ ನೆಪದಲ್ಲಿ ನಮ್ಮ ಮತಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸಿದರೆ ಅದು ನಮ್ಮ ನಾಗರಿಕತ್ವವನ್ನೇ ಪ್ರಶ್ನಿಸುವಂತಾಗುತ್ತದೆ. ಎಸ್ಐಆರ್ ಮೂಲಕ ಲಿಂಗತ್ವ ಅಲ್ಪಸಂಖ್ಯಾತರನ್ನು ರಾಜಕೀಯವಾಗಿ ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ” ಎಂದು ಅವರು ಆರೋಪಿಸಿದರು.
ಎದ್ದೇಳು ಕರ್ನಾಟಕ ಸಂಘಟನೆಯ ಪ್ರತಿನಿಧಿ ಚನ್ನಮ್ಮ ಮಾತನಾಡಿ, “ಎಸ್ಐಆರ್ ಪರಿಷ್ಕರಣೆಯಲ್ಲಿ ಮಹಿಳೆಯರೇ ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ. ತಂದೆ-ತಾಯಿಯ ಮನೆಯಲ್ಲಿ ಒಂದು ಹೆಸರು, ವಿವಾಹದ ನಂತರ ಮತ್ತೊಂದು ಹೆಸರು ಬಳಸುವ ಸಂದರ್ಭಗಳು ಹೆಚ್ಚಾಗಿವೆ. ಕೆಲವೊಮ್ಮೆ ಜಾತಕ ಅಥವಾ ಕುಟುಂಬದ ಸಂಪ್ರದಾಯದ ಕಾರಣಕ್ಕೂ ಹೆಸರು ಬದಲಾಗಿರುತ್ತದೆ. ಇದರಿಂದ ದಾಖಲೆಗಳಲ್ಲಿ ವ್ಯತ್ಯಾಸ ಉಂಟಾಗಿ ಮಹಿಳೆಯರ ಹೆಸರು ಮತಪಟ್ಟಿಯಿಂದ ಕೈಬಿಡುವ ಅಪಾಯ ಎದುರಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಆದ್ದರಿಂದ ಮಹಿಳೆಯರು ಎಸ್ಐಆರ್ ಪ್ರಕ್ರಿಯೆಯ ಬಗ್ಗೆ ಜಾಗೃತರಾಗಬೇಕು. ಮತದಾನದ ಹಕ್ಕು ಕಳೆದುಕೊಂಡರೆ ಪ್ರಜಾಪ್ರಭುತ್ವದ ಹಕ್ಕುಗಳ ಜೊತೆಗೆ ಸರ್ಕಾರದ ವಿವಿಧ ಸೌಲಭ್ಯಗಳಿಂದಲೂ ವಂಚಿತರಾಗುವ ಸಾಧ್ಯತೆ ಇದೆ. ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಅಪಾಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಹೇಳಿದರು.
ಬಳಿಕ ಜಾಥಾವು ಅಂಬೇಡ್ಕರ್ ವೃತ್ತ ತಲುಪಿ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿತು. ಅಲ್ಲದೆ ಎಸ್ಐಆರ್ ಕುರಿತು ಮಾಹಿತಿಯಿರುವ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ಜಾಗೃತಿ ಮೂಡಿಸಲಾಯಿತು. ನಂತರ ನಗರದ ಸುಭಾಷ್ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಮತ್ತು ಮುಖಂಡರು ಜನಸಾಮಾನ್ಯರಿಗೆ ಎಸ್ಐಆರ್ನಿಂದ ಆಗಬಹುದಾದ ಪರಿಣಾಮಗಳ ಕುರಿತು ಅರಿವು ಮೂಡಿಸಿದರು.

ಇದನ್ನು ಓದಿದ್ದೀರಾ? ಶಹಾಪುರದಲ್ಲಿ ಎಸ್ಐಆರ್ ವಿರೋಧಿ ಹೋರಾಟದ ಕಹಳೆ; ಬೈಕ್ ರ್ಯಾಲಿ ಮೂಲಕ ಜನಜಾಗೃತಿ
ಈ ಸಂದರ್ಭದಲ್ಲಿ ಜೆ.ಎಂ. ವೀರಸಂಗಯ್ಯ ಮಾತನಾಡಿ, ಮತದಾರರ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಬ್ಬ ನಾಗರಿಕರೂ ಎಚ್ಚರಿಕೆಯಿಂದ ಇರಬೇಕು ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯನ್ನು ನಿಕಟವಾಗಿ ಗಮನಿಸಬೇಕು ಎಂದು ಕರೆ ನೀಡಿದರು. ಸಭೆಯ ನಂತರ ಜಾಥಾವನ್ನು ಮುಂದಿನ ಗಮ್ಯಸ್ಥಾನದತ್ತ ಕಳುಹಿಸಲಾಯಿತು.




