- ದಿನೇಶ್ ಗೋಪೆ ಮೇಲೆ ₹30 ಲಕ್ಷ ನಗದು ಬಹುಮಾನ ಘೋಷಣೆ
- ನೇಪಾಳದಲ್ಲಿ ಸಿಖ್ ವೇಷದಲ್ಲಿ ತಲೆಮರೆಸಿಕೊಂಡಿದ್ದ ದಿನೇಶ್
ಜಾರ್ಖಂಡ್ನಲ್ಲಿಯ ನಿಷೇಧಿತ ಮಾವೋವಾದಿ ಸಂಘಟನೆ ಪೀಪಲ್ಸ್ ಲಿಬರೇಷನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ಎಫ್ಐ) ಮುಖ್ಯಸ್ಥ ದಿನೇಶ್ ಗೋಪೆ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ ಎಂದು ಮಂಗಳವಾರ (ಮೇ 23) ಅಧಿಕಾರಿಗಳು ಹೇಳಿದ್ದಾರೆ.
ಆರೋಪಿ ದಿನೇಶ್ ವಿರುದ್ಧ ಮೂರು ರಾಜ್ಯಗಳಲ್ಲಿ 102 ಅಪರಾಧ ಪ್ರಕರಣಗಳು ದಾಖಲಾಗಿವೆ.
ದಿನೇಶ್ ಗೋಪೆ ಮಾವೋವಾದಿ ನಾಯಕನನ್ನು ಹುಡುಕಿಕೊಟ್ಟವರಿಗೆ ಜಾರ್ಖಂಡ್ ಪೊಲೀಸರು ₹25 ಲಕ್ಷ ಬಹುಮಾನ ಘೋಷಿಸಿದ್ದರು.
ಅಲ್ಲದೆ ಎನ್ಐಎ ಸಹ ದಿನೇಶ್ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಿತ್ತು. ಎನ್ಐಎ ಹಾಗೂ ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ದಿನೇಶ್ನನ್ನು ಭಾನುವಾರ (ಮೇ 21) ನೇಪಾಳದಲ್ಲಿ ಬಂಧಿಸಿದ್ದಾರೆ.
ಆತನನ್ನು ದೆಹಲಿಯಿಂದ ಜಾರ್ಖಂಡ್ನ ರಾಂಚಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾವೋವಾದಿ ನಾಯಕ ದಿನೇಶ್ನ ವಿರುದ್ಧ ಕಳೆದ ಎರಡು ದಶಕಗಳಲ್ಲಿ ಜಾರ್ಖಂಡ್, ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ದಿನೇಶ್ ತನ್ನ ವೇಷ ಬದಲಿಸಿ ನೇಪಾಳದ ಢಾಬಾದಲ್ಲಿ 13 ತಿಂಗಳಿನಿಂದ ಸಿಖ್ ವೇಷದಲ್ಲಿ ತಲೆಮರೆಸಿಕೊಂಡಿದ್ದ. ಅಂತಿಮವಾಗಿ ಎನ್ಐಎ ವಿಶೇಷ ತಂಡ ಜಾರ್ಖಂಡ್ ಪೊಲೀಸರ ಸಹಾಯದಿಂದ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಜಾರ್ಖಂಡ್ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಗುದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಎನ್ಕೌಂಟರ್ನಿಂದ ದಿನೇಶ್ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ತಡೆಯಲು ಆಪ್ ಕಸರತ್ತು; ಕಾಂಗ್ರೆಸ್ ಬೆಂಬಲ
ಉದ್ಯಮಿಗಳು ಮತ್ತು ಗುತ್ತಿಗೆದಾರರನ್ನು ಭಯಭೀತರನ್ನಾಗಿಸಲು ಅವರಿಂದ ಹಣ ವಸೂಲಿ ಮಾಡುವಲ್ಲಿ ದಿನೇಶ್ ಭಾಗಿಯಾಗಿದ್ದ ಎಂದು ಎನ್ಐಎ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ದಿನೇಶ್ ಗೋಪೆ ಮೇಲೆ ಹಲವು ಗಂಭೀರ ಆರೋಪಗಳಿವೆ. ಭದ್ರತಾ ಪಡೆಗಳ ಮೇಲೆ ದಾಳಿ, ಸಾಲ ವಸೂಲಿ, ಗುತ್ತಿಗೆದಾರರು-ವ್ಯಾಪಾರಿಗಳಿಗೆ ಬೆದರಿಕೆ, ಭಯೋತ್ಪಾದಕರಿಗೆ ಧನಸಹಾಯ ಮಾಡಿದ ಆರೋಪ ಈತನ ಮೇಲಿದೆ.
ದಿನೇಶ್ ಹಲವಾರು ಭಯೋತ್ಪಾದಕ ಕೃತ್ಯಗಳಿಗೆ ಸಹಾಯ ಮಾಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.