ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ತಡೆಯಲು ಆಪ್ ಕಸರತ್ತು; ಕಾಂಗ್ರೆಸ್ ಬೆಂಬಲ

Date:

  • ಸುಗ್ರೀವಾಜ್ಞೆ ವಿರುದ್ಧ ಆಪ್‌ಗೆ ಬೆಂಬಲ ಘೋಷಿಸಿದ ವಿಪಕ್ಷಗಳು
  • ಮಮತಾ, ಉದ್ಧವ್ ಹಾಗೂ ಶರದ್ ಪವಾರ್ ಜೊತೆ ಮಾತುಕತೆ

ಮುಂದಿನ ಮೂರು ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಅರವಿಂದ್ ಕೇಜ್ರಿವಾಲ್ ಅವರು ಮಮತಾ ಬ್ಯಾನರ್ಜಿ, ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ. ಸುಗ್ರೀವಾಜ್ಞೆ ವಿರೋಧಿಸಲು ರಾಜ್ಯಸಭೆಯಲ್ಲಿ ಬಿಜೆಪಿಯ ಬಹುಮತವನ್ನು ಹಿಂದಿಕ್ಕುವುದು ಕಷ್ಟವಾದರೂ, ಈ ಭೇಟಿ ವಿಪಕ್ಷಗಳ ಏಕತೆಗೆ ನೆರವಾಗಬಹುದು.

ಕಾಂಗ್ರೆಸ್ ಈಗಾಗಲೇ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ ಕೇಂದ್ರದ ಸುಗ್ರೀವಾಜ್ಞೆ ವಿರುದ್ಧ ಆಪ್‌ ಸರ್ಕಾರವನ್ನು ಬೆಂಬಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾಂಗ್ರೆಸ್ ಬೆಂಬಲಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎನ್ನುವ ಸುದ್ದಿಗಳು ಹರಡಿರುವ ನಡುವೆಯೇ, ಸುಗ್ರೀವಾಜ್ಞೆಯನ್ನು ವಿರೋಧಿಸಿ ಕಾಂಗ್ರೆಸ್ ಹೇಳಿಕೆ ನೀಡಿದೆ.

ಪೂರ್ವದಿಂದ ಪಶ್ಚಿಮ ಕರಾವಳಿವರೆಗೆ ಓಡಾಟ

ಇದೀಗ ಅರವಿಂದ್ ಕೇಜ್ರಿವಾಲ್ ಒಂದೇ ದಿನದಲ್ಲಿ ಕೋಲ್ಕತ್ತಾಗೆ ಹೋಗಿ ಮಮತಾರನ್ನು ಭೇಟಿಯಾದ ನಂತರ, ಮುಂಬೈಗೆ ತೆರಳಿ ಶಿವಸೇನೆ ಮತ್ತು ಎನ್‌ಸಿಪಿ ನಾಯಕರನ್ನು ಭೇಟಿಯಾಗಲಿದ್ದಾರೆ. ಕೇಂದ್ರ ಸರ್ಕಾರ ದೆಹಲಿ ಸರ್ಕಾರದ ಆಡಳಿತಕ್ಕೆ ನಿಯಂತ್ರಣ ಹೇರಲು ಸುಗ್ರೀವಾಜ್ಞೆ ಹೊರಡಿಸಿರುವ ವಿರುದ್ಧ ವಿಪಕ್ಷಗಳು ಒಕ್ಕೊರಲ ಧ್ವನಿಯನ್ನು ಮುಂದಿಡುವಂತೆ ಕೇಜ್ರಿವಾಲ್ ಒತ್ತಾಯಿಸುತ್ತಿದ್ದಾರೆ.

ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಸುಗ್ರೀವಾಜ್ಞೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ ನಿಭಾಯಿಸಲು ಹೊಸ ಶಾಸನಬದ್ಧ ಪ್ರಾಧಿಕಾರ ರಚಿಸಲಾಗಿದೆ. ಈ ಪ್ರಾಧಿಕಾರದ ಇಬ್ಬರು ಹಿರಿಯ ಅಧಿಕಾರಿಗಳು ಚುನಾಯಿತ ಮುಖ್ಯಮಂತ್ರಿಯನ್ನು ಮೀರಿ ಅಧಿಕಾರ ಚಲಾಯಿಸಬಹುದಾಗಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಸಂವಿಧಾನಾತ್ಮಕ ಪೀಠ ನೀಡಿದ ತೀರ್ಪಿನಲ್ಲಿ ದೆಹಲಿ ಸರ್ಕಾರದ ಸೇವೆಗಳನ್ನು ಚುನಾಯಿತ ಸರ್ಕಾರಕ್ಕೆ ನೀಡಬೇಕು ಎಂದು ಹೇಳಲಾಗಿದೆ. ಈ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿದೆ.

ಈ ಸುಗ್ರೀವಾಜ್ಞೆಯನ್ನು ರಾಜ್ಯಸಭೆಯಲ್ಲಿ ಮುಂದಿಟ್ಟಾಗ ವಿರೋಧಿಸಲು ಅರವಿಂದ್ ಕೇಜ್ರಿವಾಲ್‌ ಅವರಿಗೆ ವಿಪಕ್ಷಗಳ ನೆರವು ಬೇಕಾಗುತ್ತದೆ. ಅದೇ ಕಾರಣದಿಂದ ಅವರು ಪೂರ್ವ ಕರಾವಳಿಯಿಂದ ಪಶ್ಚಿಮ ಕರಾವಳಿಯವರೆಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಕೇಜ್ರಿವಾಲ್ ಅವರ ಈ ಭೇಟಿಗಳು ವಿಪಕ್ಷ ನಾಯಕರ ನಡುವೆ ಏಕತೆ ಮೂಡಿಸುವ ಮತ್ತೊಂದು ಪ್ರಯತ್ನವಾಗಲಿದೆ.

ಕೇಜ್ರಿವಾಲ್ ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ. “ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ಅಂಗೀಕಾರವಾಗುವುದನ್ನು ತಡೆಯಲು ವಿಪಕ್ಷಗಳು ಯಶಸ್ವಿಯಾದಲ್ಲಿ 2024ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಅಧಿಕಾರದಿಂದ ಹೊರ ಹೋಗಲಿದೆ ಎನ್ನುವ ದೊಡ್ಡ ಸಂದೇಶ ನೀಡಿದಂತಾಗಲಿದೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ನಂಬರ್ ಆಟ ಹೇಗಿದೆ?

ಜೆಡಿಯು ಮತ್ತು ಆರ್‌ಜೆಡಿ ಒಟ್ಟಾಗಿ ರಾಜ್ಯಸಭೆಯಲ್ಲಿ 11 ಸದಸ್ಯರನ್ನು ಹೊಂದಿವೆ. ಬಿಜೆಪಿಯ ಬಳಿ 93 ಸದಸ್ಯರಿದ್ದಾರೆ. ಆಪ್, ಟಿಎಂಸಿ, ಶಿವಸೇನೆ ಹಾಗೂ ಎನ್‌ಸಿಪಿ ಜೊತೆಗೂಡಿದರೆ 29 ಸದಸ್ಯರಾಗುತ್ತಾರೆ. ಎಡಪಕ್ಷಗಳು ಈಗಾಗಲೇ ಸುಗ್ರೀವಾಜ್ಞೆ ವಿರೋಧಿಸಿ ಹೇಳಿಕೆ ನೀಡಿವೆ. ಸಿಪಿಐ(ಎಂ) ಬಳಿ ಐದು ರಾಜ್ಯಸಭಾ ಸಂಸದರಿದ್ದರೆ, ಸಿಪಿಐ ಬಳಿ ಇಬ್ಬರಿದ್ದಾರೆ.

ಈ ಒಟ್ಟು 37 ಸಂಸದರ ಹೊರತಾಗಿ ಡಿಎಂಕೆ (10), ಭಾರತ ರಾಷ್ಟ್ರ ಸಮಿತಿ (7) ಮತ್ತು ಇತರರ ಬೆಂಬಲವನ್ನೂ ಕೇಜ್ರಿವಾಲ್ ಬಯಸಬಹುದು. ಮುಂದಿನ ಕೆಲ ವಾರಗಳಲ್ಲಿ ಅವರು ಇತರ ಪಕ್ಷಗಳ ಮುಖ್ಯಸ್ಥರನ್ನೂ ಭೇಟಿಯಾಗುವ ಸಾಧ್ಯತೆಯಿದೆ.

ಆದರೆ, ಕಾಂಗ್ರೆಸ್‌ನ 31 ರಾಜ್ಯಸಭಾ ಸದಸ್ಯರ ಬೆಂಬಲದ ಹೊರತಾಗಿ ಕೇಜ್ರಿವಾಲ್ ಅವರು ಬಹುಮತ ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಬೆಂಬಲ ನೀಡಿದ ನಂತರವೂ ಬಿಜೆಪಿಗೆ ಬಿಜೆಡಿ (9) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (9) ಬೆಂಬಲ ದೊರೆತಲ್ಲಿ ಸುಗ್ರೀವಾಜ್ಞೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಬಹುದು.

ಸಾಮಾನ್ಯವಾಗಿ ಪಕ್ಷಗಳ ಸದಸ್ಯರು ಅಡ್ಡಮತದಾನ ಮಾಡುವುದು, ಮತದಾನದ ದಿನ ಗೈರು ಹಾಜರಾಗುವ ಸಾಧ್ಯತೆಗಳೂ ಇರುವುದರಿಂದ ಸುಗ್ರೀವಾಜ್ಞೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತು ಕಾಯ್ದೆಯಾಗಿ ಬದಲಾಗುವ ಸಂಭವ ಅತಿಕಡಿಮೆ ಇದೆ.

ಆಪ್ ಶೀಘ್ರವೇ ರಾಮ್‌ಲೀಲಾ ಮೈದಾನದಲ್ಲಿ ಸುಗ್ರೀವಾಜ್ಞೆ ವಿರುದ್ಧ ಸಾರ್ವಜನಿಕ ಸಭೆಯನ್ನೂ ಆಯೋಜಿಸುತ್ತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2022ರ ವಿಶ್ವ ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಭಾರತಕ್ಕೆ ಮೊದಲ ಸ್ಥಾನ | ಕೇಂದ್ರದ ದತ್ತಾಂಶ

ಭಾರತ 2022ರಲ್ಲಿ 8.95 ಲಕ್ಷ ಡಿಜಿಟಲ್ ಪಾವತಿ ವಹಿವಾಟು ನಡೆಸಿದೆ 9 ವರ್ಷದಲ್ಲಿ...

3 ತಿಂಗಳೊಳಗೆ ಎಲ್ಲ ಮಹಿಳೆಯರಿಗೂ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ : ರಾಮಲಿಂಗಾರೆಡ್ಡಿ

ಭಾನುವಾರ ಅಧಿಕೃತ ಚಾಲನೆ ಪಡೆದುಕೊಳ್ಳಲಿರುವ ಶಕ್ತಿ ಯೋಜನೆ ನಾಳೆ ಸಾಂಕೇತಿಕವಾಗಿ ಕೆಲವರಿಗೆ ಸ್ಮಾರ್ಟ್...

ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲಗಳಿಲ್ಲ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಘೋಷಿತ ಗ್ಯಾರಂಟಿಗಳು ಹಂತಹಂತವಾಗಿ ಜಾರಿಯಾಗಲಿವೆ ಪ್ರಣಾಳಿಕೆಯ ಘೋಷಣೆಯಂತೆ ನಾವು ಗ್ಯಾರಂಟಿ ಅನುಷ್ಠಾನ...

ಮುಂದಿನ 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಬಿಪೊರ್‌ಜಾಯ್‌ | 3 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ

ಬಿಪೊರ್‌ಜಾಯ್‌ ಚಂಡಮಾರುತ ಹಿನ್ನೆಲೆ ಕೇರಳದ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಬಂಗಾಳಿ ಭಾಷೆಯಲ್ಲಿ...