ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಬಣದ ಶಿವಸೇನೆ(ಯುಬಿಟಿ) ಮುಂಬೈನ ನಾಲ್ಕು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ ಬೆನ್ನಲ್ಲೆ ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ನಿರುಪಮ್, ಮುಂಬೈ ವಾಯುವ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಶಿವಸೇನೆ(ಯುಬಿಟಿ) ಅಮೂಲ್ ಕೀರ್ತಿಕಾರ್ ಅವರನ್ನು ಘೋಷಿಸಿರುವುದು ಒಕ್ಕೂಟ ಧರ್ಮದ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಮುಂಬೈ ವಾಯುವ್ಯ ಕ್ಷೇತ್ರದ ಹಾಲಿ ಸಂಸದರಾಗಿರುವ ಗಂಜನ್ ಕೀರ್ತಿಕಾರ್ ಅವರ ಪುತ್ರರಾಗಿರುವ ಅಮೂಲ್ ಕೀರ್ತಿಕಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ವ್ಯಕ್ತಿ ಕೋವಿಡ್ 19 ಸಾಂಕ್ರಮಿಕದ ಸಂದರ್ಭದಲ್ಲಿ ವಲಸಿಗರಿಗೆ ಕಿಚಡಿ ವಿತರಿಸುವಲ್ಲಿ ಅಕ್ರಮವೆಸಗಿದ್ದರು. ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿ ವಿಚಾರಣೆಗೊಳಪಡಿಸಿತ್ತು. ಶಿವಸೇನೆಯು ಕಿಚಡಿ ಕಳ್ಳನಿಗೆ ಟಿಕೆಟ್ ನೀಡಿದೆ. ಕಿಚಡಿ ಕಳ್ಳ ಅಭ್ಯರ್ಥಿಗಳೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಸಂಜಯ್ ನಿರುಪಮ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು
ಮುಂಬೈನ ಆರು ಲೋಕಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಶಿವಸೇನೆ ಯುಬಿಟಿ ಸ್ಪರ್ಧಿಸುತ್ತದೆ. ದಾನದ ರೀತಿಯಲ್ಲಿ ಒಂದು ಕ್ಷೆತ್ರವನ್ನು ಕಾಂಗ್ರೆಸ್ಗೆ ನೀಡಲಾಗಿದೆ. ಏಕಪಕ್ಷೀಯ ನಿರ್ಧಾರವಾಗಿರುವ ಇದು ಮುಂಬೈನಲ್ಲಿ ಕಾಂಗ್ರೆಸ್ಅನ್ನು ನಾಶಪಡಿಸುವ ಉದ್ದೇಶ ಹೊಂದಿದೆ ಎಂದು ಸಂಜಯ್ ನಿರುಪಮ್ ತಿಳಿಸಿದ್ದಾರೆ.
ಶಿವಸೇನೆ ತೆಗೆದುಕೊಂಡಿರುವ ಅತಿರೇಕದ ನಿಲುವಿನಿಂದ ಕಾಂಗ್ರೆಸ್ಗೆ ದೊಡ್ಡ ರೀತಿಯಲ್ಲಿ ನಷ್ಟ ಉಂಟಾಗಲಿದೆ. ಇದಕ್ಕೆ ಕಾಂಗ್ರೆಸ್ ನಾಯಕರು ಮಧ್ಯಸ್ಥಿಕೆ ವಹಿಸಬೇಕೆಂದು ಬಯಸುತ್ತೇನೆ. ಇಲ್ಲದಿದ್ದರೆ ಒಕ್ಕೂಟವನ್ನು ಮುರಿದುಕೊಂಡು ಪಕ್ಷವನ್ನು ಉಳಿಸಬೇಕಾಗಿದೆ. ಈ ನಿರ್ಧಾರವು ಕಾಂಗ್ರೆಸ್ಗೆ ಸ್ವಯಂ ವಿನಾಶಕಾರಿಯಾಗಿ ಮಾರ್ಪಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ
ಲೋಕಸಭೆ ಚುನಾವಣೆಗೆ ಉದ್ಧವ್ ಠಾಕ್ರೆ ಬಣದ ಶಿವಸೇನಾ ತನ್ನ 17 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.ರಾಜ್ಯದ 48 ಕ್ಷೇತ್ರಗಳಲ್ಲಿ ಶಿವಸೇನಾ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.