- ಇಡಬ್ಲ್ಯುಎಸ್ ಮೀಸಲಾತಿ ಕುರಿತು ಮರುಪರಿಶೀಲನೆ ಅರ್ಜಿ ಮೇ 9ಕ್ಕೆ ವಿಚಾರಣೆ
- ಮೀಸಲಾತಿ ವಿರೋಧಿಸಿ ತೀರ್ಪು ನೀಡಿದ್ದ ನ್ಯಾಯಮೂರ್ತಿ ರವೀಂದ್ರ ಭಟ್
ಆರ್ಥಿಕ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಮೀಸಲಾತಿ ಸಂಬಂಧದ ತೀರ್ಪು ಮರುಪರಿಶೀಲನೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಆರ್ಥಿಕ ದುರ್ಬಲ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ 10 ಮೀಸಲಾತಿ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆ ಮೂಲಕ ಸುಪ್ರೀಂ ಕೋರ್ಟ್ ಸಂವಿಧಾನದ 103ನೇ ವಿಧಿಯ ತಿದ್ದುಪಡಿ ಹೇಳುವ ಇಡಬ್ಲ್ಯುಎಸ್ ಮೀಸಲಾತಿ ಸಿಂಧುತ್ವವನ್ನು ಮಾನ್ಯ ಮಾಡಿತ್ತು.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ. ಇಡಬ್ಲ್ಯುಎಸ್ ಮೀಸಲಾತಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಮೇ 9ರಂದು ನಿಗದಿಪಡಿಸಲಾಗಿದೆ.
ಕಳೆದ ವರ್ಷ ನವೆಂಬರ್ 7ರಂದು ಮುಖ್ಯ ನ್ಯಾಯಮೂರ್ತಿಯಾಗಿದ್ದ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಅವರ ಐವರು ಸದಸ್ಯರ ಪೀಠ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ಸಂಬಂಧ ವಿಚಾರಣೆ ನಡೆಸಿತ್ತು.
ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ನೀಡುವ ಸಂವಿಧಾನದ 103ನೇ ವಿಧಿಯ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿತ್ತು.
ಸಂವಿಧಾನದ ಈ ತಿದ್ದುಪಡಿಯನ್ನು 3:2ರ ಬಹುಮತದ ಮೂಲಕ ಮಾನ್ಯ ಮಾಡಿತು. ಈ ತಿದ್ದುಪಡಿಯು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ಮೂವರು ನ್ಯಾಯಮೂರ್ತಿಗಳು ಮೀಸಲಾತಿಯನ್ನು ಎತ್ತಿಹಿಡಿದರು. ಆದರೆ ನ್ಯಾ.ರವೀಂದ್ರ ಭಟ್ ಅವರು ಮೀಸಲಾತಿ ವಿರುದ್ಧ ತೀರ್ಪು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? 60 ಲಕ್ಷ ಶಿಶುಗಳಿಗೆ ಕ್ಯಾಲರಿಯುಕ್ತ ಆಹಾರವಿಲ್ಲ ಎಂದ ‘ದಿ ಲ್ಯಾನ್ಸೆಟ್’ ವರದಿ
ಆರ್ಥಿಕ ದುರ್ಬಲ ವರ್ಗದವರಿಗೆ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಮರುಪರಿಶೀಲಿಸುವಂತೆ ಡಿಎಂಕೆ ಸೇರಿ ಇತರರು ಅರ್ಜಿ ಸಲ್ಲಿಸಿದ್ದರು. ಇಡಬ್ಲ್ಯುಎಸ್ ಮೀಸಲಾತಿ ಕುರಿತು ತೀರ್ಪು ಪ್ರಶ್ನಿಸಿ ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಜಯ ಠಾಕೂರ್ ಮತ್ತೊಂದು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.