- ಗೌತಮ್ ನವಲಕ ಗೃಹಬಂಧನ ಅರ್ಜಿಯ ವಿಚಾರಣೆ
- ಎಲ್ಗರ್ ಪರಿಶದ್- ಮಾವೋವಾದಿ ಸಂಪರ್ಕ ಪ್ರಕರಣ
ಎಲ್ಗರ್ ಪರಿಶದ್– ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಗೃಹ ಬಂಧನದಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಕ ಅವರನ್ನು ಮುಂಬೈನ ಸಾರ್ವಜನಿಕ ಗ್ರಂಥಾಲಯದಿಂದ ಇತರ ಸ್ಥಳಕ್ಕೆ ವರ್ಗಾಯಿಸಬೇಕು ಎನ್ನುವ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ಮಾಡುವ ಸಾಧ್ಯತೆಯಿದೆ.
ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರ ನ್ಯಾಯಪೀಠ ಏಪ್ರಿಲ್ 28ರಂದು ಸಿಬಿಐಗೆ ಪ್ರತಿಕ್ರಿಯೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಿತ್ತು. ಜೊತೆಗೆ, ಗೃಹ ಬಂಧನದ ಭದ್ರತಾ ವೆಚ್ಚವಾಗಿ ಪೊಲೀಸ್ ಸಿಬ್ಬಂದಿ ವೇತನ ಖರ್ಚುಗಳು ಸೇರಿ ರೂ 8 ಲಕ್ಷವನ್ನು ಠೇವಣಿ ಇಡುವಂತೆಯೂ ಸುಪ್ರೀಂ ಕೋರ್ಟ್ ನವಲಕರಿಗೆ ಆದೇಶಿಸಿತ್ತು.
ಸಾರ್ವಜನಿಕ ಗ್ರಂಥಾಲಯವನ್ನು ಖಾಲಿ ಮಾಡುವ ಅಗತ್ಯವಿರುವುದರಿಂದ ಗೃಹ ಬಂಧನಕ್ಕೆ ಹೊಸ ಸೌಲಭ್ಯವನ್ನು ಒದಗಿಸುವ ಅಗತ್ಯವಿದೆ ಎಂದು ನವಲಕ ಅರ್ಜಿಯಲ್ಲಿ ಹೇಳಿದ್ದರು.
ಈ ಸುದ್ದಿ ಓದಿದ್ದೀರಾ?: ಒಕ್ಕಲಿಗ ಸಮುದಾಯದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ: ನಿರ್ಮಲಾನಂದನಾಥ ಸ್ವಾಮೀಜಿ
ಕಳೆದ ವರ್ಷ ನವೆಂಬರ್ 10ರಂದು ನವಲಕ ಅವರ ಗೃಹಬಂಧನಕ್ಕೆ ಆದೇಶಿಸಿದಾಗ ಸುಪ್ರೀಂ ಕೋರ್ಟ್ ರೂ 2.4 ಲಕ್ಷವನ್ನು ವೆಚ್ಚದ ರೂಪದಲ್ಲಿ ಠೇವಣಿ ಇಡುವಂತೆ ಆದೇಶಿಸಿತ್ತು. ಅದೇ ತೀರ್ಪಿನಲ್ಲಿ ನವಿ ಮುಂಬೈ ತಲೋಜಾ ಜೈಲಿನಲ್ಲಿದ್ದ ನವಲಕರ ಅನಾರೋಗ್ಯವನ್ನು ಗಮನಿಸಿದ ನ್ಯಾಯಾಲಯ ಗೃಹ ಬಂಧನಕ್ಕೆ ಆದೇಶಿಸಿತ್ತು.
ಎಲ್ಗರ್ ಪರಿಶದ್ ಪ್ರಕರಣ ಹೊರತಾಗಿ ನವಲಕ ಅವರ ಮೇಲೆ ಇನ್ಯಾವುದೇ ಪ್ರಕರಣವಿಲ್ಲ. ಭಾರತ ಸರ್ಕಾರವೇ ಅವರನ್ನು ಮಾವೋವಾದಿಗಳ ಜೊತೆಗೆ ಸಂಪರ್ಕಕ್ಕಾಗಿ ಮಧ್ಯವರ್ತಿಯನ್ನಾಗಿ ನೇಮಿಸಿತ್ತು ಎನ್ನುವುದನ್ನು ಗಮನಿಸಿ ನ್ಯಾಯಾಲಯ ಅವರನ್ನು ಗೃಹಬಂಧನಕ್ಕೆ ವರ್ಗಾಯಿಸಲು ಒಪ್ಪಿಕೊಂಡಿತ್ತು.