ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಬೆಂಬಲಿಗರ ತಂಡದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಬೆಂಗಳೂರು ಕಂಬಳದ ಸಂಘಟಕ ಬಿ.ಗುಣರಂಜನ್ ಶೆಟ್ಟಿ ಭಾರತ ಕುಸ್ತಿ ಫೆಡರೇಷನ್ನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಮೊನ್ನೆ ನಡೆದ ಭಾರತ ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ , ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಆಪ್ತರ ಗೆಲುವು ವಿವಾದದ ಕಿಡಿಹಚ್ಚಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿದ್ದ ಕಂಬಳ ಕೂಡ ಬ್ರಿಜ್ ಭೂಷಣ್ ಸಿಂಗ್ ನೀಡಲಾದ ಆಹ್ವಾನದ ಕಾರಣಕ್ಕೆ ವಿವಾದಕ್ಕೆ ಕಾರಣವಾಗಿತ್ತು.
ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಗೆ ಆಹ್ವಾನ ನೀಡಿದವರು ಯಾರು, ಯಾವ ಕಾರಣಕ್ಕೆ ಆಹ್ವಾನ ನೀಡಲಾಗಿದೆ ಎಂಬ ಭಾರೀ ಚರ್ಚೆ ನಡೆದಾಗ, ಕಂಬಳ ಸಮಿತಿ ವಿವಾದದಿಂದ ಜಾರಿಕೊಳ್ಳುವ ಜಾಣ ನಡೆಯನ್ನು ಪ್ರದರ್ಶಿಸಿ ಕೈ ತೊಳೆದುಕೊಂಡಿತ್ತು.
ಕಂಬಳ ತುಳುನಾಡಿನ ಜಾನಪದ ಆಚರಣೆ ಹಾಗೂ ಜಾನಪದ ಕ್ರೀಡೆ. ಬೆಂಗಳೂರಿನ ವಿವಿಧ ತುಳು ಸಂಘಟನೆಗಳು, ತುಳುನಾಡು ಮೂಲದ ಸಂಘಟಕರು ಕಂಬಳ ಆಯೋಜನೆಯ ಹೊಣೆ ಹೊತ್ತುಕೊಂಡಿದ್ದರು. ಪುತ್ತೂರು ಶಾಸಕ ಹಾಗೂ ಪುತ್ತೂರು ಕಂಬಳ ಸಂಘಟಕ ಅಶೋಕ್ ರೈ ಮುಂಚೂಣಿಯ ನಾಯಕತ್ವ ವಹಿಸಿದ್ದರೆ, ಮುತ್ತಪ್ಪ ರೈ ಆಪ್ತರಾಗಿದ್ದ ಜಯ ಕರ್ನಾಟಕ ಸಂಘಟನೆಯ ಮುಖಂಡ ಬಿ.ಗುಣರಂಜನ್ ಶೆಟ್ಟಿ ಬೆಂಗಳೂರು ಕಂಬಳದ ಇನ್ನೋರ್ವ ಮುಂಚೂಣಿ ಸಂಘಟಕರಾಗಿದ್ದರು.
ಕಂಬಳ ಆಹ್ವಾನ ಪತ್ರಿಕೆ ಬಿಡುಗಡೆಯಾದ ತಕ್ಷಣ ವಿವಾದಿತ ಬ್ರಿಜ್ ಭೂಷಣ್ ಹೆಸರು ನೋಡಿದ ಕಂಬಳ ಪ್ರೇಮಿಗಳು ಆಶ್ಚರ್ಯಪಟ್ಟಿದ್ದರು. ತುಳುನಾಡು ಮೂಲದ ಜಾನಪದ ಕ್ರೀಡೆಗೆ ತುಳುನಾಡಿನೊಂದಿಗೆ ಯಾವುದೇ ಸಂಬಂಧ, ಸಂಪರ್ಕ ಇಲ್ಲದ ವಿವಾದಿತ ವ್ಯಕ್ತಿ ಬ್ರಿಜ್ ಭೂಷಣ್ಗೆ ಯಾಕೆ ಆಹ್ವಾನ ನೀಡಲಾಗಿದೆ ಎಂಬ ಚರ್ಚೆ ಕಾವೇರಿಕೊಂಡಿತ್ತು. ಮಾಧ್ಯಮಗಳಲ್ಲಿ ಈ ವಿಚಾರ ಪ್ರಸಾರಗೊಂಡಾಗ ಕಂಬಳ ಸಮಿತಿಯ ಪರವಾಗಿ ಶಾಸಕ ಅಶೋಕ್ ರೈ ಅವರು ಸ್ಪಷ್ಟೀಕರಣ ನೀಡಿ, ಸಂಘಟಕರ ಗಮನಕ್ಕೆ ತರದೇ ಆಹ್ವಾನ ಸಮಿತಿಯವರು ಬ್ರಿಜ್ ಭೂಷಣ್ ಅವರ ಹೆಸರು ಮುದ್ರಿಸಿದ್ದಾರೆ. ಆಹ್ವಾನ ಪತ್ರಿಕೆ ಮುದ್ರಿಸುವ ಉಪ ಸಮಿತಿಯವರಿಗೆ ಸಿದ್ಧಿ ಸಮುದಾಯದವರು ಒತ್ತಾಯ ಮಾಡಿದಕ್ಕೆ ಆಹ್ವಾನ ಪತ್ರಿಕೆ ಸಮಿತಿಯವರು ಬ್ರಿಜ್ ಭೂಷಣ್ ಹೆಸರು ಹಾಕಿದ್ದರು ಎಂದು ಶಾಸಕ ಅಶೋಕ್ ರೈ ಹೇಳಿಕೆ ನೀಡಿದ್ದರು. ಆದರೆ ಅಶೋಕ್ ರೈ ಅವರ ಈ ಹೇಳಿಕೆಗೆ ಸಿದ್ದಿ ಸಮುದಾಯದ ಮುಖಂಡರು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. “ನಮ್ಮ ಸಮುದಾಯಕ್ಕೂ ಬ್ರಿಜ್ ಭೂಷಣ್ಗೂ ಯಾವುದೇ ಸಂಬಂಧ ಸಂಪರ್ಕ ಇಲ್ಲ. ನಾವು ಆಹ್ವಾನಿಸಲು ಬೇಡಿಕೆ ಇರಿಸಿಲ್ಲ” ಎಂದು ಸಿದ್ಧಿ ಸಮುದಾಯದ ನಾಯಕರು ಘೋಷಿಸಿ ಕಂಬಳ ಸಂಘಟಕರಿಗೆ ಮಂಗಳಾರತಿ ಎತ್ತಿದ್ದರು.
ಇಷ್ಟೆಲ್ಲಾ ನಡೆದ ಬಳಿಕ ಬ್ರಿಜ್ ಭೂಷಣ್ ಹೆಸರು ತೆಗೆದು ಹೊಸ ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಯಿತು.
ಇರಲಿ, ಇದೆಲ್ಲ ಕೊಂಚ ಹಳೆಯ ಕಥೆ, ಎಲ್ಲರಿಗೂ ಗೊತ್ತಾಗಿದ್ದ ಕಥೆ. ಈಗ ಬ್ರಿಜ್ ಭೂಷಣ್ ಕಾರಣದಿಂದಾಗಿಯೇ ಭಾರತದ ಕುಸ್ತಿ ಪಟುಗಳು ಮತ್ತೆ ಧ್ವನಿ ಎತ್ತಿದ್ದಾರೆ. ಬ್ರಿಜ್ ಭೂಷಣ್ ಆಪ್ತ ಬಳಗವೇ ಭಾರತ ಕುಸ್ತಿ ಫೆಡರೇಷನ್ ಚುನಾವಣೆಯಲ್ಲಿ ಗೆದ್ದಿರುವುದು ಆಘಾತಕಾರಿ ಎಂದು ಒಲಿಂಪಿಯನ್ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ, ವಿನೇಶಾ ಪೋಗಟ್ ಮೊದಲಾದವರು ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಸಾಕ್ಷಿ ಮಲಿಕ್ ವಿದಾಯ ಘೋಷಿಸಿದ್ದರೆ, ಬಜರಂಗ್ ಪೂನಿಯಾ ತನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ಮೋದಿಯವರ ಮನೆಯ ಬಳಿ ಫುಟ್ಪಾತಿನಲ್ಲಿ ಇಟ್ಟು ಬಂದಿದ್ಧಾರೆ.
ನಿನ್ನೆ ಬಜರಂಗ್ ಪೂನಿಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಹೇಳಿದ ಮಾತು ಮತ್ತೆ ಮತ್ತೆ ಮಾರ್ದನಿಸುತ್ತಿದೆ. “ಕುಸ್ತಿ ಫೆಡರೇಷನ್ ಚುನಾವಣೆಗೆ ಸ್ಪರ್ಧಿಸಲು ಬ್ರಿಜ್ ಭೂಷಣ್ ಆಪ್ತರಿಗೆ ಹಾಗೂ ಅವರ ಸಂಬಂಧಿಕರಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಸರಕಾರ ನಮಗೆ ಈ ಹಿಂದೆ ಭರವಸೆ ನೀಡಿತ್ತು. ಆದರೆ ಸರಕಾರ ತನ್ನ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ” ಎಂದು ಬಜರಂಗ್ ಪೂನಿಯಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ವಿವಾದದ ಬಿಸಿಯ ನಡುವೆ ಬೆಂಗಳೂರು ಕಂಬಳಕ್ಕೂ ಬ್ರಿಜ್ ಭೂಷಣ್ಗೂ ಏನೂ ಸಂಬಂಧ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ನಿನ್ನೆಯ ಪತ್ರಿಕಾ ವರದಿಗಳನ್ನು ಗಮನಿಸಬಹುದಾಗಿದೆ. ವಿವಾದಿತ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಬೆಂಬಲಿಗರ ತಂಡದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ಬೆಂಗಳೂರು ಕಂಬಳದ ಸಂಘಟಕ ಬಿ.ಗುಣರಂಜನ್ ಶೆಟ್ಟಿ ಭಾರತ ಕುಸ್ತಿ ಫೆಡರೇಷನ್ನ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ವಿವಾದದ ಕಾರಣಕ್ಕೆ ಬ್ರಿಜ್ ಭೂಷಣ್ ಹೆಸರು ನಿನ್ನೆಯ ಮಾಧ್ಯಮದಲ್ಲಿ ಪ್ರಕಟಗೊಂಡಿದ್ದರೆ, ಫೆಡರೇಷನ್ ಪದಾಧಿಕಾರಿಯಾಗಿ ಆಯ್ಕೆಯಾದ ಕಾರಣಕ್ಕಾಗಿ ಗುಣರಂಜನ್ ಹೆಸರು ಕೂಡ ಬ್ರಿಜ್ ಭೂಷಣ್ ಹೆಸರಿನ ಪಕ್ಕವೇ ಪ್ರಕಟಗೊಂಡಿದೆ.
ಈಗ ಹೇಳಿ, ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಸಿಂಗ್ಗೆ ಆಹ್ವಾನ ನೀಡಲು ಒತ್ತಾಯಿಸಿದ್ದು ಮುಗ್ಧ ಸಿದ್ಧಿ ಸಮುದಾಯದವರೇ? ಅಥವಾ ಕಂಬಳ ಸಂಘಟಕರೇ ?
ಇದೇ ಬೆಂಗಳೂರು ಕಂಬಳಕ್ಕೆ ಮುಂಬಯಿ ಸರಣಿ ಸ್ಪೋಟದ ಅಪರಾಧಿ ಶ್ಯಾಮ್ ಕಿಶೋರ್ ಗರಕಿಪಟ್ಟಿ ಎಂಬಾತನಿಗೆ ಆಹ್ವಾನ ಕೊಟ್ಟವರಾರು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಬಹುಶಃ ಆತನ ಜೊತೆ ಕಂಬಳ ಸಮಿತಿಯ ಮುಖಂಡರೊಬ್ಬರ ಹೆಸರು ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಆ ಪ್ರಶ್ನೆಗೂ ಉತ್ತರ ಸಿಗಬಹುದೇನೋ.