ಈಶಾನ್ಯ ರಾಜ್ಯಗಳಲ್ಲಿ ಬೆಂಕಿಯೊಂದಿಗೆ ಆಟವಾಡುವುದನ್ನು ಬಿಜೆಪಿ ನಿಲ್ಲಿಸುವುದೇ?

Date:

ಮಣಿಪುರದ 90% ಭೂಮಿ ಗುಡ್ಡಗಾಡು ಪ್ರದೇಶ. ಅಲ್ಲಿ ಕೇವಲ ಪರಿಶಿಷ್ಟ ಪಂಗಡದ ಜನರಷ್ಟೇ ಭೂಮಿಯನ್ನು ಖರೀದಿಸಬಹುದು. ಒಂದು ವೇಳೆ ಮಿತೆಯಿ ಜನರು ಪರಿಶಿಷ್ಟ ಪಂಗಡ ಎಂದು ಆದಲ್ಲಿ, ಕುಕಿ ಮತ್ತು ನಾಗಾ ಪಂಗಡದವರಿಗೆ ತಮ್ಮ ಕೈಯಿಂದ ಭೂಮಿಯ ಒಡೆತನವನ್ನು ಕಸಿದುಕೊಳ್ಳುವ ಅಪಾಯ ಕಾಣಿಸಲಾರಂಭಿದೆ

ರಾಷ್ಟ್ರೀಯತೆಯ ಪರೀಕ್ಷೆ ಗಡಿಗಳಲ್ಲಿ ಆಗುತ್ತೆ. ದೇಶದ ಗಡಿಗಳು ಕೇವಲ ಭದ್ರತಾ ಪಡೆಗಳ ಶೌರ್ಯದ್ದಷ್ಟೇ ಅಲ್ಲ, ರಾಜಕೀಯ ನೇತೃತ್ವದ ತಿಳಿವಳಿಕೆಯ ಪರೀಕ್ಷೆಯನ್ನೂ ಕೇಳುತ್ತವೆ. ಕಳೆದ ವಾರ ಮಣಿಪುರದಲ್ಲಿ ಆದ ಹಿಂಸೆಯು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ನಿಯತ್ತು ಮತ್ತು ನೀತಿ ಎರಡರ ಮೇಲೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ರಾಜ್ಯದ ಸೂಕ್ಷ್ಮವಾದ ಜಾತಿವಾರು ಸಮತೋಲನವನ್ನು ನಿರ್ಲಕ್ಷಿಸಿ ತನ್ನದೇ ಆದ ರಾಜಕೀಯ ಅಜೆಂಡಾ ಹೇರುವ ಪ್ರಯತ್ನ ಈ ಗಡಿಭಾಗದ ರಾಜ್ಯಕ್ಕಷ್ಟೇ ಅಲ್ಲ, ಇಡೀ ದೇಶಕ್ಕೂ ದುಬಾರಿಯಾಗಲಿದೆ.

ಮೊದಲ ನೋಟದಲ್ಲಿ ಮಣಿಪುರದಲ್ಲಿ ಆದ ಹಿಂಸೆ ಅಲ್ಲಿನ ಎರಡು ದೊಡ್ಡ ಸಮುದಾಯಗಳಾದ ಮಿತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ಆದ ಜಾತೀಯ ಹಿಂಸೆಯಾಗಿದೆ. ಮಣಿಪುರದ ಬೆಟ್ಟಗಳಲ್ಲಿ ನೆಲೆಸಿದ ಮಿತೆಯಿ ಸಮುದಾಯ ರಾಜ್ಯದ ಬಹುಸಂಖ್ಯಾತ ಸಮುದಾಯವಾಗಿದೆ. ವೈಷ್ಣವ ಹಿಂದೂ ನಂಬಿಕೆಯ ಮಿತೆಯಿ ಸಮುದಾಯ ಜನಸಂಖ್ಯೆಯ 54% ರಷ್ಟಿದೆ ಹಾಗೂ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿದೆ. ಈಶಾನ್ಯ ಪರ್ವತ ರಾಜ್ಯಗಳಲ್ಲಿ ಇದುವೇ ದೊಡ್ಡ ಹಿಂದೂ ಸಮುದಾಯವಾಗಿದ್ದು, ಸ್ವಾಭಾವಿಕವಾಗಿಯೇ ರಾಜ್ಯದಲ್ಲಿ ಬಿಜೆಪಿಯ ಹೆಚ್ಚಿನ ಬೆಂಬಲ ಮಿತೆಯಿ ಸಮಯದಾಯಿಂದ ಬಂದಿದೆ. ಅಧಿಕೃತವಾಗಿ ಅವರಿಗೆ ಒಬಿಸಿ ಸ್ಥಾನಮಾನ ನೀಡಲಾಗಿದೆ.

ಅತ್ತ ಮಿಜೊರಂ ಮತ್ತು ಮ್ಯಾನ್ಮಾರ್ ಅಂಟಿಕೊಂಡಿರುವ ಪ್ರದೇಶಗಳಲ್ಲಿ ನೆಲೆಸಿರುವ ಕುಕಿ ಆದಿವಾಸಿ ಸಮುದಾಯದ ಸಂಖ್ಯೆ ಕೇವಲ 15%ರಷ್ಟಿದೆ. ಆದರೆ ಇಂಫಾಲದ ಕೆಲವು ಗುಡ್ಡಗಾಡು ಜಿಲ್ಲೆಗಳಲ್ಲಿ ಇವರ ಪ್ರಭಾವವಿದೆ. ಮಣಿಪುರದ ಕುಕಿ, ನೆರೆರಾಜ್ಯದ ಮಿಜೊರಾಂನ ಲುಶಾಯಿ ಮತ್ತು ಗಡಿಯಾಚೆಯ ಮ್ಯಾನ್ಮಾರ್‌ಲ್ಲಿ ನೆಲೆಸಿರುವ ಚಿನ್, ಎಲ್ಲರೂ ಒಂದೇ ಸಮಾಜದ ಜನರಾಗಿದ್ದಾರೆ, ಪರಸ್ಪರ ಸಂಬಂಧ ಹೊಂದಿದ್ದಾರೆ. ಕಳೆದ ವರ್ಷ ಚುನಾವಣೆಗಳಲ್ಲಿ ಬಿಜೆಪಿಗೆ ಕುಕಿ ಬಾಹುಳ್ಯವುಳ್ಳ ಕ್ಷೇತ್ರಗಳಲ್ಲೂ ಒಂದಿಷ್ಟು ಸಫಲತೆ ಸಿಕ್ಕಿದ್ದರೂ, ಬಿಜೆಪಿ ಸರಕಾರದ ಅನೇಕ ಕ್ರಮಗಳ ಕಾರಣದಿಂದ ಕುಕಿ ಸಮುದಾಯಕ್ಕೆ ಅದರಲ್ಲೂ, ವಿಶೇಷವಾಗಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್‍ರೊಂದಿಗೆ ಸರಿಬರುವುದಿಲ್ಲ. ಈ ರಾಜಕೀಯ ಪರಕೀಯತೆಯೇ ಕಳೆದ ವಾರ ಆದ ಹಿಂಸೆಯ ಮೂಲದಲ್ಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ವರ್ಷ ಮಣಿಪುರದ ಚುನಾವಣೆಗಳಲ್ಲಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಬಿರೇನ್ ಸಿಂಗ್ ಎರಡು ವಿಷಯಗಳ ಮೇಲೆ ಕುಕಿ ಪ್ರದೇಶಗಳಲ್ಲಿ ಕಟುವಾದ ಕ್ರಮ ಕೈಗೊಂಡರು. ಮೊದಲನೆಯದಾಗಿ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಫೀಮಿನ ಕೃಷಿ ಮತ್ತು ಡ್ರಗ್ಸ್‌ನ ಸಮಸ್ಯೆಗೆ ಸಂಬಂಧಿಸಿದೆ. ಈ ವಿಷಯದಲ್ಲಿ ಕೇಂದ್ರ ಸರಕಾರದ ಆತಂಕ ಸರಿಯಾಗಿದೆ ಹಾಗೂ ರಾಜ್ಯ ಸರಕಾರದ ಮೂಲಕ ಕ್ರಮ ಅವಶ್ಯಕವಾಗಿತ್ತು. ಆದರೆ ಮುಖ್ಯಮಂತ್ರಿಯು ಅಫೀಮಿನ ಜಮೀನುದಾರರು ಮತ್ತು ಡ್ರಗ್ ಮಾಫಿಯಾದ ವಿರುದ್ಧದ ಕಾರ್ಯಾಚರಣೆಗೆ ಕುಕಿ ಸಮುದಾಯದ ವಿರುದ್ಧದ ಯುದ್ಧದ ರೂಪ ನೀಡಿದರು. ಅವರು ಅನೇಕ ಬಾರಿ ಕುಕಿ ಆದಿವಾಸಿಗಳನ್ನು ಹೊರಗಿನ ಮತ್ತು ವಲಸಿಗರು ಎಂದು ಬಿಂಬಿಸುವ ಹೇಳಿಕೆಗಳನ್ನು ನೀಡಿದರು. ಅದರಿಂದ ಸ್ವತಃ ಬಿಜೆಪಿಯ ಕುಕಿ ಶಾಸಕರೂ ಅವರ ವಿರುದ್ಧ ಬಂಡಾಯ ಏಳುವ ಅನಿವಾರ್ಯತೆ ಸೃಷ್ಟಿಯಾಯಿತು.

ಮಣಿಪುರ ಹಿಂಸಾಚಾರ
ಮಣಿಪುರ ಗಲಭೆಯಲ್ಲಿ ಬೆಂಕಿಗಾಹುತಿಯಾದ ಬಸ್‌

ಎರಡನೆಯ ವಿಷಯ ಅರಣ್ಯಕ್ಕೆ ಸಂಬಂಧಿಸಿದ್ದು. ಅಲ್ಲಿಯೇ ಕುಕಿ ಸಮುದಾಯದ ಜನರು ನೆಲೆಸಿದ್ದಾರೆ. ಇತ್ತೀಚಿಗೆ ಕೇಂದ್ರೀಯ ಪರಿಸರ ಸಚಿವ ಭೂಪೇಂದ್ರ ಯಾದವ್‌ ಮಣಿಪುರದಲ್ಲಿ ಹೇಳಿಕೊಂಡಿದ್ದೇನೆಂದರೆ, ರಾಜ್ಯದ ಅರಣ್ಯವು ಕೇಂದ್ರೀಯ ಕಾನೂನುಗಳ ಅನುಗುಣವಾಗಿ ನಡೆಯುತ್ತವೆ ಹಾಗೂ ಸಂರಕ್ಷಿತ ವನ ಕ್ಷೇತ್ರ (ರಿಸರ್ವ್ ಫಾರೆಸ್ಟ್)ಗಳನ್ನು ತೆರವುಗೊಳಿಸಲಾಗುವುದು ಎಂದು. ಇದರಲ್ಲೂ ರಾಜ್ಯ ಸರಕಾರ ಸಂವೇದನಶೀಲವಾಗಿ ವರ್ತಿಸುವ ಬದಲಿಗೆ ಒತ್ತಾಯಪೂರ್ವಕವಾಗಿ ಹಲವಾರು ಗ್ರಾಮಗಳನ್ನು ತೆರವುಗೊಳಿಸಿತು. ಇದರಿಂದ ತಮಗೆ ತಲೆತಲಾಂತರದಿಂದ ಬಂದಿರುವ ಭೂಮಿಯಿಂದ ಹರದಬ್ಬಲಾಗುತ್ತಿದೆ ಎಂದ ಸಂದೇಹ ಕುಕಿ ಸಮುದಾಯಕ್ಕೆ ಬಂತು. ಇದಕ್ಕೆ ವಿರೋಧ ಕಾಣಿಸಿಕೊಂಡಾಗ ಮುಖ್ಯಮಂತ್ರಿಯು ಹೋಗಿ ಜನರಿಗೆ ಬೆದರಿಕೆ ಹಾಕಿದರು ಹಾಗೂ ಸ್ಥಳೀಯ ಕುಕಿ ಭೂಗತ ಉಗ್ರವಾದಿಗಳೊಂದಿಗೆ ಅನೇಕ ವರ್ಷಗಳಿಂದ ನಡೆದುಕೊಂಡ ಬಂದ ಒಪ್ಪಂದವನ್ನು ರದ್ದುಪಡಿಸುವ ಹಾಗೂ ಶಸ್ತ್ರಾಸ್ತ್ರಗಳನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದರು.

ಅತ್ತ ಕಳೆದ ಕೆಲವು ವರ್ಷಗಳಿಂದ ಮಣಿಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಣಾಮ ಹೆಚ್ಚುತ್ತಿದೆ. ಅಲ್ಲಿ ಮಿತೆಯಿ ಸಮುದಾಯವನ್ನು ಸ್ಥಳೀಯ ಪರಂಪರಾಗತ ಪರಿಶಿಷ್ಟ ಪಂಗಡ ಪರಂಪರೆಯಿಂದ ಕಡಿದು ಅವರ ಹಿಂದೂ ಅಸ್ಮಿತೆಯನ್ನು ಎಚ್ಚರಿಸುವ ಕೆಲಸ ನಡೆಯುತ್ತಿದೆ. ಬಹುತೇಕ ಮಿತೆಯಿ ಸಮುದಾಯ ಹಿಂದೂ ಆಗಿರುವುದರಿಂದ (ಅಂದ ಹಾಗೆ ಅವರಲ್ಲಿ ಪಂಗಾಲ್ ಸಮುದಾಯ ಮುಸ್ಲಿಂ ಮತ್ತು ಸಣ್ಣ ಭಾಗ ಕ್ರಿಶ್ಚಿಯನ್ನರೂ ಇದಾರೆ) ಹಾಗೂ ಹೆಚ್ಚಿನ ಕುಕಿ ಮತ್ತು ನಾಗಾ ಜನರು ಕ್ರಿಶ್ಚಿಯನ್ನರಾಗಿರುವುದರಿಂದ, ಪ್ರದೇಶದ ಜಾತೀಯ ವಿವಿಧತೆ ಮತ್ತು ಒತ್ತಡವನ್ನು ಧಾರ್ಮಿಕ ಸಂಘರ್ಷದ ಸ್ವರೂಪ ನೀಡುವ ಪ್ರಯತ್ನ ನಡೆದಿದೆ. ಯಾವ ಮಣಿಪುರದಲ್ಲಿ ಒಂದು ಕಾಲಕ್ಕೆ ನಾಗಾ ಸಮುದಾಯದೊಂದಿಗೆ ಸಂಬಂಧವಿಟ್ಟುಕೊಂಡ ರಿಶಾಂಗ್ ಕಶಿಂಗ್ ಎಲ್ಲ ಸಮುದಾಯಗಳ ಸರ್ವಮಾನ್ಯ ನಾಯಕರೆಂದು ಪರಿಗಣಿಸಲಾಗಿತ್ತು. ಅಲ್ಲಿ ಈಗ ಜಾತೀಯ ದ್ವೇಷ ಮತ್ತು ವೈಮನಸ್ಸು ಆಳವಾಗುತ್ತಿದೆ.

ಅಂದರೆ ಬಹಳ ಸಮಯದಿಂದ ಗುಂಡುಮದ್ದುಗಳು ತಯಾರಾಗುತ್ತಿದ್ದವು ಹಾಗೂ ಈಗ ಕೇವಲ ಒಂದು ಕಿಡಿಯ ಅವಶ್ಯಕತೆ ಇತ್ತು. ಈ ಕಿಡಿ ಹೈಕೋರ್ಟಿನ ಆದೇಶದಿಂದ ಹೊರಬಂದಿತು. ಅದರಲ್ಲಿ ಮಿತೆಯಿ ಸಮುದಾಯವನ್ನು ಪರಿಶಿಷ್ಟ ಪಂಗಡ ದರ್ಜೆ ನೀಡುವ ಕಾರ್ಯಸೂಚಿ ಶುರು ಮಾಡಬೇಕು ಎಂಬ ನಿರ್ದೇಶನವನ್ನು ರಾಜ್ಯ ಸರಕಾರಕ್ಕೆ ನೀಡಲಾಗಿತ್ತು. ವಿಷಯ ಹತ್ತು ವರ್ಷದ ಹಿಂದಿನದು, ಆದೇಶ ಹೈಕೊರ್ಟಿನದ್ದಾಗಿತ್ತೇ ಹೊರತು ಸರಕಾರದ್ದಲ್ಲ ಹಾಗೂ ಕೇವಲ ರಾಜ್ಯ ಸರಕಾರ ಮಾಡುವುದರಿಂದಲೇ ಯಾವ ಸಮುದಾಯಕ್ಕೂ ಪಂಗಡ ದರ್ಜೆ ನೀಡಲಾಗುವುದಿಲ್ಲ. ಆದರೆ ಜಾತಿಯ ಆತಂಕದ ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅದೇಶದಿಂದ ಜನರು ಕೆರಳಿದರು. ಅವರಿಗೆ ಅನಿಸಿದ್ದು; ಒಂದು ವೇಳೆ ಬಹುಸಂಖ್ಯಾತ ಮಿತೆಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ದರ್ಜೆ ಸಿಕ್ಕುಬಿಟ್ಟರೆ ಅವರ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರದ ಮೇಲಿನ ಹಿಡಿತ ಸಂಪೂರ್ಣವಾಗಿಬಿಡುತ್ತೆ.

ಇದರ ನೇರ ಸಂಬಂಧ ಭೂಮಿಯ ಮಾಲೀಕತ್ವದೊಂದಿಗೆ ಇದೆ. ಮಣಿಪುರದ 90% ಭೂಮಿ ಗುಡ್ಡಗಾಡು ಪ್ರದೇಶ. ಅಲ್ಲಿ ಕೇವಲ ಪರಿಶಿಷ್ಟ ಪಂಗಡದ ಜನರಷ್ಟೇ ಭೂಮಿಯನ್ನು ಖರೀದಿಸಬಹುದು. ಒಂದು ವೇಳೆ ಮಿತೆಯಿ ಜನರು ಪರಿಶಿಷ್ಟ ಪಂಗಡ ಎಂದು ಆದಲ್ಲಿ, ಕುಕಿ ಮತ್ತು ನಾಗಾ ಪಂಗಡದವರಿಗೆ ತಮ್ಮ ಕೈಯಿಂದ ಭೂಮಿಯ ಒಡೆತನವನ್ನು ಕಸಿದುಕೊಳ್ಳುವ ಅಪಾಯ ಕಾಣಿಸಲಾರಂಭಿಸಿದೆ.

ಇದನ್ನು ಓದಿ ಈ ದಿನ ಸಂಪಾದಕೀಯ | ಡಬಲ್‌ ಎಂಜಿನ್‌ ಸರ್ಕಾರ ಇರುವಲ್ಲೇ ಹೆಚ್ಚು ಗಲಭೆ ನಡೆಯುತ್ತಿರುವುದೇಕೆ?

ರಾಜ್ಯದ ಕುಕಿ ಮತ್ತು ಅದಕ್ಕಿಂತ ದೊಡ್ಡ ನಾಗಾ ಪಂಗಡ ಸಮುದಾಯವು ಈ ಆದೇಶದ ವಿರುದ್ಧ ಪ್ರತಿಭಟನೆ ಮತ್ತು ಬಂದ್ ಆಯೋಜಿಸಿದವು. ನಾಗಾ ಪ್ರದೇಶಗಳಲ್ಲಂತೂ ಈ ವಿರೋಧ ಶಾಂತಿಪೂರ್ಣವಾಗಿತ್ತು ಆದರೆ ಕುಕಿ ಪ್ರದೇಶಗಳಲ್ಲಿ ಈ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಪ್ರದರ್ಶನಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡವು. ಅದರ ಬದಲಿಗೆ ಮಿತೆಯಿ ಜನರು ಇಂಫಾಲ್ ಬೆಟ್ಟಗಾಡಿನಲ್ಲಿ ನೆಲೆಸಿರುವ ಕುಕಿ ಜನರ ಮೇಲೆ ಹಲ್ಲೆ ನಡೆಸಿದರು. ಸರಕಾರ ನೋಡುತ್ತಲೇ ಇತ್ತು, ಹಾಗೂ ಕೆಲವೇ ಗಂಟೆಗಳಲ್ಲಿ ಈ ಬೆಂಕಿ ಹರಡಿಬಿಟ್ಟಿತು. ಮಿತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಈ ಹಿಂಸಾಚಾರಕ್ಕೆ ಇರುವ ಇನ್ನೊಂದು ಆತಂಕಕಾರಿ ಅಂಶವೇನೆಂದರೆ, ಮಿತೆಯಿ ಸಮುದಾಯದ ಜನರೇ ಮಿತೆಯಿ ಕ್ರಿಶ್ಚಿಯನ್ನರ ಚರ್ಚ್ ಮೇಲೆಯೂ ದಾಳಿ ಮಾಡಿದರು. ಅಂದರೆ ಜಾತೀಯ ಹಿಂಸೆ ಈಗ ಧಾರ್ಮಿಕ ಹಿಂಸೆಯ ಬಣ್ಣ ಬಳಿದುಕೊಳ್ಳುತ್ತಿದೆ. ಕೇಂದ್ರೀಯ ಗೃಹಸಚಿವ ಮತ್ತು ಪ್ರಧಾನಮಂತ್ರಿ ಕರ್ನಾಟಕದ ಚುನಾವಣೆಗಳಲ್ಲಿ ವ್ಯಸ್ತರಾಗಿದ್ದಾರೆ. ಮಣಿಪುರದಲ್ಲಿ ಸಮಯಕ್ಕೆ ಸರಿಯಾಗಿ ಸೇನೆ ಮತ್ತು ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಿಲ್ಲ. ಅದರ ಪರಿಣಾಮವಾಗಿ, ಇಲ್ಲಿಯ ತನಕ ಅಧಿಕೃತವಾಗಿ 54 ಜನರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಅನೇಕ ತಲೆಮಾರುಗಳಿಂದ ಬಂದ ಸಂಬಂಧಗಳು ಈಗ ಹಳಸಿಬಿಟ್ಟಿವೆ. ಈ ರಕ್ತದ ಕಲೆಗಳು ಮಾಯವಾಗಲು ಇನ್ನೆಷ್ಟು ಮಳೆಗಾಲ ಕಾಣಬೇಕೋ ನಮಗೆ ಗೊತ್ತಿಲ್ಲ.

ಕಳೆದ ಎರಡು ದಿನಗಳಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡಿವೆ, ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ತರಲಾಗಿದೆ, ಭದ್ರತಾ ಪಡೆಗಳನ್ನು ಕಳುಹಿಸಲಾಗಿದೆ. ಆದರೆ ನಿಜವಾದ ಪ್ರಶ್ನೆ ರಾಜಕೀಯ ಪ್ರಶ್ನೆಯಾಗಿದೆ; ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬೆಂಕಿಯೊಂದಿಗೆ ಆಟವಾಡುವುದನ್ನು ನಿಲ್ಲಿಸುವುದೇ? ಮಣಿಪುರದಂತಹ ಪ್ರದೇಶಗಳಲ್ಲಿ ಜಟಿಲವಾದ ಮತ್ತು ಸೂಕ್ಷ್ಮವಾದ ಸಾಮಾಜಿಕ ರಚನೆಯೊಂದಿಗೆ ಆಟವಾಡುವುದನ್ನು ನಿಲ್ಲಿಸುವುದೇ? ರಾಷ್ಟ್ರಹಿತವನ್ನು ಮುಂದಿಟ್ಟು, ತನ್ನ ತಾತ್ಕಾಲಿಕ ರಾಜಕೀಯ ಸ್ವಾರ್ಥವನ್ನು ಬದಿಗಿಡುವುದೇ?

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್
+ posts

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...