ಬಿಹಾರದ ಬಾಂಕಿಪುರ ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಜನ ಸೂರಾಜ್ ಪಕ್ಷದ (JSP) ಸಂಸ್ಥಾಪಕ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಭಾರೀ ಮುನ್ನಡೆ ಸಾಧಿಸಿದ್ದಾರೆ. 59,213 ಮತಗಳೊಂದಿಗೆ 19,419 ಮತಗಳ ಮುನ್ನಡೆ ಸಾಧಿಸಿರುವ ಅವರ ಗೆಲುವು ಬಹುತೇಕ ಖಚಿತವಾಗಿದೆ. ತಮ್ಮ ಮೊದಲ ಸ್ಪರ್ಧೆಯಲ್ಲೇ ಬಿಜೆಪಿ ಭದ್ರಕೋಟೆಯನ್ನು ಭೇದಿಸಿ, ಗೆಲುವಿನ ಸವಿ ಉಣ್ಣಲು ಕಿಶೋರ್ ಸಜ್ಜಾಗಿದ್ದಾರೆ. ಇತ್ತ, ಬಿಜೆಪಿ ಹೀನಾಯವಾಗಿ ಸೋಲುತ್ತಿದ್ದು, ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಸಿನ್ಹಾ ಭಾರೀ ಹಿನ್ನಡೆ ಅನುಭವಿಸಿದ್ದಾರೆ.
ಬಿಜೆಪಿ ತನ್ನದೇ ಭದ್ರಕೋಟೆಯಲ್ಲಿ ಹೀನಾಯವಾಗಿ ಸೋಲಲು ಮತ್ತು ಕಿಶೋರ್ ಜಯಭೇರಿ ಬಾರಿಸಲು ಪ್ರಮುಖ 5 ಅಂಶಗಳನ್ನು ರಾಜಕೀಯ ವಿಶ್ಲೇಷಕರು ಪಟ್ಟಿ ಮಾಡಿದ್ದಾರೆ;
1. ಪ್ರಶಾಂತ್ ಕಿಶೋರ್ ಅವರ ವೈಯಕ್ತಿಕ ಪ್ರಭಾವ
ಚುನಾವಣಾ ತಂತ್ರಜ್ಞರಾಗಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಈ ಬಾರಿ ಸ್ವತಃ ಕಣಕ್ಕಿಳಿದದ್ದು ಚುನಾವಣೆಯ ಪ್ರಮುಖ ತಿರುವಾಯಿಗಿತ್ತು. 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 238 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಜನ ಸೂರಾಜ್ ಪಕ್ಷಕ್ಕೆ ಒಂದು ಸ್ಥಾನವೂ ಸಿಗಲಿಲ್ಲ. ಆದರೆ, ಈ ಬಾರಿ ಕಿಶೋರ್ ಅವರು ಬಾಂಕಿಪುರದಿಂದ ತಾವೇ ಸ್ಪರ್ಧಿಸುವ ನಿರ್ಧಾರ ಕೈಗೊಂಡರು.
ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ನೀರಜ್ ಕುಮಾರ್ ಸಿನ್ಹಾ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಕಿಶೋರ್ ಅವರ ಜನಪ್ರಿಯತೆ ಮತ್ತು ರಾಜಕೀಯ ವ್ಯಕ್ತಿತ್ವದ ಎದುರು ಬಿಜೆಪಿ ಅಭ್ಯರ್ಥಿ ಹಿನ್ನಡೆ ಅನುಭವಿಸಬೇಕಾಯಿತು ಎನ್ನಲಾಗುತ್ತಿದೆ.
2. ಬದಲಾವಣೆಯ ಪರ ಜನಮನ
ಬಾಂಕಿಪುರ ಬಿಜೆಪಿ ಭದ್ರಕೋಟೆ ಎಂಬ ಗುರುತಿದ್ದರೂ, ಈ ಬಾರಿ ಮತದಾರರಲ್ಲಿ ಬದಲಾವಣೆಯ ಮನೋಭಾವ ಸ್ಪಷ್ಟವಾಗಿ ಕಂಡುಬಂದಿದೆ. ಅನೇಕ ಮತದಾರರು ಪ್ರಶಾಂತ್ ಕಿಶೋರ್ ಅವರನ್ನು ಉತ್ತಮ ಮತ್ತು ಜನಪರ ಅಭ್ಯರ್ಥಿಯಾಗಿ ಪರಿಗಣಿಸಿದ್ದಾರೆ.
ಪ್ರಚಾರದ ವೇಳೆ ಕಿಶೋರ್ ಈ ಚುನಾವಣೆಯನ್ನು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಆಡಳಿತದ ಕುರಿತು ಜನಾಭಿಪ್ರಾಯದ ಸಂಗ್ರಹವೆಂದು ಬಣ್ಣಿಸಿದ್ದರು. ‘ಕೋಟೆಯನ್ನು ನಿರ್ಮಿಸುವುದು ರಾಜಕೀಯ ಪಕ್ಷವಲ್ಲ, ಜನರು’ ಎಂದು ಹೇಳುವ ಮೂಲಕ ಬಿಜೆಪಿ ಅಹಂಕಾರವನ್ನು ಟೀಕಿಸಿದ್ದರು.
3. ಬಿಜೆಪಿ – ಆರ್ಜೆಡಿ ಮತಬ್ಯಾಂಕ್ನಲ್ಲಿ ಬಿರುಕು
ಕಿಶೋರ್ ಅವರ ಮುನ್ನಡೆಗೆ ಬಿಜೆಪಿ ಮತ್ತು ಆರ್ಜೆಡಿ ಎರಡೂ ಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್ನಲ್ಲಿ ಕಂಡುಬಂದ ಬಿರುಕು ಕೂಡ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ಪ್ರಬಲ ಸಮುದಾಯಗಳು ಮಾತ್ರ ಬಹುತೇಕ ಬಿಜೆಪಿಯೊಂದಿಗೇ ಉಳಿದಿದ್ದರೆ, ಇತರ ಹಿಂದುಳಿದ ವರ್ಗಗಳ (OBC) ಕೆಲವು ಮತಗಳು ಕಿಶೋರ್ ಕಡೆಗೆ ವಾಲಿವೆ. ಅಂತೆಯೇ, ಆರ್ಜೆಡಿಯ ಮುಸ್ಲಿಂ–ಯಾದವ ಮತಬ್ಯಾಂಕ್ನಲ್ಲಿಯೂ ವಿಭಜನೆ ಕಂಡುಬಂದಿದ್ದು, ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಕಿಶೋರ್ ಅವರಿಗೆ ಇದೆ ಎಂಬ ನಂಬಿಕೆಯಿಂದ ಕೆಲ ಮುಸ್ಲಿಂ ಮತದಾರರು ಅವರತ್ತ ಒಲವು ತೋರಿದ್ದಾರೆ.
4. ವಿಷಯಾಧಾರಿತ ಪ್ರಚಾರ
ಪ್ರಶಾಂತ್ ಕಿಶೋರ್ ತಮ್ಮ ಚುನಾವಣಾ ಪ್ರಚಾರದಲ್ಲಿ ಶಿಕ್ಷಣ, ಉದ್ಯೋಗ, ನಾಗರಿಕ ಸೌಲಭ್ಯಗಳು ಸೇರಿದಂತೆ ಜನಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದ್ದರು.
ಜಾತಿ ಮತ್ತು ಧರ್ಮದ ಸಾಂಪ್ರದಾಯಿಕ ರಾಜಕೀಯದಿಂದ ದೂರ ಉಳಿದ ಕಿಶೋರ್, ಅಭಿವೃದ್ಧಿ ಮತ್ತು ಆಡಳಿತದ ಪ್ರಶ್ನೆಗಳನ್ನು ಮುಂದಿಟ್ಟರು. ಮತ್ತೊಂದೆಡೆ ಬಿಜೆಪಿ ಪ್ರಚಾರದಲ್ಲಿ ನಿತಿನ್ ನಬೀನ್ ಅವರೊಂದಿಗೆ ಕ್ಷೇತ್ರದ ಭಾವನಾತ್ಮಕ ಸಂಬಂಧಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಆದರೆ, ಭವಿಷ್ಯದ ಅಭಿವೃದ್ಧಿ ಕುರಿತು ಸ್ಪಷ್ಟ ಯೋಜನೆಯನ್ನು ಮುಂದಿಡುವಲ್ಲಿ ಬಿಜೆಪಿ ವಿಫಲವಾಯಿತು.
5. ಜನ ಸುರಾಜ್ ಪಕ್ಷದ ಪರಿಣಾಮಕಾರಿ ಚುನಾವಣಾ ತಂತ್ರ
ಪ್ರಚಾರದಲ್ಲಿ ಪ್ರಶಾಂತ್ ಕಿಶೋರ್ ದೊಡ್ಡ ಸಾರ್ವಜನಿಕ ಸಭೆಗಳಿಗಿಂತಲೂ ಬಡಾವಣೆ ಮಟ್ಟದ ಸಭೆಗಳು, ಮನೆಮನೆ ಸಂಪರ್ಕ ಹಾಗೂ ನೇರ ಜನಸಂವಾದಕ್ಕೆ ಹೆಚ್ಚು ಆದ್ಯತೆ ನೀಡಿದರು. ಈ ತಂತ್ರದಿಂದ ಬಿಜೆಪಿಯ ಸಾಂಪ್ರದಾಯಿಕ ಸಾಮಾಜಿಕ ಸಮೀಕರಣವನ್ನು ಭೇದಿಸುವಲ್ಲಿ ಅವರು ಯಶಸ್ವಿಯಾದರು. ಜೊತೆಗೆ ಸ್ಥಳೀಯ ಬಿಜೆಪಿ ಘಟಕದೊಳಗಿನ ಅಸಮಾಧಾನ ಮತ್ತು ಒಳಜಗಳಗಳ ಲಾಭವನ್ನೂ ಪಡೆದುಕೊಂಡರು.



