- ಶನಿವಾರ ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಿ, ಆದೇಶ ಹೊರಡಿಸಲಾಗುವುದು
- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಲ್ಲರಿಗೂ ಧನ್ಯವಾದ
ಚುನಾವಣೆಗೂ ಮೊದಲು ಕಾಂಗ್ರೆಸ್ ಜನರಿಗೆ ಕೊಟ್ಟ ಐದು ಗ್ಯಾರಂಟಿಗಳನ್ನೂ ಇವತ್ತೇ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಕೊಡುವ ಮೂಲಕ ಆದೇಶ ಹೊರಡಿಸಿ, ಜಾರಿಗೊಳಿಸಲಾಗುವುದು. ಇದು ಕನ್ನಡಿಗರಿಗೆ ಹೊಸ ಸರ್ಕಾರ ನೀಡುವ ವಾಗ್ದಾನ, ಅದನ್ನು ಮಾಡಿಯೇ ತೀರುತ್ತೇವೆ” ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತವನ್ನು ನೀಡುತ್ತೇವೆ. ಜನ ಬದಲಾವಣೆ ಬಯಸಿದ್ದಾರೆ ಎಂದರು.
“ಜೊತೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಹಿಂದೆಯೂ ಈಡೇರಿಸಿ ನುಡಿದಂತೆ ನಡೆಸಿದ್ದೇವೆ. ಈ ಬಾರಿಯೂ ಐದು ವರ್ಷಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ” ಎಂದು ಹೇಳಿದರು.
“ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಸಿಕ್ಕಿರುವ ಜಯ, ಇದು ನಾಡಿನ ಏಳು ಕೋಟಿ ಕನ್ನಡಿಗರಿಗೆ ಸಿಕ್ಕಿರುವ ಜಯ. ನಾಡಿನ ಜನರ ಆಶೀರ್ವಾದದಿಂದ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭವಾಯಿತು. ಜೊತೆಗೆ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ ರಾಷ್ಟ್ರ ನಾಯಕರು ಪ್ರಚಾರ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸರ್ಕಾರ | ಪ್ರಮಾಣವಚನ ಸ್ವೀಕರಿಸಿದವರು ಯಾರ ಹೆಸರಿನಲ್ಲಿ ಪ್ರಮಾಣ ಮಾಡಿದರು?
“ನಾಡಿನ ಸಾಹಿತಿಗಳು, ಚಿಂತಕರು, ಸಂಘಟನೆಗಳ ನಾಯಕರು ಸಹಕಾರ ನೀಡಿದ್ದಾರೆ. ರಾಜ್ಯದ ಮಹಿಳೆಯರು, ಯುವಕರು, ರೈತರು, ಕಾರ್ಮಿಕರಿಗೆ ಧನ್ಯವಾದ ಹೇಳಲೇ ಬೇಕು. ವಿಶೇಷವಾಗಿ ಕನ್ನಡ ನಾಡಿನ ಎಲ್ಲ ಜನರಿಗೆ ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.