- ವಿಜಯ ಚೌಕ್ನಲ್ಲಿ ಕಾಂಗ್ರೆಸ್ ಸೇರಿ ಪ್ರತಿಪ`ಕ್ಷಗಳ ಪ್ರತಿಭಟನೆ
- ರಾಹುಲ್ ಗಾಂಧಿಗೆ 2 ವರ್ಷ ಜೈಲು ವಿಧಿಸಿರುವ ಸೂರತ್ ಕೋರ್ಟ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅಮಾನತುಗೊಳಿಸಿರುವುದು ಪ್ರತಿಪಕ್ಷಗಳನ್ನು ಒಂದೇ ವೇದಿಕೆಗೆ ಕರೆತಂದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಜೊತೆ ಇತರ ಅನೇಕ ಪ್ರತಿಪಕ್ಷಗಳು ಒಗ್ಗೂಡಿವೆ.
ಅದಾನಿ ಹಗರಣವನ್ನು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲು ಆಗ್ರಹಿಸಿ ದೆಹಲಿಯ ವಿಜಯ ಚೌಕ್ನಲ್ಲಿ ಕಾಂಗ್ರೆಸ್ ಹಾಗೂ ಇತರ ಎಡ ಪಕ್ಷಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು. ಈ ವೇಳೆ ಪೊಲೀಸರು ಪ್ರತಿಪಕ್ಷಗಳ ನಾಯಕರನ್ನು ಬಂಧಿಸಿದರು. ದೆಹಲಿ ಪೊಲೀಸ್ ವಾಹನದಲ್ಲಿ ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ನಾಯಕರು ಇರುವ ವಿಡಿಯೋವನ್ನು ಪಕ್ಷ ಹಂಚಿಕೊಂಡಿದೆ.
2019ರ ಲೋಕಸಭೆ ಚುನಾವಣೆಗೆ ಪ್ರಚಾರದ ವೇಳೆ ಕೋಲಾರದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ ಸಂಬಂಧ ಮಾರ್ಚ್ 23 ರಂದು ಸೂರತ್ ನ್ಯಾಯಾಲಯ ರಾಹುಲ್ ಅವರನ್ನು ತಪ್ಪಿತಸ್ಥ ಎಂದು ಕರೆದು 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಗಂಟೆಗಳ ನಂತರ ವಿಜಯ ಚೌಕ್ನಲ್ಲಿ ಪ್ರತಿಭಟನಾ ಮೆರವಣಿಗೆಗೆ ಕಾಂಗ್ರೆಸ್ ಕರೆ ನೀಡಿತ್ತು.
ಮಾರ್ಚ್ 24 ರಂದು ರಾಹುಲ್ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಬಳಿಕ ಅನೇಕ ಪ್ರತಿಪಕ್ಷಗಳ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮುಂದಿನ ಹೋರಾಟದ ಕುರಿತು ಚರ್ಚೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರ ಅನರ್ಹತೆ ಪ್ರತಿಪಕ್ಷಗಳನ್ನು ಮೌನವಾಗಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಇದಕ್ಕಾಗಿ ಕಾಂಗ್ರೆಸ್ ನಾಯಕರು ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂಬ ಬ್ಯಾನರ್ಅನ್ನು ಸಂಸತ್ತಿನ ಆವರಣದಲ್ಲಿ ಪ್ರದರ್ಶಿಸಿದರು. ಕೆಲವು ಪಕ್ಷಗಳು ಅದಾನಿ ಹಗರಣ ತನಿಖೆಗೆ ಜೆಪಿಸಿ ರಚಿಸಬೇಕು ಎಂದು ಒತ್ತಾಯಿಸಿದವು. ದೆಹಲಿ ಪೊಲೀಸರ ವಾಹನದಲ್ಲಿದ್ದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ನಾಯಕರು ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗರ್ಹಿ ಹಾಗೂ ಇತರರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಬಹುತೇಕ ಪ್ರತಿಪಕ್ಷಗಳು ವಿಜಯ ಚೌಕ್ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ರಾಹುಲ್ ಅವರಿಗೆ ಶಿಕ್ಷೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.
“ಪ್ರಧಾನಿ ನರೇಂದ್ರ ಮೋದಿ ಜನರಿಂದ ಯಾವುದೋ ವಿಚಾರ ಮುಚ್ಚಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ, ವಿಜಯ್ ಮಲ್ಯ ಮೊದಲಾದವರು ಕೋಟ್ಯಂತರ ರೂಪಾಯಿ ದೋಚಿ ದೇಶದಿಂದ ಓಡಿಹೋಗಿದ್ದಾರೆ. ಅಂತಹವರ ಬಗ್ಗೆ ಮೊದಿ ಮೌನವಾಗಿದ್ದಾರೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಜಯ ಚೌಕ್ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
“ಕಾಂಗ್ರೆಸ್ ಯಾವಾಗಲೂ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ನಿಂತಿದೆ ಹಾಗೂ ಹೋರಾಡಿದೆ. ಮನುವಾದದಲ್ಲಿ ನಂಬಿಕೆ ಇರಿಸಿರುವ ಜನ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಾರೆ” ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.