ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ, ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಆದರೆ ಈಗ, ಹಲ್ಲೆಗೊಳಗಾಗಿ ದೂರು ನೀಡಿದ್ದ ಯುವಕನೇ ಸೃಷ್ಟಿಸಿರುವ ಕಟ್ಟುಕಥೆ ಎಂಬ ಮಾತು ಕೇಳಿಬಂದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರಿಗೂ ಕೂಡ ತನಿಖೆ ನಡೆಸಿದಾಗ ಎಲ್ಲವೂ ಕಟ್ಟುಕಥೆ ಎಂಬುದು ಬಯಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಮೈಸೂರಿನ ಪೊಲೀಸರು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಲೋಕಸಭಾ ಚುನಾವಣೆಯ ಹೊತ್ತಲ್ಲೇ ಪ್ರಚಾರಗಿಟ್ಟಿಸಿಕೊಳ್ಳುವುದಕ್ಕಾಗಿ ಹಾಗೂ ತನ್ನ ಹಾಡಿನ Views ಹೆಚ್ಚಾಗಲು ಈ ರೀತಿಯ ನಾಟಕವಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ಯೂಟ್ಯೂಬರ್ ರೋಹಿತ್ ಅಲಿಯಾಸ್ ಲಕ್ಷ್ಮೀ ನಾರಾಯಣ ಎಂಬಾತ, “ನಾನು ಕಳೆದ ವಾರ ಮೋದಿ ಕುರಿತಾಗಿ ಆರ್ ಆರ್ ಫಿಲಂ ಕಂಪೆನಿ ಎಂಬ ಯೂಟ್ಯೂಬ್ ಚಾನೆಲ್ಗೆ ಹಾಡು ಮಾಡಿದ್ದೆ. ನಾನು ಜನರ ಜೊತೆ ಈ ಹಾಡು ತೋರಿಸಿ ಚಾನೆಲ್ ಸಬ್ಸ್ಕ್ರೈಬ್ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ. ಏಪ್ರಿಲ್ 19ರ ಮಧ್ಯಾಹ್ನ 12 ಗಂಟೆಗೆ ನಾನು ಮೈಸೂರಿನ ಸರ್ಕಾರಿ ಗೆಸ್ಟ್ ಹೌಸ್ ಪಾರ್ಕ್ನಲ್ಲಿ ಕುಳಿತುಕೊಂಡಿದ್ದಾಗ ಒಬ್ಬ ಹುಡುಗ ಬಂದಿದ್ದ. ಆತನಿಗೆ ನನ್ನ ಹಾಡು ತೋರಿಸಿದಾಗ ಆತ ಹಾಡು ಚೆನ್ನಾಗಿದೆ ಎಂದು ಹೇಳಿ, ಬನ್ನಿ ನಾನು ನನ್ನ ಸ್ನೇಹಿತರಿಗೂ ತೋರಿಸುತ್ತೇನೆ ಎಂದು ನನ್ನನ್ನು ಆತನ ಸ್ನೇಹಿತರ ಬಳಿ ಕರೆದುಕೊಂಡು ಹೋದ. ಈ ವೇಳೆ ಅವರು ಮೋದಿ ಬಗ್ಗೆ ಹಾಡು ಮಾಡ್ತೀಯಾ ಎಂದು ಪ್ರಶ್ನಿಸಿ, ಪಾಕಿಸ್ತಾನದ ಪರ, ಅಲ್ಲಾಹ್ ಪರ ಘೋಷಣೆ ಕೂಗುವಂತೆ ಒತ್ತಾಯ ಮಾಡಿದರು” ಎಂದು ತಿಳಿಸಿದ್ದ.
ಅಷ್ಟೇ ಅಲ್ಲದೇ, “ನನ್ನ ಬಟ್ಟೆ ಹರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸಿಗರೇಟ್ ಅಲ್ಲಿ ಕೂಡ ಸುಟ್ಟಿದ್ದಾರೆ. ಬಿಯರ್ ಬಾಟಲಿಯಲ್ಲಿ ನನಗೆ ಹಲ್ಲೆ ನಡೆಸಿದ್ದಾರೆ. ನನಗೆ ಅವರು ಮುಸ್ಲಿಮ್ ಹುಡುಗರು ಅಂತ ತಾಯಾಣೆ ಗೊತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದ. ಅದೇ ರೀತಿಯಲ್ಲಿ ಪೊಲೀಸರಿಗೆ ನೀಡಿದ್ದ ದೂರಿನಲ್ಲೂ ಉಲ್ಲೇಖಿಸಿದ್ದ.
ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಯುವಕರು ಹಲ್ಲೆ ನಡೆಸಿದ್ದಾರೆ ಎಂದಿದ್ದ ಲಕ್ಷ್ಮೀ ನಾರಾಯಣ, ಈ ಸಂಬಂಧ ಮೈಸೂರಿನ ನಜರ್ಬಾದ್ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದ. ಹಲ್ಲೆಗೊಳಗಾಗಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದರಿಂದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೂಡ ನೀಡಿದ್ದರು.
ಈ ಬಗ್ಗೆ ಕನ್ನಡದ ಹಲವು ಮಾಧ್ಯಮಗಳು ಕೂಡ ವರದಿ ಮಾಡಿದ್ದವು. ಆ ವೇಳೆ ಕೂಡ ತಾನು ನೀಡಿದ್ದ ದೂರಿನ ಅಂಶಗಳನ್ನೇ ಮತ್ತೆ ಮತ್ತೆ ಯುವಕ ಲಕ್ಷ್ಮೀ ನಾರಾಯಣ ಹೇಳಿದ್ದ.
ಎಲ್ಲವೂ ಕಟ್ಟುಕಥೆ?
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ತನಿಖೆ ನಡೆಸಿದಾಗ ಎಲ್ಲವೂ ಕಟ್ಟುಕಥೆ ಎಂಬುದು ಬಯಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಏಪ್ರಿಲ್ 20ರಂದು ಟ್ವೀಟ್ ಮಾಡಿದ್ದ ಮೈಸೂರು ಪೊಲೀಸ್ ಕಮಿಷನರ್, “ಯೂಟ್ಯೂಬ್ ಚಾನಲ್ ಸಬ್ಸ್ಕ್ರೈಬ್ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಲಾಗಿದೆ” ಎಂದು ತಿಳಿಸಿ, ಪ್ರಕಟಣೆಯನ್ನು ಕೂಡ ಹೊರಡಿಸಿದ್ದರು.
ಯೂ ಟ್ಯೂಬ್ ಚಾನಲ್ ಸಬ್ ಸ್ಕ್ರೈಬ್ ಮಾಡುವ ನೆಪದಲ್ಲಿ ಹಲ್ಲೆ ನಡೆಸಿದ್ದ ಆರೋಪಿಗಳ ಪತ್ತೆಗೆ ಪೊಲೀಸ್ ಆಯುಕ್ತರಿಂದ ವಿಶೇಷ ತಂಡಗಳ ರಚನೆ pic.twitter.com/HmpOAIqFE8
— Commissioner of Police Mysuru (@CPMysuru) April 20, 2024
ದೂರು ಕೊಟ್ಟಿದ್ದ ಯೂಟ್ಯೂಬರ್ ರೋಹಿತ್, ದೂರಿನಲ್ಲಿ ಸಲೀಂ, ಜಾವೇದ್, ಪಾಷಾ ಹಾಗೂ ಇನ್ನಿಬ್ಬರು ಅಪರಿಚಿತರು ಸೇರಿದಂತೆ ಒಟ್ಟು ಐದು ಮಂದಿ ಇದ್ದರು ಎಂದು ಉಲ್ಲೇಖಿಸಿ ಹೆಸರನ್ನು ನೀಡಿದ್ದ. ಈ ಹಿನ್ನೆಲೆಯಲ್ಲಿ ನಜರ್ಬಾದ್ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಎಫ್ಐಆರ್ನ ಪ್ರತಿ ಈ ದಿನ.ಕಾಮ್ಗೆ ಲಭ್ಯವಾಗಿದೆ. ಆದರೆ, ಹಲ್ಲೆಗೊಳಗಾಗಿದ್ದೇನೆ ಎಂದು ಲಕ್ಷ್ಮೀ ನಾರಾಯಣ ನೀಡಿದ್ದ ಹೆಸರೆಲ್ಲವೂ ಕಾಲ್ಪನಿಕವಾಗಿತ್ತು ಎಂಬ ಸುದ್ದಿ ಹರಿದಾಡುತ್ತಿದೆ.
ಈತನೇ, ಮದ್ಯದ ಅಂಗಡಿಯೊಂದರಿಂದ ಬಿಯರ್ ಖರೀದಿಸಿದ್ದು, ಅದೇ ಬಿಯರ್ ಬಾಟಲಿಯಿಂದ ತನಗೆ ತಾನೇ ಹೊಡೆದುಕೊಂಡಿರುವ ಸಂಗತಿ ಕೂಡ ಬಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಮೈಸೂರು ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ದಿನ.ಕಾಮ್ಗೆ ಪೊಲೀಸರು ಹೇಳಿದ್ದೇನು?
ಈ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಲು ಈ ದಿನ.ಕಾಮ್ ಪ್ರಕರಣ ದಾಖಲಾಗಿದ್ದ ನಜರ್ಬಾದ್ ಪೊಲೀಸ್ ಸ್ಟೇಷನ್ನ ಸಬ್ ಇನ್ಸ್ಪೆಕ್ಟರ್ ಹಾಗೂ ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಿ ಅವರಿಗೆ ಕರೆ ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, “ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಸತ್ಯಾಂಶ ತಿಳಿದ ಬಳಿಕವಷ್ಟೇ ಅಧಿಕೃತ ಮಾಹಿತಿ ನೀಡುತ್ತೇವೆ” ಎಂದಷ್ಟೇ ತಿಳಿಸಿದ್ದಾರೆ.
ರಾಜಕೀಯಗೊಳಿಸಲು ಬಳಸಿಕೊಂಡಿದ್ದ ಬಿಜೆಪಿ
ಘಟನೆಯ ಬಳಿಕ ಯುವಕ ನೀಡಿದ್ದ ಹೇಳಿಕೆಯನ್ನು ಟ್ವೀಟ್ ಮಾಡಿ ಹಂಚಿಕೊಂಡಿದ್ದ ಬಿಜೆಪಿಯು ಲೋಕಸಭಾ ಚುನಾವಣೆಯ ಹೊತ್ತಲ್ಲೇ ಇದನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಂಡಿತ್ತು.
ಕರ್ನಾಟಕವನ್ನು @INCKarnataka ಸರ್ಕಾರವು “ಕ್ರೈಂ ಸ್ಟೇಟ್” ಆಗಿ ಬದಲಾಯಿಸಿದೆ. ಮೋದಿ ಪರ ಹಾಡು ಬರೆದು ತೋರಿಸಿದ್ದೇ ತಪ್ಪಾಯಿತು ಮತಾಂಧ ಜಿಹಾದಿ ಗೂಂಡಾಗಳು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.@siddaramaiah ಸಾಬ್, ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ?
ವಿಧಾನಸೌಧದಲ್ಲೇ ಪಾಕಿಸ್ತಾನ್ ಘೋಷಣೆ ಕೂಗಿಸಿದ್ದು ಆಯ್ತು, ಇದೀಗ… pic.twitter.com/AJsCtD7wMy
— BJP Karnataka (@BJP4Karnataka) April 19, 2024
ಏಪ್ರಿಲ್ 19ರ ಸಂಜೆ 6.39ಕ್ಕೆ ವೀಡಿಯೋ ಹಂಚಿಕೊಂಡಿದ್ದ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿತ್ತು. ತಮ್ಮ ಟ್ವೀಟ್ನಲ್ಲಿ , “ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರವು “ಕ್ರೈಂ ಸ್ಟೇಟ್” ಆಗಿ ಬದಲಾಯಿಸಿದೆ. ಮೋದಿ ಪರ ಹಾಡು ಬರೆದು ತೋರಿಸಿದ್ದೇ ತಪ್ಪಾಯಿತು ಮತಾಂಧ ಜಿಹಾದಿ ಗೂಂಡಾಗಳು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಸಿದ್ದರಾಮಯ್ಯ ಸಾಬ್, ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ? ” ಎಂದು ಪ್ರಶ್ನಿಸಿತ್ತು.
ಅಲ್ಲದೇ, “ವಿಧಾನಸೌಧದಲ್ಲೇ ಪಾಕಿಸ್ತಾನ್ ಘೋಷಣೆ ಕೂಗಿಸಿದ್ದು ಆಯ್ತು, ಇದೀಗ ಪ್ರತಿಯೊಬ್ಬ ಕನ್ನಡಿಗನೂ ಘೋಷಣೆ ಕೂಗಬೇಕೇ? ಕನ್ನಡ ಬಿಟ್ಟು ಎಲ್ಲರೂ ಉರ್ದು ಕಲಿತು, ಟಿಪ್ಪು ಭಾಷೆಯಲ್ಲೇ ಮಾತನಾಡಬೇಕೇ? ಸರ್ಕಾರದಿಂದಲೇ ಅಧಿಕೃತ ಆದೇಶ ಹೊರಡಿಸಿಬಿಡಿ, ಸುಮ್ಮನೆ ನಿಮ್ಮ ಮೌಖಿಕ ಆದೇಶಗಳಿಂದ ಜನತೆ ಗೊಂದಲಗೊಂಡು ಭಯಭೀತರಾಗಿದ್ದಾರೆ” ಎಂದು ಪೋಸ್ಟ್ ಹಾಕಿತ್ತು.
ಜೊತೆಗೆ #TalibaniCongress, #CongressFailsKarnataka ಎಂಬ ಹ್ಯಾಷ್ಟ್ಯಾಗ್ ಕೂಡ ಬಳಸಿತ್ತು. ಆ ಬಳಿಕ ರೋಹಿತ್ ಮಾಡಿದ್ದ ಮೋದಿ ಹಾಡನ್ನು ಹಲವು ಮಂದಿ ಬಿಜೆಪಿ ಬೆಂಬಲಿಗರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದರು.
ಯಾವುದಕ್ಕೂ ಈ ಪ್ರಕರಣದ ಬಗ್ಗೆ ಮೈಸೂರು ಪೊಲೀಸರು ಅಧಿಕೃತ ಹೇಳಿಕೆ ನೀಡಿದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಹೊರಬರಲಿದೆ.
ಮೊದಲು ಮನಸ್ಥಿತಿ ಬದಲಾಗಬೇಕಿದೆ.