- ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸೋಮಣ್ಣ
- ಚನ್ನಪ್ಪನಪುರ ಗ್ರಾಮಸ್ಥರಿಂದ ‘ಗೋ ಬ್ಯಾಕ್ ಸೋಮಣ್ಣʼ ಅಭಿಯಾನ
ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ಹೊಸ ತೇರು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಸಚಿವ ಸಚಿವ ವಿ ಸೋಮಣ್ಣ ವಿರುದ್ಧ ಚಾಮರಾಜನಗರ ಜಲ್ಲೆಯ ಚನ್ನಪ್ಪನಪುರ ಗ್ರಾಮಸ್ಥರು ‘ಗೋ ಬ್ಯಾಕ್ ಸೋಮಣ್ಣʼ ಅಭಿಯಾನ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಶುಕ್ರವಾರ ದೇವಾಲಯದ ಆವರಣದಲ್ಲಿ ಸಭೆ ಸೇರಿದ ಗ್ರಾಮಸ್ಥರು, ಕೊಟ್ಟ ಮಾತಿಗೆ ವಿ ಸೋಮಣ್ಣ ತಪ್ಪಿ ನಡೆದಿದ್ದಾರೆ ಆಕ್ರೋಶ ವ್ಯಕ್ತಪಡಿಸಿ, ಸಚಿವರ ವಿರುದ್ಧ ‘ಗೋ ಬ್ಯಾಕ್ ಸೋಮಣ್ಣ ಅಭಿಯಾನ ನಡೆಸಿದರು.
ವಿ ಸೋಮಣ್ಣ ಅವರ ವಿಶೇಷಾಧಿಕಾರಿ ಸ್ವಾಮಿ ಮತ್ತು ಅಭಿಮಾನಿಗಳು ಸಭೆಯಲ್ಲಿ ಭಾಗಿಯಾಗಿ, “ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸೋಮಣ್ಣ ಅವರು ಈಗಲೂ ಬದ್ಧರಿದ್ದಾರೆ. ಮೂರೂವರೆ ಕೋಟಿ ಅನುದಾನ ಬಿಡುಗಡೆ ಕೋರಿ ಪತ್ರ ಬರೆದಿದ್ದಾರೆ. ಎಲ್ಲರೂ ಸಹಕರಿಸಬೇಕು” ಎಂದು ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದರು.
ಸಚಿವರ ವಿಶೇಷಾಧಿಕಾರಿ ಮಾತಿಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, “ಸಚಿವ ಸೋಮಣ್ಣ ಅವರೇ ಖುದ್ದು ದೇವಸ್ಥಾನಕ್ಕೆ ಬಂದು ಎಲ್ಲರ ಸಮ್ಮುಖದಲ್ಲಿ ಈ ಮಾತು ಹೇಳಲಿ” ಎಂದು ಆಗ್ರಹಿಸಿದರು.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಚನ್ನಪ್ಪನಪುರ ವೀರಭದ್ರೇಶ್ವರ ಜಾತ್ರೆ ವೇಳೆ ರಥ ಮುರಿದುಬಿದ್ದಿತ್ತು. ಆ ವೇಳೆ ಸಚಿವ ವಿ ಸೋಮಣ್ಣ ಅವರ ನಿವಾಸಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಬೆಂಗಳೂರಿಗೆ ಬಂದು ಮನವಿ ಸಲ್ಲಿಸಿದ್ದರು.