ಪಟ್ಟಭದ್ರ ಹಿತಾಸಕ್ತಿ ಗುಂಪಿನ ವಿರುದ್ಧ ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದ ಬಗ್ಗೆ ಕಾಂಗ್ರೆಸ್ ಅನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಗುರುವಾರ ತಿರುಗೇಟು ನೀಡಿದ್ದು, “ನ್ಯಾಯಾಂಗವನ್ನು ರಕ್ಷಿಸುವ ಹೆಸರಿನಲ್ಲಿ ನ್ಯಾಯಾಂಗದ ಮೇಲೆ ದಾಳಿ ನಡೆಸುವ ಪ್ರಧಾನಿಯ ನಾಚಿಕೆಗೇಡಿತನವು ಬರೀ ಬೂಟಾಟಿಕೆಯಾಗಿದೆ” ಎಂದು ವಾಗ್ದಾಳಿ ನಡೆಸಿದೆ.
ʼಬೊಬ್ಬೆ ಹೊಡೆಯುವುದು, ಇತರರನ್ನು ಬೆದರಿಸುವುದು ಕಾಂಗ್ರೆಸ್ನ ಹಳೇ ಸಂಸ್ಕೃತಿʼ ಎಂಬ ಮೋದಿ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಜಯರಾಮ್ ರಮೇಶ್ ತಿರುಗೇಟು ನೀಡಿದ್ದು, “ಪಟ್ಟಭದ್ರ ಹಿತಾಸಕ್ತಿ ಗುಂಪುಗಳು” ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪ್ರಯತ್ನಿಸುತ್ತಿರುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ 600ಕ್ಕೂ ಹೆಚ್ಚು ವಕೀಲರು ಪತ್ರ ಬರೆದ ಬಳಿಕ ಈ ಹೇಳಿಕೆ ನೀಡಿದ್ದಾರೆ.
“ನ್ಯಾಯಾಂಗವನ್ನು ರಕ್ಷಿಸುವ ಹೆಸರಿನಲ್ಲಿ ನ್ಯಾಯಾಂಗದ ಮೇಲೆ ದಾಳಿಯನ್ನು ಸಂಘಟಿಸುವಲ್ಲಿ ಪ್ರಧಾನಿಯ ನಾಚಿಕೆಗೇಡಿತನವು ಬೂಟಾಟಿಕೆಯದ್ದಾಗಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
The PM’s brazenness in orchestrating and coordinating an attack on the judiciary, in the name of defending the judiciary, is the height of hypocrisy!
The Supreme Court has delivered body blows to him in recent weeks. The Electoral Bonds Scheme is but one example. The Supreme… https://t.co/R00ZRdWa7S
— Jairam Ramesh (@Jairam_Ramesh) March 28, 2024
“ಇತ್ತೀಚಿನ ವಾರಗಳಲ್ಲಿ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಚುನಾವಣಾ ಬಾಂಡ್ ಯೋಜನೆ ಕೇವಲ ಒಂದು ಉದಾಹರಣೆಯಾಗಿದೆ. ಸುಪ್ರೀಂ ಕೋರ್ಟ್ ಅವುಗಳನ್ನು ಅಸಾಂವಿಧಾನಿಕವೆಂದು ಘೋಷಿಸಿತು. ಬಿಜೆಪಿಗೆ ದೇಣಿಗೆ ನೀಡುವಂತೆ ಕಾರ್ಪೊರೇಟ್ ಕಂಪನಿಗಳಿಗೆ ಭಯ, ಬ್ಲ್ಯಾಕ್ಮೇಲ್ ಮಾಡುತ್ತಿದ್ದರೆಂಬುದು ನಿಸ್ಸಂದೇಹವಾಗಿ ಸಾಬೀತಾಗಿದೆ” ಎಂದು ಹೇಳಿದರು.
“ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಗ್ಯಾರಂಟಿ ನೀಡುವ ಬದಲು, ಪ್ರಧಾನಿ ಭ್ರಷ್ಟಾಚಾರಕ್ಕೆ ಕಾನೂನಿನ ಭರವಸೆ ನೀಡಿದ್ದಾರೆ” ಎಂದು ಆರೋಪಿಸಿದರು.
“ಪ್ರಧಾನಿಯವರು ಕಳೆದ ಹತ್ತು ವರ್ಷಗಳಲ್ಲಿ ವಿಭಜನೆ, ವಿರೂಪಗೊಳಿಸುವುದು, ವಿಷಯವನ್ನು ಬೇರೆಡೆಗೆ ತಿರುಗಿಸುವುದು ಮತ್ತು ದೂಷಿಸುವುದನ್ನು ಬಿಟ್ಟರೆ ಅವರ ಸಾಧನೆ ಶೂನ್ಯ. ಹಾಗಾಗಿ 140 ಕೋಟಿ ಮಂದಿ ಭಾರತೀಯರು ಶೀಘ್ರದಲ್ಲೇ ಅವರಿಗೆ ಸೂಕ್ತ ಉತ್ತರವನ್ನು ನೀಡಲು ಕಾಯುತ್ತಿದ್ದಾರೆ” ಎಂದು ರಮೇಶ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೋದಿ ವೈಫಲ್ಯ-4 | ಭಾರತದಲ್ಲಿ ಶೇ.5ಕ್ಕೆ ಇಳಿದಿದೆಯಾ ಬಡತನ? ಅಸಲಿಯತ್ತೇನು ಗೊತ್ತೇ?
ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಚಂದ್ರಚೂಡ್ ಅವರಿಗೆ ಪತ್ರ ಬರೆದು, ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದು, “ಪಟ್ಟಭದ್ರ ಹಿತಾಸಕ್ತಿ ಗುಂಪು” ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದರು.