ಸಕ್ಕರೆಯ ನಾಡು ಅಕ್ಕರೆಯಿಂದ ಸಕ್ಕರೆ ಹಂಚುವ ಅನ್ನದಾತರ ನೆಲ ಮಂಡ್ಯ. ರಾಷ್ಟ್ರಕವಿ ಕುವೆಂಪುರವರ ‘ನೇಗಿಲ ಕುಲದಲಡಗಿದೆ ಧರ್ಮ’ ಎನ್ನುವಂತೆ ಕಾಯಕ ಯೋಗಿಗಳು. ಮಂಡ್ಯ ಲೋಕಸಭಾ ಕ್ಷೇತ್ರ ಬಹುತೇಕ ಕೃಷಿಕರಿಂದ ಕೂಡಿದೆ.
ಮಂಡ್ಯದ ಹೋರಾಟದ ದನಿ ಎಂದಿಗೂ ಗಟ್ಟಿ, ಹೋರಾಟಕ್ಕೆ ಮತ್ತೊಂದು ಹೆಸರು ಅಂದ್ರೆ, ಅದು ಮಂಡ್ಯ. ಕಾವೇರಿ ವಿಚಾರಕ್ಕೆ ಬಂದರೆ ಮಂಡ್ಯದಲ್ಲಿ ನಡೆಯುವ ಹೋರಾಟ ಇಂಡಿಯಾ ತಿರುಗಿ ನೋಡುವಂತೆ ಮಾಡಿವೆ.
ಮಂಡ್ಯದ ಇತಿಹಾಸ ನೋಡುವಾಗ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನ್, ಕರಿಘಟ್ಟದ ನಿಮಿಷಾಂಬ, ಕೊಕ್ಕರೆ ಬೆಳ್ಳೂರು, ಮೇಲುಕೋಟೆ ಚೆಲುವ ನಾರಾಯಣ, ಶಿವಪುರದ ಸತ್ಯಾಗ್ರಹ ಸೌಧ ಪ್ರಮುಖ ಪ್ರವಾಸಿ ತಾಣಗಳು. ಅಲ್ಲದೆ, ಕೆ ಆರ್ ಎಸ್ ಅಣೆಕಟ್ಟು ಮಂಡ್ಯದ ರೈತರ ಜೀವಾಳ, ಕಾವೇರಿ ಅನ್ನದಾತರ ಬೆನ್ನೆಲುಬು.
ಮಂಡ್ಯ ಅಂದಾಗ ಬಿಎಂಶ್ರೀ, ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ, ಮೈಸೂರು ಮಲ್ಲಿಗೆ ಖ್ಯಾತಿಯ ಕೆ.ಎನ್. ನರಸಿಂಹಸ್ವಾಮಿ, ಪುತಿನ, ನಟ ಅಂಬರೀಷ್, ನಿತ್ಯ ಸಚಿವರೆಂದೆ ಖ್ಯಾತಿಯ ಶಂಕರೆ ಗೌಡ್ರು, ರೈತ ಹೋರಾಟಗಾರ ಜಿ. ಮಾದೇಗೌಡ್ರು ತಟ್ಟನೆ ನೆನಪಾಗುತ್ತಾರೆ.
ಮಂಡ್ಯ ಇದುವರೆಗೆ 21 ಜನ ಲೋಕಸಭಾ ಸದಸ್ಯರನ್ನು ಕಂಡಿದೆ.
1952, 1957, 1962, 1967ರಲ್ಲಿ ಎಂ.ಕೆ. ಶಿವನಂಜಪ್ಪ, ಕಾಂಗ್ರೆಸ್
1968 ಮತ್ತು 1971 ಎಸ್.ಎಂ.ಕೃಷ್ಣ , ಪ್ರಜಾ ಸಮಾಜವಾದಿ ಪಕ್ಷ
1972 ಮತ್ತು 1977 ಕೆ.ಚಿಕ್ಕಲಿಂಗಯ್ಯ, ಕಾಂಗ್ರೆಸ್
1980 ಎಸ್.ಎಂ. ಕೃಷ್ಣ, ಕಾಂಗ್ರೆಸ್
1984 ಕೆ.ವಿ. ಶಂಕರೆಗೌಡ, ಕಾಂಗ್ರೆಸ್
1989 ಮತ್ತು 1991 ಜಿ.ಮಾದೇಗೌಡ, ಕಾಂಗ್ರೆಸ್
1996 ಮತ್ತು 1998 ಕೃಷ್ಣ, ಜನತಾ ದಳ
1998, 1999 ಮತ್ತು 2004 ಅಂಬರೀಷ್, ಕಾಂಗ್ರೆಸ್
2009 ಚೆಲುವರಾಯ ಸ್ವಾಮಿ, ಜಾತ್ಯತೀತ ಜನತಾದಳ
2013 ರಮ್ಯಾ, ಕಾಂಗ್ರೆಸ್
2014 ಸಿ.ಎಸ್. ಪುಟ್ಟರಾಜು, ಜಾತ್ಯತೀತ ಜನತಾದಳ
2018 ಎಲ್.ಆರ್. ಶಿವರಾಮೆ ಗೌಡ, ಜಾತ್ಯತೀತ ಜನತಾದಳ
2019 ಸುಮಲತಾ, ಪಕ್ಷೇತರ
ಮಂಡ್ಯ ಲೋಕಸಭಾ ಕ್ಷೇತ್ರ ನೋಡುವುದಾದರೆ ಕಾಂಗ್ರೆಸ್ ಪಕ್ಷದ ಅಧಿಪತ್ಯ ಹೆಚ್ಚಿದೆ. ಗೆಲುವಿನ ನಾಗಾಲೋಟ ಒಂದು ಸಮಯದಲ್ಲಿ ತಡೆದಿದ್ದು ಜನತಾ ಪರಿವಾರ. ಬಳಿಕ ಜಾತ್ಯತೀತ ಜನತಾ ದಳ.
ಮಂಡ್ಯ ಲೋಕಸಭಾ ಕ್ಷೇತ್ರ ಒಟ್ಟು 17ಲಕ್ಷದ 59ಸಾವಿರದ 175 ಜನ ಮತದಾರರ ಹೊಂದಿದೆ. ಅದರಲ್ಲಿ 8 ಲಕ್ಷದ 67 ಸಾವಿರದ 652 ಪುರುಷ ಮತದಾರರು, 8 ಲಕ್ಷದ 91 ಸಾವಿರದ 355 ಮಹಿಳಾ ಮತದಾರರು, 168 ಲಿಂಗತ್ವ ಅಲ್ಪಸಂಖ್ಯಾತ ಮತದಾರರು. ಮಂಡ್ಯ ವಿಶೇಷ ಏನು ಅಂದ್ರೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿದ್ದು ಮಹಿಳೆಯರ ಮತವೇ ನಿರ್ಣಾಯಕ.
ಕಳೆದ ಬಾರಿಯ ಚುನಾವಣೆ ಅನುಕಂಪದ ಮೇಲೆ ನಡೆಯಿತು. ಸುಮಲತಾ ಅಂಬರೀಷ್ ಪಕ್ಷೇತರರಾಗಿ ಸೆರಗು ಒಡ್ಡಿ ಸ್ವಾಭಿಮಾನದ ಮಾತುಗಳಿಂದ ಗೆದ್ದು ಬಂದರು. ಆದರೆ, ಕ್ಷೇತ್ರದ ವಿಚಾರಕ್ಕೆ ಬಂದಾಗ ಜನಪರವಾದ ಯಾವುದೇ ಕೆಲಸಗಳು, ಕ್ಷೇತ್ರದ ಅಭಿವೃದ್ಧಿ, ಅಧಿಕಾರಿಗಳ ಜತೆಗಿನ ಸಭೆಗಳು ನಡೆಯಲೇ ಇಲ್ಲ. ಗೆದ್ದಿದ್ದು ಗೊತ್ತು ಕೆಲಸ ಮಾಡಿದ್ದು ಗೊತ್ತಿಲ್ಲ ಅನ್ನುವಂತೆ ಇದ್ದರು ಹಾಲಿ ಸಂಸದರು ಎನ್ನುತ್ತಾದ್ದಾರೆ ಮತದಾರರು.
ಕ್ಷೇತ್ರದ ಜನ ಹೇಳುವ ಪ್ರಕಾರ ಮತ ಕೇಳಲು ಬಂದಾಗ ನೋಡಿದ್ದು ಇದುವರೆಗೂ ನಾವು ನೋಡಲೇ ಇಲ್ಲ. ನಮ್ಮ ಕ್ಷೇತ್ರಕ್ಕೆ ಬರಲೇ ಇಲ್ಲ ಎನ್ನುತ್ತಾರೆ ಕೃಷ್ಣರಾಜ ನಗರದ ಜನ. ಮಂಡ್ಯ ಭಾಗದಲ್ಲಿ ಕೇಳಿದರೆ ಅವರಿಗೆ ಕಾರ್ಯಕ್ರಮ ಹೆಚ್ಚಾದವು ಹೊರತು ಜನ ಜೀವನ ಅಲ್ಲ, ಬಡವರ ಬದುಕು ಅಲ್ಲ ಅನ್ನುವ ಆಕ್ರೋಶ ಎಲ್ಲೆಡೆ ಕೇಳಿ ಬರುತ್ತಿದೆ.