ಮೋದಿಯವರೇ, ನಿಮ್ಮ ಯಾವುದೇ ಕುತಂತ್ರಕ್ಕೂ ನಾನು ಅಂಜಲಾರೆ: ರಾಹುಲ್ ಗಾಂಧಿ

Date:

  • 40% ಕಮಿಷನ್‌ನಲ್ಲಿ ಮೋದಿ ಪಾಲೂ ಇದೆ ಎಂದ ರಾಹುಲ್ ಗಾಂಧಿ
  • ಗುತ್ತಿಗೆದಾರರ ಪ್ರಶ್ನೆಗೆ ಉತ್ತರಿಸುವಂತೆ ಪ್ರಧಾನಿ ಮೋದಿಗೆ ಆಗ್ರಹ

ನನ್ನನ್ನು ಅನರ್ಹ ಮಾಡಿದರೆ ಭಯಪಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವಿಸಿದ್ದಾರೆ. ಆದರೆ, ನಾನು ಯಾವುದಕ್ಕೂ ಅಂಜುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೋಲಾರದಲ್ಲಿ ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯ ಕಾಂಗ್ರೆಸ್‌ ಕೋಲಾರದಲ್ಲಿ ಹಮ್ಮಿಕೊಂಡಿರುವ ಜೈ ಭಾರತ್‌ ಸತ್ಯಾಗ್ರಹ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಪ್ರಚಾರದ ಭಾಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಮಾಡಿದ ಭಾಷಣಕ್ಕಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಶಿಕ್ಷೆ ಅನುಭವಿಸಿ ಸಂಸತ್ ಸದಸ್ಯ ಸ್ಥಾನ ಕಳೆದುಕೊಂಡಿದ್ದರು. ಇದೀಗ ಹಿಂದೆ ಭಾಷಣ ಮಾಡಿದ್ದ ಸ್ಥಳದಲ್ಲಿಯೇ ಭಾನುವಾರ (ಏಪ್ರಿಲ್ 16) ಮತ್ತೆ ಭಾಷಣ ಮಾಡಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ ಹಾಗೂ ಯುವಕರಿಗೆ ನೀಡುವ ಪ್ರೋತ್ಸಾಹ ಧನದ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕು” ಎಂದು ಅವರು ಹೇಳಿದರು.

“ಪ್ರಧಾನಿ ಮೋದಿ ಅವರು ಸಾವಿರಾರು ಕೋಟಿ ರೂಪಾಯಿಯನ್ನು ಖಾಸಗಿಯವರಿಗೆ ನೀಡಿದ್ದಾರೆ. ನಾವು ಅದೇ ದುಡ್ಡನ್ನು ರಾಷ್ಟ್ರದ ಜನತೆಗೆ ನೀಡುತ್ತೇವೆ. ಮೋದಿ ಅವರು ಹೇಗೆ ತಮ್ಮ ಬಿಚ್ಚು ಮನಸ್ಸಿನಿಂದ ಅದಾನಿಗೆ ಸಹಾಯ ಮಾಡಿದರೋ, ಅದೇ ರೀತಿ ನಾವು ಬಡವರಿಗೆ ಸಹಾಯ ಮಾಡುತ್ತೇವೆ. ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ನಾವು ಮಾಡುತ್ತೇವೆ” ಎಂದು ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

“ಬಿಜೆಪಿ ಸರ್ಕಾರ ರಾಜ್ಯದಲ್ಲಿ 40% ಕಮಿಷನ್ ಬಿಟ್ಟರೆ ಯಾವ ಕೆಲಸವನ್ನೂ ಮಾಡಿಲ್ಲ. ಬಿಜೆಪಿ ಸರ್ಕಾರ ಕರ್ನಾಟಕದ ಜನರ ಹಣ ಲೂಟಿ ಮಾಡಿದೆ. ಗುತ್ತಿಗೆದಾರರ ಸಂಘ ಪ್ರಧಾನಿ ಮೋದಿಗೆ ಪತ್ರ ಬರೆದು, 40% ಭ್ರಷ್ಟಚಾರದ ಕುರಿತು ತಿಳಿಸಿತ್ತು. ಆದರೆ, ಈವರೆಗೆ ಮೋದಿಯಿಂದ ಯಾವುದೇ ಉತ್ತರ ಬಂದಿಲ್ಲ. ಇದರರ್ಥ; ಈ 40% ಕಮಿಷನ್‌ನಲ್ಲಿ ಮೋದಿ ಅವರ ಪಾಲೂ ಇದೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.

“ನಾನು ಮೋದಿ ಮತ್ತು ಅದಾನಿ ಕುರಿತು ಸಂಸತ್ತಿನಲ್ಲಿ ಪ್ರಶ್ನಿಸಿದ್ದೆ. ಮೊದಲ ಬಾರಿಗೆ ನನ್ನ ಮೈಕ್ ಆಫ್ ಮಾಡಿದರು. ನಾನು ಫೋಟೋ ತೋರಿಸಿ, ನಿಮಗೂ ಅದಾನಿಗೂ ಇರುವ ಸಂಬಂಧವೇನು ಎಂದು ಪ್ರಶ್ನಿಸಿದ್ದೆ. ಭಾರತದ ಏರ್‌ಪೋರ್ಟ್‌ ನಿಯಮಗಳನ್ನು ಬದಲಿಸಿ ಮೋದಿ ಸರ್ಕಾರ ಅದಾನಿಗೆ ಸಹಾಯ ಮಾಡಿದೆ. ಯಾಕೆ ಹೀಗೆ ಮಾಡಿದ್ದೀರಿ ಅನ್ನೋದು ನನ್ನ ಪ್ರಶ್ನೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಸಿಬಿಐ ವಿಚಾರಣೆ ಗೌರವಿಸುತ್ತೇನೆ ಎಂದ ಅರವಿಂದ್‌ ಕೇಜ್ರಿವಾಲ್

“ಪ್ರಧಾನಿ ಹೋದ ದೇಶಗಳಲ್ಲೆಲ್ಲಾ ಅದಾನಿಗೆ ಗುತ್ತಿಗೆ ಸಿಕ್ಕಿವೆ. ಅದಾನಿಯ ಶೆಲ್‌ ಕಂಪನಿಯಲ್ಲಿರುವ 20 ಸಾವಿರ ಕೋಟಿ ಯಾರದು ಎನ್ನುವುದು ನನ್ನ ಪ್ರಶ್ನೆ. ಇಡೀ ಇತಿಹಾಸದಲ್ಲಿ ಸರ್ಕಾರವೇ ಸಂಸತ್ತು ನಡೆಸಲು ಬಿಡದೆ ಇರುವುದು ಇದೇ ಮೊದಲು. ಇದಾದ ನಂತರ ಕೇಂದ್ರ ಸಚಿವರು ಸುಳ್ಳು ಪ್ರಚಾರ ಮಾಡಿದ್ದಾರೆ” ಎಂದು ಕಿಡಿಕಾರಿದರು.

“ನಾನು ಲೋಕಸಭಾ ಸ್ಪೀಕರ್‌ಗೆ ಎರಡು ಪತ್ರ ಬರೆದಿದ್ದೆ, ಸಂಸತ್ತಿನಲ್ಲಿ ನನ್ನ ಮೇಲೆ ಆರೋಪ ಹೊರಿಸಲಾಗಿದೆ, ಅದಕ್ಕೆ ಉತ್ತರಿಸುವ ಹಕ್ಕು ನನಗೆ ಸಂಸತ್ತು ಕೊಟ್ಟಿದೆ. ಉತ್ತರ ನೀಡಲು ನನಗೆ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಸ್ಪೀಕರ್ ನನ್ನಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಮುಗುಳ್ನಕ್ಕರು. ಜೊತೆಗೆ ಹೋಗಿ ಚಹಾ ಕುಡಿಯೋಣ, ನಿಮಗೆ ಎಲ್ಲಾ ವಿವರಿಸುತ್ತೇನೆ ಎಂದರು” ಎಂದು ರಾಹುಲ್ ಗಾಂಧಿ ಟೀಕಿಸಿದರು.

“ನಾನು ಮೋದಿ-ಅದಾನಿ ಕುರಿತು ಮಾತನಾಡಬಾರದು ಎನ್ನುವ ಉದ್ದೇಶದಿಂದಲೇ ಅವರು ನನ್ನನ್ನು ಅನರ್ಹ ಮಾಡಿದ್ದಾರೆ. ನನ್ನನ್ನು ಅನರ್ಹ ಮಾಡಿದರೆ ಭಯ ಬೀಳುತ್ತೇನೆ ಎಂದು ಭಾವಿಸಿದ್ದಾರೆ. ಆದರೆ, ನಾನು ಅಂಜುವುದಿಲ್ಲ” ಎಂದು ಹೇಳಿದರು.

“ನನ್ನನ್ನು ಜೈಲಿಗೆ ಹಾಕಿ, ಅನರ್ಹ ಮಾಡಿ ನಾನು ಹಿಂದೆ ಸರಿಯುವುದಿಲ್ಲ. ಅದಾನಿ ಭ್ರಷ್ಟಾಚಾರದ ಚಿಹ್ನೆ. 21ನೇ ಶತಮಾನದ ಇತಹಾಸ ಮೂಲಭೂತ ಸೌಕರ್ಯ ಒಬ್ಬರ ಕೈಯಲ್ಲಿದೆ. ಸಾವಿರಾರು ಕೋಟಿ ಅವರ ಅಕೌಂಟ್‌ಗೆ ಬರುತ್ತಿವೆ” ಎಂದರು.

“ಅದಾನಿ ಅವರ ಶೆಲ್‌ ಕಂಪನಿಗಳಲ್ಲಿ ಚೀನಾದ ನಿರ್ದೇಶಕರಿದ್ದಾರೆ. ಈ ವಿಚಾರದಲ್ಲಿ ತನಿಖೆ ಇಲ್ಲ. ಉತ್ರರವೂ ಇಲ್ಲ. ಮತ್ತೆ ನಿಮ್ಮನ್ನು ಗಮನ ಬೇರೆಡೆಗೆ ಸೆಳೆಯುತ್ತಾರೆ” ಎಂದು ವಾಗ್ದಾಳಿ ನಡೆಸಿದರು.

“ನನ್ನ ಮೇಲೆ ಹಿಂದುಳಿದ ವರ್ಗದವರಿಗೆ ಅವಮಾನ ಮಾಡಿದ ಆರೋಪ ಹೊರಿಸುತ್ತಿದ್ದಾರೆ. ಮೋದಿಯವರೇ, ಈ ದೇಶದಲ್ಲಿ ಇರುವ ಹಿಂದುಳಿದ ಸಮುದಾಯ, ದಲಿತರು, ಆದಿವಾಸಿಗಳ ಸಂಖ್ಯೆ ಎಷ್ಟು ಮತ್ತು ಕೇಂದ್ರದ ವಿಭಾಗಗಳಲ್ಲಿರುವ ಕಾರ್ಯದರ್ಶಿಗಳು ಯಾವ ಸಮುದಾಯಕ್ಕೆ ಸೇರಿದವರು ಎಂದು ಉತ್ತರಿಸಿ” ಎಂದು ಸವಾಲು ಎಸೆದರು.

“ಕೇಂದ್ರ ಸರ್ಕಾರದ ಸಚಿವಾಲಯಗಳ ಕಾರ್ಯದರ್ಶಿಗಳನ್ನು ಗಮನಿಸಿದಲ್ಲಿ ಹಿಂದುಳಿದ ಸಮುದಾಯ, ದಲಿತ ಹಾಗೂ ಆದಿವಾಸಿಗಳ ಸಂಖ್ಯೆ ಶೇ. 7ರಷ್ಟಿದೆ. ಆದರೆ, ಕಡಿಮೆ ಜನಸಂಖ್ಯೆ ಇರುವ ಮೇಲ್ವರ್ಗದ ಜನರು ಶೇ. 93ರಷ್ಟು ಇದ್ದಾರೆ. ಈ ಕುರಿತು ಅಂಕಿ ಅಂಶ ಬಿಡುಗಡೆಯಾದರೆ, ಯಾರು ನಿಜವಾದ ಹಿಂದೂಳಿದ ವರ್ಗಗಳ ವಿರೋಧಿ ಎಂಬುದು ಬಯಲಾಗುತ್ತದೆ” ಎಂದು ಹೇಳಿದರು.

“ಮೋದಿ ಅವರು ಉದ್ಯಮಿಗಳಿಗೆ ಬ್ಯಾಂಕ್‌ ಬಾಗಿಲು ತೆಗೆದಿದ್ದಾರೆ, ನಾವು ಜನರಿಗಾಗಿ ಬ್ಯಾಂಕ್‌ ಬಾಗಿಲು ತೆಗೆಯುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ, ಜನರ ಸರ್ಕಾರವಾಗಲಿದೆ” ಎಂದು ರಾಹುಲ್ ಗಾಂಧಿ ಹೇಳಿದರು.

“ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಹೋರಾಡುತ್ತಿದೆ. ಈ ಬಾರಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಬಿಜೆಪಿ 40% ಕಮಿಷನ್ ದುಡ್ಡಿನಿಂದ ಸರ್ಕಾರ ಉರುಳಿಸಲು ಯತ್ನಿಸಬಹುದು. 150 ಸ್ಥಾನಗಳನ್ನು ಕರ್ನಾಟಕದಲ್ಲಿ ಗೆಲ್ಲಿಸುವ ಮೂಲಕ ಭ್ರಷ್ಟ ಬಿಜೆಪಿಗೆ ಅವಕಾಶ ನೀಡಬೇಡಿ” ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿಸುವ ಪ್ರಯತ್ನ ಮಾಡಿದರು. 

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಬಿಎಂಪಿ | 3 ವರ್ಷಗಳ ಬಳಿಕ ಎಲ್‌ಇಡಿ ದೀಪ ಅಳವಡಿಕೆ ಯೋಜನೆಗೆ ಮರುಜೀವ

ಬೆಂಗಳೂರಿನಲ್ಲಿ 5 ಲಕ್ಷ ಎಲ್‌ಇಡಿ ಬೀದಿದೀಪ ಅಳವಡಿಸುವ ಯೋಜನೆಯನ್ನು ಮೂರು ವರ್ಷಗಳ...

ದೇವೇಗೌಡರ ಕುಟುಂಬವನ್ನು ‘420’ ಎನ್ನಲ್ಲ; ಪೆನ್‌ಡ್ರೈವ್ ಈ ಕುಟುಂಬದ ಆಸ್ತಿ: ಡಿ ಕೆ ಸುರೇಶ್ ವ್ಯಂಗ್ಯ

"ನಾನು ಮಾಜಿ ಪ್ರಧಾನಿಗಳ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅವರ...

ಬೆಂಗಳೂರು | ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ನಡೆಸಿದ ನಾಲ್ವರ ಬಂಧನ

ಡೆಲಿವರಿ ಬಾಯ್ ಮೇಲೆ ಬಿಯರ್ ಬಾಟಲ್ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ...

‘ಪ್ರತಿಯೊಬ್ಬ ಭಾರತೀಯರೂ ನಮ್ಮ ಮತಬ್ಯಾಂಕ್’; ಪ್ರಧಾನಿ ಮೋದಿಗೆ ಖರ್ಗೆ ಮತ್ತೊಂದು ಪತ್ರ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ...