- ದೆಹಲಿ ಆಡಳಿತ ಸಂಬಂಧ ಕೇಂದ್ರದ ಸುಗ್ರೀವಾಜ್ಞೆ ವಿರೋಧಿಸಿದ ಕೇಜ್ರಿವಾಲ್
- ರಾಜ್ಯಸಭೆಯಲ್ಲಿ ಸುಗ್ರೀವಾಜ್ಞೆ ಸೋಲಿಸುವಂತೆ ಕರೆ ನೀಡಿದ ವಿಪಕ್ಷಗಳು
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಭಾನುವಾರ (ಮೇ 21) ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ನಿವಾಸದಲ್ಲೇ ಸಭೆ ನಡೆದಿದೆ. ಈ ವೇಳೆ 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಮಣಿಸಲು ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನದ ಕುರಿತು ಸಭೆ ಕೇಂದ್ರಿತವಾಗಿತ್ತು. ಜೊತೆಗೆ ದೆಹಲಿ ಆಡಳಿತದ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ಕುರಿತೂ ಚರ್ಚೆಯಾಗಿದೆ.
ಅರವಿಂದ್ ಕೇಜ್ರಿವಾಲ್ ಅವರು ಸಭೆಯಲ್ಲಿ ದೆಹಲಿ ಆಡಳಿತ ಸೇವೆಗಳ ಮೇಲೆ ನಿಯಂತ್ರಣ ಸಾಧಿಸುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯನ್ನು ಎಲ್ಲ ಪ್ರತಿಪಕ್ಷಗಳು ವಿರೋಧಿಸಬೇಕಿದೆ ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ.
ದೆಹಲಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸದಂತೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಆದರೆ ಕೇಂದ್ರ ಸರ್ಕಾರ ಈ ಆದೇಶದ ವಿರುದ್ಧ ಸುಗ್ರೀವಾಜ್ಞೆ ತಂದಿದೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರ (ತಿದ್ದುಪಡಿ) ಸುಗ್ರೀವಾಜ್ಞೆ, 2023 ಅನ್ನು ಕೇಂದ್ರ ಸರ್ಕಾರ ಶುಕ್ರವಾರ (ಮೇ 19) ಹೊರಡಿಸಿದೆ.
ನಿತೀಶ್ ಹಾಗೂ ತೇಜಸ್ವಿ ಯಾದವ್ ಅವರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, “ನಾನು ಇಂದು ನಿತೀಶ್ ಅವರೊಂದಿಗೆ ಸಭೆ ನಡೆಸಿದ್ದೇನೆ. ದೆಹಲಿ ಆಡಳಿತಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶ ನಿರಾಕರಿಸುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ಈ ವಿಷಯದಲ್ಲಿ ನಾನು ದೆಹಲಿ ಜನರ ಪರ ನಿಲ್ಲುತ್ತೇನೆ. ನಿತೀಶ್ ಕುಮಾರ್ ಅವರು ನಮ್ಮ ಪರವಾಗಿ ಕೇಂದ್ರದ ವಿರುದ್ಧ ಹೋರಾಡಲು ಎಲ್ಲ ಪಕ್ಷಗಳನ್ನು ಒಂದುಗೂಡಿಸುತ್ತಿದ್ದಾರೆ” ಎಂದು ಹೇಳಿದರು.
“ಒಂದು ವೇಳೆ ಕೇಂದ್ರ ಸರ್ಕಾರ ಈ ಸುಗ್ರೀವಾಜ್ಞೆಯನ್ನು ಮಸೂದೆಯಾಗಿ ತಂದರೆ, ಬಿಜೆಪಿಯೇತರ ಪಕ್ಷಗಳೆಲ್ಲ ರಾಜ್ಯಸಭೆಯಲ್ಲಿ ಒಗ್ಗೂಡಿದರೆ ಬಿಜೆಪಿಗೆ ಹಿನ್ನಡೆ ಉಂಟು ಮಾಡಬಹುದು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂಬ ಸಂದೇಶವನ್ನು ಈ ಒಗ್ಗಟ್ಟು ರವಾನಿಸಬಹುದು” ಎಂದು ಕೇಜ್ರಿವಾಲ್ ಹೇಳಿದರು.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ ಅನೇಕ ಬಿಜೆಪಿಯೇತರ ನಾಯಕರು ಹಾಜರಿದ್ದರು.
ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಆಡಳಿತದ ಸೇವೆ ನಿಯಂತ್ರಿಸುವ ಕೇಂದ್ರದ ಸುಗ್ರೀವಾಜ್ಞೆಯನ್ನು ಎಲ್ಲ ಪ್ರತಿಪಕ್ಷಗಳು ವಿರೋಧಿಸಬೇಕು ಎಂದು ಶನಿವಾರ ಮನವಿ ಮಾಡಿದ್ದರು.
ರಾಜಧಾನಿಯಲ್ಲಿರುವ ಎಲ್ಲ ಗುಂಪು ಎ ಮತ್ತು ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿ ನಿರ್ಧರಿಸಲು ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ ಸ್ಥಾಪಿಸುವುದನ್ನು ಸುಗ್ರೀವಾಜ್ಞೆ ಪ್ರಸ್ತಾಪಿಸುತ್ತದೆ.
ದೆಹಲಿ ಮುಖ್ಯಮಂತ್ರಿಯವರು ಪ್ರಾಧಿಕಾರದ ನೇತೃತ್ವ ವಹಿಸುತ್ತಾರೆ. ಇದರಲ್ಲಿ ಕೇಂದ್ರ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ ಇರುತ್ತಾರೆ. ಪ್ರಾಧಿಕಾರದಲ್ಲಿ ಎಲ್ಲ ವಿಷಯಗಳು ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಬಹುಪಾಲು ಮತಗಳಿಂದ ನಿರ್ಧರಿಸಲ್ಪಡುತ್ತವೆ ಎಂದು ಸುಗ್ರೀವಾಜ್ಞೆ ಹೇಳುತ್ತದೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿಗೆ ಶಿಕ್ಷಣ ಬೇಕೆಂದು ಅದಕ್ಕೇ ಹೇಳೋದು; 2 ಸಾವಿರ ರೂ. ನೋಟ್ ಬ್ಯಾನ್ ಬಗ್ಗೆ ಕೇಜ್ರಿವಾಲ್ ವ್ಯಂಗ್ಯ
ಕೇಂದ್ರದಿಂದ ನೇಮಕಗೊಂಡ ಇಬ್ಬರು ಅಧಿಕಾರಿಗಳು ಚುನಾಯಿತ ಮುಖ್ಯಮಂತ್ರಿಯನ್ನು ತಳ್ಳಿಹಾಕಬಹುದು. ಭಿನ್ನಾಭಿಪ್ರಾಯಗಳಿದ್ದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ನಿರ್ಧಾರವು ಅಂತಿಮವಾಗಿರುತ್ತದೆ ಎಂದು ಸುಗ್ರೀವಾಜ್ಞೆ ಹೇಳುತ್ತದೆ.
ಅರವಿಂದ್ ಕೇಜ್ರಿವಾಲ್ ಅವರು ಈ ಸುಗ್ರೀವಾಜ್ಞೆಯು ದೆಹಲಿ ಆಡಳಿತಕ್ಕೆ ಮಾರಕ ಎಂದು ಖಂಡಿಸಿದ್ದಾರೆ.