ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಜಾಹೀರಾತು ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬಳು, ‘ಯುದ್ಧ ಪೀಡಿತ ಉಕ್ರೇನ್ನಿಂದ ತಾವು ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಲು ಮೋದಿ ಅವರು ಯುದ್ಧವನ್ನೇ ನಿಲ್ಲಿಸಿದರು, ಪಪ್ಪಾ’ ಎಂದು ಹೇಳುತ್ತಾರೆ. ಆ ವಿಡಿಯೋವನ್ನು ಹಂಚಿಕೊಂಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ‘ಜೋ ರಕ್ಷಾ ಕರೇ ಸಾತ್ ಸಮುಂದರ್ ಪಾರ್ ವೋ ಹೈ ಹಮಾರಾ ಪರಿವಾರ್’ (ಏಳು ಸಮುದ್ರಗಳನ್ನು ದಾಟಿ ನಮ್ಮನ್ನು ರಕ್ಷಿಸುವವನು ನಮ್ಮ ಕುಟುಂಬದ ಸದಸ್ಯ) ಎಂದು ಪೋಸ್ಟ್ ಮಾಡಿದ್ದಾರೆ.
ಈಗ ನಮ್ಮೆದುರು ಇರುವ ಪ್ರಶ್ನೆ; ಈ ಪರಿವಾರ (ಕುಟುಂಬ) ಎಂದರೆ ಯಾರು? ಮೋದಿ ಮತ್ತು ಅವರ ಮಂತ್ರಿಗಳು ಯಾರನ್ನು ತಮ್ಮ ಪರಿವಾರ ಎಂದು ಪರಿಗಣಿಸುತ್ತಾರೆ? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನಾ? ಅಥವಾ ತಮ್ಮ ಯುದ್ಧಕ್ಕಾಗಿ ಹೋರಾಡುವಂತೆ ಮತ್ತು ಸಾಯುವಂತೆ ಪುಟಿನ್ ಒತ್ತಾಯಿಸುತ್ತಿರುವ ರಷ್ಯಾದಲ್ಲಿರುವ ಭಾರತೀಯ ಕಾರ್ಮಿಕರನ್ನಾ?
2024ರ ಫೆಬ್ರವರಿ 21ರಂದು ಗುಜರಾತ್ನ ಹೆಮಿಲ್ ಅಶ್ವಿನ್ಭಾಯ್ ಮಂಗುಕಿಯಾ ಎಂಬ ಯುವಕ ರಷ್ಯಾ ಸೈನ್ಯದಲ್ಲಿ ಯುದ್ಧ ಮಾಡುವಾಗ ಉಕ್ರೇನ್ನಲ್ಲಿ ಕೊಲ್ಲಲ್ಪಟ್ಟರು. ಅದಕ್ಕೂ 19 ದಿನಗಳ ಮುನ್ನ ಅವರ ತಂದೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಪತ್ರ ಬರೆದಿದ್ದರು. ‘ತಮ್ಮ ಮಗನನ್ನು ಯುದ್ಧ ಸಹಾಯಕನಾಗಿ ರಷ್ಯಾ ಪಡೆ ನೇಮಿಸಿಕೊಂಡಿದೆ. ಆತನಿಗೆ ಉಕ್ರೇನ್ ವಿರುದ್ಧ ಹೋರಾಡುವಂತೆ ಒತ್ತಾಯಿಸುತ್ತಿದೆ. ಆತನನ್ನು ಭಾರತಕ್ಕೆ ಕರೆತನ್ನಿ’ ಎಂದು ಮನವಿ ಮಾಡಿದ್ದರು. ಆದರೆ, ಹೆಮಿಲ್ ಹತ್ಯೆಯಾದರು.
ಇದಾದ ಕೆಲವೇ ದಿನಗಳಲ್ಲಿ ಹೈದರಾಬಾದ್ನ ಮತ್ತೊಬ್ಬ ಕಾರ್ಮಿಕ ಮೊಹಮ್ಮದ್ ಅಫ್ಸಾನ್ ಹತ್ಯೆಗೀಡಾದರು. ಇನ್ನೂ ಹಲವರು, “ನಾನು ಪದೇ ಪದೇ ಮನವಿ ಮಾಡಿದರೂ, ಭಾರತದ ಸರ್ಕಾರವು ನಮ್ಮನ್ನು ರಕ್ಷಿಸಲು ಏನನ್ನೂ ಮಾಡುತ್ತಿಲ್ಲ” ಎಂದು ಆರೋಪಿಸಿದರು.
ಮಾತ್ರವಲ್ಲದೆ, ಇತ್ತೀಚೆಗೆ, ರಷ್ಯಾ ಸೇನೆಯ ವಸ್ತ್ರ ಧರಿಸದ್ದ ಭಾರತೀಯ ಯುವಕರ ಗುಂಪೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. “ಪ್ರವಾಸಕ್ಕೆಂದು ಬಂದ ನಮ್ಮನ್ನು ರಷ್ಯಾ ಪಡೆ ಸೇನೆಗೆ ಸೇರುವಂತೆ ಒತ್ತಾಯಿಸುತ್ತಿದೆ. ನಮ್ಮನ್ನು ಯುದ್ಧ ಪೀಡಿತ ಉಕ್ರೇನ್ ಗಡಿಗೆ ಕರೆದೊಯ್ಯುತ್ತಿದ್ದಾರೆ. ಇದು ನಮ್ಮ ಕೊನೆಯ ವಿಡಿಯೋ ಆಗಿರಬಹುದು” ಎಂದು ಆ ಯುವಕರು ಹೇಳಿದ್ದರು.
ಇದೆಲ್ಲದರ ನಡುವೆ, ಇತ್ತೀಚೆಗೆ ರಷ್ಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದ ಪುಟಿನ್ ಅವರಿಗೆ ವೈಯಕ್ತಿಕವಾಗಿ ಮೋದಿ ಅಭಿನಂದನೆ ಸಲ್ಲಿಸಿದರು. ಆದರೆ, ಪುಟಿನ್ ಸೈನ್ಯದಿಂದ ಒತ್ತಡಕ್ಕೆ ಒಳಗಾಗಿ, ಯುದ್ಧ ಪ್ರದೇಶದಲ್ಲಿ ಯುದ್ಧಾಸ್ತ್ರಗಳಾಗಿ ಕೊಲ್ಲಲ್ಪಟ್ಟ ಭಾರತೀಯರ ಸಾವಿಗೆ ಮೋದಿ ಸಂತಾಪ ಸೂಚಿಸಲಿಲ್ಲ. ಭಾರತೀಯ ಕಾರ್ಮಿಕರ ರಕ್ಷಣೆಗಾಗಿ ಪುಟಿನ್ ಅವರನ್ನು ಎದುರಿಸಲು ಮೋದಿ ಮುಂದಾಗಲಿಲ್ಲ.
ರಷ್ಯಾದಲ್ಲಿ ಇನ್ನೂ ಬಂಧಿತನಾಗಿರುವ ಕರ್ನಾಟಕ ಮೂಲದ ಕಾರ್ಮಿಕ ಸಮೀರ್ ಅಹ್ಮದ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ, ತಮ್ಮ ಸಹವರ್ತಿ ಗುಜರಾತ್ನ ಹೆಮಿಲ್ರನ್ನು ಕ್ಷಿಪಣಿ ಕೊಲ್ಲುವುದನ್ನು ಕಣ್ಣಾರೆ ಕಂಡಿದ್ದಾಗಿ ಹೇಳಿಕೊಂಡಿದ್ದಾರೆ. ರಷ್ಯಾ ಸೈನ್ಯ ಹೆಮಿಲ್ನ ಮೃತದೇಹವನ್ನು ಕಸದಂತೆ ಬಿಟ್ಟೋಗುವ ಮೊದಲು, ಅತನ ದೇಹವನ್ನು ತನ್ನ ತೋಳುಗಳ ಹೊತ್ತು ಸಮೀರ್ ದುಃಖದೊಂದಿಗೆ ಮಾನವೀಯ ಗೌರವ ಸಲ್ಲಿಸಿದ್ದರು.
ಅಷ್ಟೇ ಅಲ್ಲದೆ, ಕಾಲಿಂಪಾಂಗ್ನ ಉರ್ಗೆನ್ ತಮಾಂಗ್, ಕಾಶ್ಮೀರದ ಆಜಾದ್ ಯೂಸುಫ್ ಕುಮಾರ್, ಹರಿಯಾಣದ ಹರ್ಷ್ ಕುಮಾರ್, ಪಂಜಾಬ್ನ ಗಗನ್ದೀಪ್ ಸಿಂಗ್ ಸೇರಿದಂತೆ ಹಲವಾರು ಭಾರತೀಯ ಕಾರ್ಮಿಕರು ರಷ್ಯಾ ಸೇನೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಆದರೆ, ಅವರ ಬಗ್ಗೆ ಮೋದಿ ಅವರು ಮಾತನಾಡುತ್ತಿಲ್ಲ. ಇದು ಬಿಜೆಪಿಯ ‘ಏಳು ಸಮುದ್ರಗಳನ್ನು ದಾಟಿದ ಪರಿವಾರ’.
ರಷ್ಯಾಕ್ಕೆ ಭಾರತೀಯರ ಕಳ್ಳಸಾಗಾಣಿಕೆ
ಉದ್ಯೋಗ ಮತ್ತು ವಿಶ್ವವಿದ್ಯಾಲಯಗಳಲ್ಲಿ ರಿಯಾಯತಿ ದರದಲ್ಲಿ ಪ್ರವೇಶಾತಿ ಕೊಡಿಸುವ ನೆಪದಲ್ಲಿ ಭಾರತೀಯರನ್ನು ರಷ್ಯಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಅವರನ್ನು ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸುತ್ತಿದ್ದ ರಷ್ಯಾದ ಮಾನವ ಕಳ್ಳ ಸಾಗಾಣಿಕೆ ಜಾಲವನ್ನು ಮಾರ್ಚ್ 8ರಂದು ಸಿಬಿಐ ತಂಡ ಭೇದಿಸಿದೆ. ಪ್ರಮುಖ ಆರೋಪಿಗಳಾದ ರಾಜಸ್ಥಾನದ ನಿವಾಸಿ ಕ್ರಿಸ್ಟಿನಾ ಮತ್ತು ಮೊಯಿನುದ್ದೀನ್ ಚಿಪ್ಪಾ ಎಂಬವರನ್ನು ಬಂಧಿಸಿದೆ.
“ಆರೋಪಿ ಏಜೆಂಟ್ಗಳು ರಿಯಾಯತಿ ಶುಲ್ಕಗಳು ಮತ್ತು ವೀಸಾ ವಿಸ್ತರಣೆ ನೀಡುವ ನೆಪದಲ್ಲಿ ರಷ್ಯಾಕ್ಕೆ ಕರೆದೊಯ್ದುತ್ತಿದ್ದರು. ಯುವಕರು ರಷ್ಯಾಕ್ಕೆ ತೆರಳಿದ ಬಳಿಕ, ಅವರ ಪಾಸ್ಪೋರ್ಟ್ಗಳನ್ನು ಅಲ್ಲಿನ ಏಜೆಂಟರು ವಶಪಡಿಸಿಕೊಳ್ಳುತ್ತಾರೆ. ಯುದ್ಧದ ತರಬೇತಿ ನೀಡಿ, ಸಶಸ್ತ್ರ ಪಡೆಗಳಿಗೆ ಸೇರಲು ಒತ್ತಾಯಿಸುತ್ತಾರೆ” ಎಂದು ಸಿಬಿಐ ವಿವರಿಸಿದೆ.
ಈ ವರದಿ ಓದಿದ್ದೀರಾ?: ರಷ್ಯಾ-ಉಕ್ರೇನ್ ಗಡಿಯಲ್ಲಿ ಏಳು ಭಾರತೀಯರು: ಉಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಒತ್ತಾಯ
ಬಂಧಿತ ಇಬ್ಬರು ಆರೋಪಿಗಳು ಸೇರಿದಂತೆ, ದೆಹಲಿಯ 24×7 ಆರ್ಎಎಸ್ ಸಾಗರೋತ್ತರ ಫೌಂಡೇಶನ್ ಮತ್ತು ಅದರ ನಿರ್ದೇಶಕ ಸುಯಶ್ ಮುಕುತ್, ಮುಂಬೈನ ಒ ಎಸ್ಡಿ ಬ್ರೋಸ್ ಟ್ರಾವೆಲ್ಸ್ ಅಂಡ್ ವೀಸಾ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ರಾಕೇಶ್ ಪಾಂಡೆ, ಚಂಡೀಗಢದಲ್ಲಿ ಬಾಬಾ ವ್ಲಾಗ್ಸ್ ಮತ್ತು ಅದರ ನಿರ್ದೇಶಕ ಮಂಜೀತ್ ಸಿಂಗ್ ಎಂಬ ಆರೋಪಿಗಳ ಹೆಸರನ್ನು ತನ್ನ ಎಫ್ಐಆರ್ನಲ್ಲಿ ಉಲ್ಲೇಖಿಸಿದೆ. ಅಲ್ಲದೆ, ದುಬೈನಲ್ಲಿರುವ ಓವರ್ಸೀಸ್ ರಿಕ್ರೂಟ್ಮೆಂಟ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ಫೈಸಲ್ ಅಬ್ದುಲ್ ಮುತಾಲಿಬ್ ಖಾನ್ ಅಲಿಯಾಸ್ ಬಾಬಾ ಎಂಬಾತನನ್ನೂ ಆರೋಪಿಗಳೆಂದು ಹೇಳಿದೆ.
ಆದರೆ, ಈ ವಿಚಾರವಾಗಿಯೂ ಮೋದಿ ಅವರು ಭಾರತೀಯರ ರಕ್ಷಣೆಯ ಬಗ್ಗೆಯಾಗಲೀ, ರಷ್ಯಾದ ಮಾನವ ಕಳ್ಳಸಾಗಾಣಿಕೆಯ ಬಗ್ಗೆಯಾಗಲೀ ತುಟಿ ಬಿಚ್ಚಿಲ್ಲ.
ನಾವು ಎಚ್ಚೆತ್ತುಕೊಂಡರೆ, ಬಂಧಿತ ಕಾರ್ಮಿಕರ ರಕ್ಷಣೆಗಾಗಿ ಹೋರಾಟಗಳನ್ನು ಮಾಡಿದರೆ, ಚುನಾವಣಾಗೂ ಮುನ್ನ ಅವರನ್ನು ಪ್ರಧಾನಿ ಮೋದಿ ಅವರು ಮರಳಿ ಕರೆತರಬಹುದು. ಅದಕ್ಕಾಗಿ ಭಾರತವು ಧ್ವನಿ ಎತ್ತಬೇಕಾಗಿದೆ.
ಈ ವರದಿ ಓದಿದ್ದೀರಾ?: ಉದ್ಯೋಗ-ಶಿಕ್ಷಣ ಆಮಿಷ: ಉಕ್ರೇನ್ ಯುದ್ಧಕ್ಕೆ ಭಾರತೀಯರ ಕಳ್ಳಸಾಗಣೆ ಮಾಡಿದ್ದ ರಷ್ಯಾ ಏಜೆಂಟರು: ಸಿಬಿಐ