- ಅಮೂಲಾಗ್ರ ಬದಲಾವಣೆ ಮಾಡಬೇಕು ಎಂಬ ಆಸೆ ನನ್ನಲಿದೆ
- ಇಲಾಖೆಯ ಬಗ್ಗೆ ಕುಲಂಕುಶವಾಗಿ ಅರ್ಥ ಮಾಡಿಕೊಳ್ಳುತ್ತೇನೆ
ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಅಷ್ಟೇ ಅಲ್ಲ. ಮುಖ್ಯಮಂತ್ರಿ ಕೂಡ ಆಗುವ ಸಾಮರ್ಥ್ಯ ಇದೆ. ಆದರೆ, ಅದಕ್ಕೆ ಕಾಲ ಕೂಡಿಬರಬೇಕು. ಇವತ್ತಲ್ಲ ನಾಳೆ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ವಿಚಾರವಾಗಿ ಪ್ರತಿಕ್ರಿಯಿಸಿದರು.
ನಿಮಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜವಾಬ್ದಾರಿ ಕೊಟ್ಟರೆ, ಮಕ್ಕಳ ಶಿಕ್ಷಣ ಆರಂಭವಾಗುವ ಅಂಗನವಾಡಿ ಶಿಕ್ಷಣದಲ್ಲಿ ಬದಲಾವಣೆ ಏನಾದರೂ ಮಾಡುತ್ತೀರ? ಎಂಬ ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿಯೂ ಅಮೂಲಾಗ್ರ ಬದಲಾವಣೆ ಮಾಡಬೇಕು ಎಂಬ ಆಸೆ ನನ್ನಲಿದೆ. ಆದರೆ, ಮೊದಲು ಆ ಇಲಾಖೆಯ ಬಗ್ಗೆ ಕುಲಂಕುಶವಾಗಿ ಅರ್ಥ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಅಂದಾಜು 70 ಸಾವಿರ ಅಂಗನವಾಡಿಗಳು ನಮ್ಮ ರಾಜ್ಯದಲ್ಲಿದ್ದಾವೆ. ಮಕ್ಕಳ ಕಲಿಕೆ ಆರಂಭವಾಗುವುದೇ ಅಂಗನವಾಡಿಯಿಂದ. ಬಹುತೇಕ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಕೂಡ ಇಲ್ಲ. ಹಾಗಾಗಿ ಸಮಗ್ರವಾಗಿ ಅದರ ಬಗ್ಗೆ ಚರ್ಚೆ ಮಾಡಿ, ತಿಳಿದುಕೊಂಡು ಮುಂದುವರಿಯುತ್ತೇನೆ ಎಂದರು.
ಈ ಸುದ್ದಿ ಓದಿದ್ದೀರಾ? ಸಚಿವ ಸ್ಥಾನ ಸಿಗದವರಿಗೆ ಬೇರೆ ಬೇರೆ ಹುದ್ದೆ ಕೊಡಲಾಗುತ್ತೆ: ಸತೀಶ ಜಾರಕಿಹೊಳಿ
ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಿಸುವ ಕುರಿತು ರಾಹುಲ್ ಗಾಂಧಿ ನೀಡಿದ ಭರವಸೆ ಈಡೇರಿಸುತ್ತೀರಾ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನನಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆ ಅಧಿಕೃತವಾಗಿ ಹಂಚಿಕೆಯಾಗಬೇಕು. ಅಧಿಕಾರ ಸ್ವೀಕರಿಸಿ, ಇಲಾಖೆವಾರು ಸಭೆಗಳನ್ನು ನಡೆಸಬೇಕು. ಆದರೆ, ನಾವು ನೀಡಿದ ವಾಗ್ದಾನ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.