ಸಚಿವ ಸ್ಥಾನ ಸಿಗದರು ಅಸಮಾಧಾನ ಹೊರಹಾಕುವುದು ಸ್ವಾಭಾವಿಕ. ಯಾರಿಗೆ ಬೇಸರ ಆಗಿದೆ ಅವರನ್ನು ವರಿಷ್ಠರು ಕರೆಯಿಸಿ ಮಾತನಾಡುತ್ತಾರೆ. ಅಂತವರಿಗೆ ಬೇರೆ ಬೇರೆ ಹುದ್ದೆ ಕೊಡಲಾಗುತ್ತದೆ ಎಂದು ನೂತನ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂದಿಳಿದ ಅವರು, ಮಾಧ್ಯಮ ಪ್ರತಿನಿಧಿಗಳ ಜೊತೆ ಪ್ರತಿಕ್ರಿಯಿಸಿದರು.
“ಬೆಳಗಾವಿ ಜಿಲ್ಲೆಯ ಹಲವು ಶಾಸಕರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ಬಾರಿ ಗೆದ್ದ ಶಾಸಕರಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಗೆದ್ದವರು ಹೆಚ್ಚಿದ್ದಾರೆ. ಹೀಗಾಗಿ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಎಲ್ಲೆಡೆ ಕೇಳಿಬರುತ್ತಿದೆ” ಎಂದರು.
“ಸಚಿವರಿಗೆ ಖಾತೆ ಹಂಚಿಕೆ ಅಂತಿಮವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪಟ್ಟಿಗೆ ರಾಜ್ಯಪಾಲರಿಂದ ಅಂಕಿತ ಬೀಳಬೇಕಿದೆ. ವಿರೋಧ ಪಕ್ಷದವರು ಸರ್ಕಾರ ಟೇಕಫ್ ಆಗಿಲ್ಲ ಎನ್ನುತ್ತಾರೆ. ಹಾಗಾಗಿ ಸಂಪುಟ ವಿಸ್ತರಣೆಯನ್ನು ಒಂದೇ ಬಾರಿ ಟೇಕಫ್ ಮಾಡಲಾಗಿದೆ” ಎಂದು ಹೇಳಿದರು.
ಬಿಜೆಪಿ ಸರ್ಕಾರದ ಯೋಜನೆಗಳನ್ನು ಮುಂದುವರಿಸುತ್ತೀರಾ ಎಂದು ಪ್ರಶ್ನಿಸಿದಾಗ, “ಜನಪರವಾಗಿದ್ದರೆ ಮುಂದುವರಿಸುತ್ತೇವೆ. ಅನವಶ್ಯಕವಾಗಿದ್ದರೆ ಸ್ಥಗಿತಗೊಳಿಸುತ್ತೇವೆ” ಎಂದರು.