ಚೆನ್ನೈ ಮೈದಾನದಲ್ಲಿ ರೋಹಿತ್ ಪಡೆಯನ್ನು 21 ರನ್ಗಳ ಅಂತರದಲ್ಲಿ ಮಣಿಸುವ ಮೂಲಕ ಪ್ರವಾಸಿ ಆಸ್ಟ್ರೇಲಿಯ ತಂಡ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ನಿರ್ಧಾರಕ ಪಂದ್ಯದಲ್ಲಿ ಆಸೀಸ್ ಪಡೆ ಮುಂದಿಟ್ಟಿದ್ದ 270 ರನ್ಗಳ ಸಾಮಾನ್ಯ ಸವಾಲನ್ನು ಬೆನ್ನಟ್ಟುವ ವೇಳೆ 49.1 ಓವರ್ಗಳಲ್ಲಿ ಟೀಮ್ ಇಂಡಿಯಾ ಆಲೌಟ್ ಆಯಿತು. ಆ ಮೂಲಕ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ್ದ ಸೋಲಿಗೆ ಪ್ರವಾಸಿ ಪಡೆ, ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಂಡಿದೆ.
ಈ ಮೂಲಕ ತವರಿನಲ್ಲಿ ಸತತ 8ನೇ ಏಕದಿನ ಸರಣಿ ಗೆಲ್ಲುವ ಭಾರತದ ಕನಸಿಗೆ ಆಸ್ಟ್ರೇಲಿಯ ತಡೆಒಡ್ಡಿತು. ಕಾಕತಾಳೀಯವೆಂದರೆ 2018/19ರಲ್ಲಿ ಐದು ಏಕದಿನ ಪಂದ್ಯಗಳ ಸರಣಿಯನ್ನಾಡಲು ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯ 3-2 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ಆ ಬಳಿಕ ತವರು ನೆಲದಲ್ಲಿ ಆಡಿದ 7 ಏಕದಿನ ಸರಣಿಗಳನ್ನೂ ಭಾರತ ತನ್ನದಾಗಿಸಿಕೊಂಡಿತ್ತು. ಇದೀಗ ಮತ್ತೆ ಆಸೀಸ್ ಕೈ ಮೇಲಾಗಿದೆ.
ಚೆನ್ನೈನಲ್ಲಿ 270 ರನ್ ಗುರಿ ಬೆನ್ನಟ್ಟುವ ವೇಳೆ ಒಂದು ಹಂತದಲ್ಲಿ ಭಾರತ, 35 ಓವರ್ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 185 ರನ್ ಗಳಿಸುವ ಮೂಲಕ ಗೆಲುವಿನತ್ತ ಮುನ್ನಡೆದಿತ್ತು. ಆದರೆ 36ನೇ ಓವರ್ನ ಮೊದಲ ಎರಡು ಎಸೆತದಲ್ಲಿ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆಯುವ ಮೂಲಕ ಸ್ಪಿನ್ನರ್ ಆಸ್ಟನ್ ಅಗರ್ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. 72 ಎಸೆತಗಳಲ್ಲಿ ಕೊಹ್ಲಿ 54 ರನ್ಗಳಿಸಿದರೆ, ಸೂರ್ಯಕುಮಾರ್ ಸತತ ಮೂರನೇ ಪಂದ್ಯದಲ್ಲೂ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ಆರಂಭಿಕರಾದ ರೋಹಿತ್ ಶರ್ಮಾ (30 ರನ್, ಶುಭಮನ್ ಗಿಲ್ (37 ರನ್), ಕೆ ಎಲ್ ರಾಹುಲ್ (32 ರನ್) ಹಾಗೂ ಹಾರ್ದಿಕ್ ಪಾಂಡ್ಯ 40 ರನ್ಗಳಿಸಿದರೂ ಸಹ ಗೆಲುವು ದಾಖಲಾಗಲಿಲ್ಲ.
ಆಸೀಸ್ ಪರ ಬಿಗು ದಾಳಿ ಸಂಘಟಿಸಿದ ಆಡಮ್ ಝಾಂಪ 4 ವಿಕೆಟ್ ಪಡೆದರೆ, ಆಸ್ಟನ್ ಅಗರ್ 2 ವಿಕೆಟ್ ಪಡೆದರು.