ವಾಂಖೆಡೆ ಮೈದಾನದಲ್ಲಿ ಸೂರ್ಯಕುಮಾರ್ ಅಬ್ಬರಕ್ಕೆ ನಲುಗಿದ ಆರ್ಸಿಬಿ ಪಡೆ ಹೀನಾಯವಾಗಿ ಸೋಲು ಕಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿಟ್ಟಿದ್ದ 200 ರನ್ಗಳ ಗುರಿಯನ್ನು ರೋಹಿತ್ ಪಡೆ 4 ವಿಕೆಟ್ ನಷ್ಟದಲ್ಲಿ 16.3 ಓವರ್ಗಳಲ್ಲೇ ಚೇಸ್ ಮಾಡುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಐಪಿಎಲ್ 16ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಮುಂಬೈ 3ನೇ ಸ್ಥಾನಕ್ಕೇರಿತು. ಮತ್ತೊಂದೆಡೆ 11ನೇ ಪಂದ್ಯದಲ್ಲಿ 6ನೇ ಸೋಲು ಕಂಡ ಆರ್ಸಿಬಿ, 7ನೇ ಸ್ಥಾನಕ್ಕೆ ಕುಸಿದಿದೆ.
ಪ್ಲೇ ಆಫ್ ಹಂತಕ್ಕೇರಲು ಇನ್ನುಳಿದ 3 ಪಂದ್ಯಗಳನ್ನು ಬೆಂಗಳೂರು ತಂಡ ಬೃಹತ್ ಅಂತರದಿಂದ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
ಚೇಸಿಂಗ್ ವೇಳೆ ಆತಿಥೇಯ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ಉತ್ತಮ ರನ್ ಗತಿ ಕಾಯ್ದುಕೊಂಡಿತ್ತು. 4.4 ಓವರ್ಗಳಲ್ಲೇ ತಂಡದ ಮೊತ್ತ 50 ದಾಟಿತ್ತು.
21 ಎಸೆತಗಳಲ್ಲಿ ತಲಾ 4 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಇಶಾನ್ ಕಿಶನ್ 42 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಅಬ್ಬರಿಸಿದ ಸೂರ್ಯಕುಮಾರ್!
ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್, ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ ಆ ಬಳಿಕ ಅಬ್ಬರಿಸಿದ ಸೂರ್ಯ, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿದರು.
35 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್, 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 83 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ತಾನೆದುರಿಸಿದ ಮೊದಲ 14 ಎಸೆತಗಳಲ್ಲಿ 18 ರನ್ಗಳಿಸಿದ್ದ ಯಾದವ್ ನಂತರದ 21 ಎಸೆತಗಳಲ್ಲಿ 65 ರನ್ ಚಚ್ಚಿದರು. ಅಂತಿಮವಾಗಿ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಆರ್ಸಿಬಿ 199/6
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ [ 65 ರನ್ ] ಮತ್ತು ಗ್ಲೆನ್ ಮ್ಯಾಕ್ಸ್’ವೆಲ್ [ 68 ರನ್] ಗಳಿಸಿದ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 199 ರನ್ಗಳಿಸಿತ್ತು