“ಬೆಂಗಳೂರಿನ ಇತರೆ ಪ್ರದೇಶಗಳಂತೆಯೇ, ನಗರದ ಹೊರವಲಯದಲ್ಲಿರುವ ಐಟಿ-ಬಿಟಿ ಕಂಪನಿಗಳಿಗೂ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಹಾಗೂ ಸಮರ್ಪಕವಾಗಿ ನೀರು ಪೂರೈಸಲು ಮಂಡಳಿ ಬದ್ಧವಾಗಿದೆ” ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಡಾ.ವಿ. ರಾಮ್ ಪ್ರಸಾತ್ ಮನೋಹರ್ ಹೇಳಿದ್ದಾರೆ.
ಔಟರ್ ರಿಂಗ್ ರೋಡ್ ಕಂಪನೀಸ್ ಅಸೊಸಿಯೇಶನ್ (ಆರ್ಕಾ) ಪದಾಧಿಕಾರಿಗಳೊಂದಿಗೆ ಗುರುವಾರ ವೇಬಿನಾರ್ ಮೂಲಕ ಸಭೆ ನಡೆಸಿದ ಅವರು, “ಬೆಂಗಳೂರಿನಲ್ಲಿ ನೀರಿನ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಇದೆ ರೀತಿ ಐಟಿ, ಬಿಟಿ ಕಂಪನಿಗಳಿಗೂ ಸಮರ್ಪಕವಾಗಿ ನೀರು ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ.
“ಕಾವೇರಿ 5ನೇ ಹಂತ ಪೂರ್ಣಗೊಂಡರೆ, ನಗರಕ್ಕೆ ಪ್ರತಿದಿನ ಹೆಚ್ಚುವರಿ 775 ಎಮ್ಎಲ್ಡಿ ನೀರು ಸಿಗಲಿದೆ. ಇದರಿಂದ ನೀರಿನ ಕೊರತೆ ಕಡಿಮೆಯಾಗಲಿದೆ. ಅಂತರ್ಜಲ ಕುಸಿತದಿಂದ ಕುಡಿಯುವ ನೀರಿನ ಕೊರತೆಯಾಗಿದೆ. ಈ ಹಂತದಲ್ಲಿ ಅನಾವಶ್ಯಕವಾಗಿ ನೀರು ಪೋಲಾಗದಂತೆ ನೋಡಿಕೊಳ್ಳುವುದು ಪ್ರಮುಖವಾಗಿದೆ. ಅನಾವಶ್ಯಕವಾಗಿ ನೀರನ್ನು ಪೋಲು ಮಾಡುವವರಿಗೆ ದಂಡ ವಿಧಿಸುವುದರಿಂದ ನೀರಿನ ಮೌಲ್ಯದ ಬಗ್ಗೆ ಅರಿವಾಗುತ್ತದೆ” ಎಂದು ಹೇಳಿದ್ದಾರೆ.
“ಮಿತವಾಗಿ ನೀರನ್ನು ಬಳಸುವಂತೆ ಕಂಪನಿಯ ಮೂಲಕ ನೌಕರರಲ್ಲಿ ಜಾಗೃತಿ ಮೂಡಿಸಬೇಕು. ನೀರಿನ ಸದ್ಬಳಕೆ ಹಾಗೂ ಅದರ ಸೂಕ್ತ ಬಳಕೆಗಾಗಿ ಜಲಮಂಡಳಿ ವತಿಯಿಂದ ಮೂರು ಸೂತ್ರಗಳ ಬಗ್ಗೆ ಪ್ರಚಾರ ಮಾಡಲಾಗುತ್ತಿದೆ. ನೀರು ಸಂರಕ್ಷಣೆ, ಸಂಸ್ಕರಿಸಿದ ನೀರು ಬಳಕೆ, ಮಳೆ ನೀರು ಸಂರಕ್ಷಣೆ ಹಾಗೂ ಮರುಪುರಣದ ಬಗ್ಗೆ ಜಾಗೃತಿ ಮೂಡಿಸಿ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಮಾಷೆ ಮಾಡಲು ಗುದನಾಳಕ್ಕೆ ‘ಏರ್ಪ್ರೆಶರ್’ನಿಂದ ಗಾಳಿ ಬಿಟ್ಟ ಸ್ನೇಹಿತ: ಕರುಳು ಛಿದ್ರವಾಗಿ ಯುವಕ ಸಾವು
“ಅಗತ್ಯವಿರುವ ಕಂಪನಿಗಳು ಹಾಗೂ ಸಂಸ್ಥೆಗಳಿಗೆ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲು ಜಲಮಂಡಳಿ ಸಿದ್ಧವಿದೆ. ಅಪಾರ್ಟ್ಮೆಂಟ್ಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕಾ ಪ್ರದೇಶಗಳು, ರೆಸ್ಟೋರೆಂಟ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ನೀರು ಪೋಲಾಗುವುದನ್ನ ತಡೆಯಲು ಏರಿಯೇಟರ್ ಹಾಗೂ ಫ್ಲೋ ಕಂಟ್ರೋಲರ್ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮಂಡಳಿ ಕ್ರಮವಹಿಸಲಾಗುತ್ತಿದೆ. ಇದಕ್ಕೆ ತಾವು ಕೂಡ ಸಾಥ್ ನೀಡಬೇಕು” ಎಂದು ವಿವರಿಸಿದ್ದಾರೆ.
“ನೀರಿನ ಸಮಸ್ಯೆಗೆ ಪಂಚ ಸೂತ್ರ ಸಿದ್ಧಗೊಳಿಸಿದ್ದು, ಕಂಪನಿಗಳು ಈ ಐದು ಸೂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಗ್ರೀನ್ ಸ್ಟಾರ್ ಚಾಲೆಂಜ್ಗೆ ಮುಂದಾಗಬೇಕು” ಎಂದು ಕರೆ ನೀಡಿದ್ದಾರೆ.