ತಮಾಷೆ ಮಾಡಲು ಹೋಗಿ ತನ್ನ ಸ್ನೇಹಿತನ ಗುದನಾಳಕ್ಕೆ ‘ಏರ್ ಪ್ರೆಶರ್ ಪೈಪ್’ನಿಂದ ಗಾಳಿ ಬಿಟ್ಟ ಪರಿಣಾಮ ಒತ್ತಡ ಹೆಚ್ಚಾಗಿ ದೇಹದೊಳಗಿನ ಕರುಳು ಛಿದ್ರವಾಗಿದ್ದು, ಯುವಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯೋಗೇಶ್ (24) ಮೃತ ಯುವಕ. ಆರೋಪಿ ಮುರುಳಿ ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಮಾರ್ಚ್ 25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ದೇವನಹಳ್ಳಿ ತಾಲೂಕಿನ ಯೇಗೇಶ್ ಥಣಿಸಂದ್ರದಲ್ಲಿದ್ದ ತನ್ನ ಅಜ್ಜಿ ಮನೆಯಲ್ಲಿ ತಂದೆ ಹಾಗೂ ಅಕ್ಕನೊಂದಿಗೆ ವಾಸವಾಗಿದ್ದರು. ಫಾರ್ಮಾ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಆತನ ಸಹೋದರಿಯ ವಿವಾಹವೂ ನಿಶ್ಚಯವಾಗಿತ್ತು. ಹೀಗಾಗಿ, ಮದುವೆ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿದ್ದರು.
ಮಾರ್ಚ್ 25ರ ಸಂಜೆ ತನ್ನ ಬೈಕ್ ಸರ್ವೀಸ್ಗಾಗಿ ಥಣಿಸಂದ್ರದಲ್ಲಿ ವಾಹನ ಸರ್ವೀನ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸ್ನೇಹಿತ ಮುರುಳಿಗೆ ಬೈಕ್ ಕೊಡಲು ಯೋಗೇಶ್ ಹೋಗಿದ್ದರು. ಈ ವೇಳೆ, ಯೋಗೇಶ್ ನಿಂತಿದ್ದಲ್ಲಿಗೆ ತೆರಳಿದ ಮುರುಳಿ ತಮಾಷೆಗಾಗಿ ಏಕಾಏಕಿ ಆತನ ಗುದದ್ವಾರಕ್ಕೆ ಏರ್ ಪ್ರೆಶರ್ನಿಂದ ಗಾಳಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಗಾಳಿಯ ಒತ್ತಡ ಹೆಚ್ಚಾಗಿ ದೇಹದ ಹೊಟ್ಟೆಯೊಳಗಿನ ಕರುಳು ಸ್ಫೋಟಗೊಂಡು ಯೋಗೇಶ್ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ, ಆತನನ್ನು ಮುರುಳಿ ಹಾಗೂ ಇನ್ನಿತರರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯೋಗೇಶ್ ಮೃತಪಟ್ಟಿದ್ದಾರೆ.
ಈ ಘಟನೆ ಸಂಬಂಧ ನಗರದ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಮುರುಳಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | ವಿಪಕ್ಷಗಳ ಮೇಲೆ ಮೋ-ಶಾ ಪ್ರಯೋಗಿಸುತ್ತಿರುವ ಅಸ್ತ್ರಗಳಿವು
ಘಟನೆ ಸಂಬಂಧ ಮಾತನಾಡಿದ ಡಿಸಿಪಿ ಲಕ್ಷ್ಮೀ ಪ್ರಸಾದ್, “ಮೃತ ಯೋಗೇಶ್ ಮೂಲತಃ ವಿಜಯಪುರದವರು. ಬೆಂಗಳೂರಿನಲ್ಲಿ ಡೆಲವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡು ನಗರದ ಥಣಿಸಂದ್ರದಲ್ಲಿ ವಾಸವಿದ್ದನು. ಮುರುಳಿ ಹಾಗೂ ಯೋಗೇಶ್ ಇಬ್ಬರು ಸ್ನೇಹಿತರಾಗಿದ್ದ ಕಾರಣ ಆಟ ಆಡಲು ಹೋಗಿ ಈ ಘಟನೆ ಸಂಭವಿಸಿದೆ. ಮೊದಲಿಗೆ ಮುರುಳಿ, ಯೋಗೇಶ್ನ ಮುಖ ಹಾಗೂ ಎದೆಗೆ ಗಾಳಿ ಬಿಟ್ಟಿದ್ದಾನೆ” ಎಂದರು.
“ಬಳಿಕ, ಹಿಂಬದಿಯಿಂದ ಗುದದ್ವಾರಕ್ಕೆ ಗಾಳಿ ಬಿಟ್ಟಿದ್ದಾನೆ. ಈ ವೇಳೆ ಹೊಟ್ಟೆ ಒಮ್ಮೆಲೆ ಊದಿಕೊಂಡು ಯೋಗೇಶ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ” ಎಂದು ವಿವರಿಸಿದರು.