ಉತ್ತರ ಪ್ರದೇಶದ ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಗುರುವಾರ ಸಂಜೆ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ ಜೈಲಿನಲ್ಲಿ ‘ಸ್ಲೋ ಪಾಯ್ಸನ್’ ನೀಡಲಾಗಿದೆ ಎಂದು ಮುಖ್ತಾರ್ ಪುತ್ರ ಉಮರ್ ಅನ್ಸಾರಿ ಶುಕ್ರವಾರ ಮುಂಜಾನೆ ಆರೋಪಿಸಿದ್ದಾರೆ.
ಗುರುವಾರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮುಖ್ತಾರ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹೃದಯ ಸ್ತಂಭನದಿಂದ ಅವರು ಮೃತಪಟ್ಟಿದ್ದಾರೆ. ಅವರಿಗೆ ‘ಸ್ಲೋ ಪಾಯ್ಸನ್’ ನೀಡಲಾಗಿದೆ ಎಂದು ಅವರ ಪುತ್ರ ಆರೋಪಿಸಿದ್ದಾರೆ. ಆದರೆ, ಆರೋಪವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.
ಮುಖ್ತಾರ್ ಅವರು ‘ಮೌ ಸದರ್’ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು. ಅವರು 2005ರಿಂದ ಉತ್ತರ ಪ್ರದೇಶ ಮತ್ತು ಪಂಜಾಬ್ ಜೈಲಿನಲ್ಲಿದ್ದರು. ಅವರ ವಿರುದ್ಧ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ.
ಉತ್ತರ ಪ್ರದೇಶದ ವಿವಿಧ ನ್ಯಾಯಾಲಯಗಳು ಎಂಟು ಪ್ರಕರಣಗಳಲ್ಲಿ ಮುಖ್ತಾರ್ ಅವರಿಗೆ ಶಿಕ್ಷೆ ವಿಧಿಸಿದ್ದವು. 2022ರ ಸೆಪ್ಟೆಂಬರ್ನಿಂದ ಅವರನ್ನು ಬಂದಾ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲದೆ, ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ನೀಡಿದ್ದ 66 ದರೋಡೆಕೋರರ ಪಟ್ಟಿಯಲ್ಲಿ ಮುಖ್ತಾರ್ ಹೆಸರಿತ್ತು.
“ನನ್ನ ತಂದೆ ‘ಸ್ಲೋ ಪಾಯ್ಸನ್’ಗೆ ಒಳಗಾಗುತ್ತಿರುವುದಾಗಿ ನಮಗೆ ಹೇಳಿದ್ದರು. ಈಗ ಇಡೀ ದೇಶಕ್ಕೆ ಅದರ ಬಗ್ಗೆ ತಿಳಿದಿದೆ” ಎಂದು ಉಮರ್ ಅನ್ಸಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖ್ತಾರ್ ಅನ್ಸಾರಿ ಅವರ ಸಹೋದರ ಮತ್ತು ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಕೂಡ, ‘ಜೈಲಿನಲ್ಲಿ ಮುಖ್ತಾರ್ ‘ಸ್ಲೋ ಪಾಯ್ಸನಿಂಗ್’ಗೆ ಒಳಗಾಗುತ್ತಿದ್ದಾರೆ’ ಎಂದು ಮಂಗಳವಾರ ಆರೋಪಿಸಿದ್ದರು.
ಮರಣೋತ್ತರ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ರಾತ್ರಿಯೇ ‘ಪೋಸ್ಟ್ಮಾರ್ಟಂ’ ಮಾಡಿ ಬೆಳಗ್ಗೆ ಮೃತದೇಹವನ್ನು ನಮಗೆ ಹಸ್ತಾಂತರಿಸಬಹುದೆಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಯಾಕೆ ವಿಳಂಬವಾಗುತ್ತಿದೆ ಎಂದು ನಮಗೆ ಅರ್ಥವಾಗುತ್ತಿಲ್ಲ” ಎಂದು ಮುಖ್ತಾರ್ ಅವರ ಹಿರಿಯ ಸಹೋದರ ಸಿಬ್ಗತುಲ್ಲಾ ಅನ್ಸಾರಿ ಹೇಳಿದ್ದಾರೆ.
‘ಸ್ಲೋ ಪಾಯ್ಸನ್’ ಬಗ್ಗೆ ಮಾತನಾಡಿರುವ ಸಿಬ್ಗತುಲ್ಲಾ ಅನ್ಸಾರಿ, “ಮುಕ್ತರ್ ಅನ್ಸಾರಿ ಅವರು ತಮ್ಮ ವಕೀಲರ ಮೂಲಕ ಈ ವಿಷಯದ ಬಗ್ಗೆ ಲಿಖಿತವಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು” ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ‘ಕ್ರಿಮಿನಲ್ ಪ್ರೊಸೀಜರ್ ಕೋಡ್’ನ (CrPC) ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ದೊಡ್ಡ ಸಭೆಗಳನ್ನು ನಡೆಸದಂತೆ ನಿರ್ಬಂಧಿಸಲಾಗಿದೆ. ಬಂದಾ, ಮೌ, ಗಾಜಿಪುರ ಮತ್ತು ವಾರಣಾಸಿ ಜಿಲ್ಲೆಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.