ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇತ್ತ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕರ್ನಾಟಕದಲ್ಲಿ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ತುಮಕೂರಿನ ಕೊರಟಗೆರೆಯಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಬಿಜೆಪಿ ವಿರುದ್ಧವೇ ಗುಡುಗಿದ ಘಟನೆ ನಡೆದಿದೆ.
ಹೌದು, ಈ ಮೈತ್ರಿ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕಾವೇರಿ ಹೋರಾಟಕ್ಕೆ ಬಿಜೆಪಿಯ 17 ಜನ ಸಂಸದರು ನನಗೆ ಬೆಂಬಲ ನೀಡಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ದೇವೇಗೌಡರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್, ಮೈತ್ರಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕೂಡ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಭಾಷಣ ಮಾಡಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.
ಇದೀಗ, ತುಮಕೂರಿನ ಕೊರಟಗೆರೆಯಲ್ಲಿ ಸೋಮವಾರ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಕಾವೇರಿ ಹೋರಾಟದ ದಿನಗಳನ್ನ ನೆನಪಿಸಿಕೊಂಡ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬಿಜೆಪಿಯ ವಿರುದ್ಧವೇ ಹೇಳಿಕೆ ನೀಡಿದ್ದಾರೆ.
“’ಈ ಹಿಂದೆ ಪಾರ್ಲಿಮೆಂಟಿನಲ್ಲಿ ಕಾವೇರಿ ಹೋರಾಟಕ್ಕೆ ಬಿಜೆಪಿಯ 17 ಜನ ಸಂಸದರು ನನಗೆ ಬೆಂಬಲ ನೀಡಿರಲಿಲ್ಲ” ಎಂದು ಬಿಜೆಪಿ ವೇದಿಕೆಯಲ್ಲಿ ಬಿಜೆಪಿ ಈ ಹಿಂದೆ ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ್ದನ್ನು ದೇವೇಗೌಡರು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, “ಪಾರ್ಲಿಮೆಂಟ್ನಲ್ಲಿ ಒಬ್ಬ ದೇವೇಗೌಡ. 17 ಜನ ಬಿಜೆಪಿ ಸಂಸದರು ಇದ್ದರು. 12 ಜನ ಕಾಂಗ್ರೆಸ್ ಸಂಸದರು ಕೂಡ ಇದ್ದರು. ಕಾಂಗ್ರೆಸ್ನ 12ರಲ್ಲಿ ನಾಲ್ಕು ಜನ ಮಂತ್ರಿಗಳು ಇದ್ದರು. ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ ಇವರೆಲ್ಲ ಇದ್ದರೂ ಕೂಡ ಒಬ್ಬ ಏಕಾಂಗಿ ದೇವೇಗೌಡ. ಆದರೂ ಹೋರಾಟ ನಡೆಸಿದೆ” ಎಂದು ಹೇಳಿದ್ದಾರೆ.
“ಅಂದಿನ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಅವರು, ನಾವೇನು ಮಾಡೋಣ ದೇವೇಗೌಡ್ರೆ, 40 ಜನ ತಮಿಳುನಾಡಿನ ಎಂಪಿಗಳಿದ್ದಾರೆ. ನನ್ನ ಸರ್ಕಾರ ಹೋಗುತ್ತದೆ. ನೀವು ಕೋರ್ಟ್ಗೆ ಹೋಗಿ ಅಂದಿದ್ದರು” ಎಂದು ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್ನಲ್ಲಿ 18 ಮಂದಿ ಸಾವು
“ಅಂದಿನ ನಾಲ್ಕು ಜನ ಮಂತ್ರಿಗಳೂ ಬದುಕಿದ್ದಾರೆ. ಬಿಜೆಪಿಯ ಅನಂತ್ ಕುಮಾರ್ ತೀರಿ ಹೋಗಿದ್ದಾರೆ. ನಾನು ಅನಂತ್ ಕುಮಾರ್ ಅವರಲ್ಲಿ, ನೀವು 17 ಜನ ಎಂಪಿಗಳಿದ್ದೀರಿ. ನಾವೆಲ್ಲಾ ಒಟ್ಟಾಗಿ ಹೋರಾಟ ಮಾಡೋಣ ಎಂದಿದ್ದೆ. ಅದಕ್ಕೆ ನಾಳೆ ನಮ್ಮ ಪಾರ್ಟಿ ಮೀಟಿಂಗ್ನಲ್ಲಿ ಕೇಳಿ, ನಾವು ಬೆಂಬಲ ಕೊಡಬೇಕು ಎಂದು ವಾಜಪೇಯಿಯವರು ಹೇಳಿದರೆ ಕೊಡುತ್ತೇವೆ ಅಂದಿದ್ದರು. ಆದರೆ, ಅವರು ಮಾರನೆಯ ದಿನ ಬೆಳಗ್ಗೆ ಬರಲೇ ಇಲ್ಲ” ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ತಿಳಿಸಿದ್ದಾರೆ.
ಈ ಹೇಳಿಕೆ ನೀಡುವ ಮೂಲಕ ಬಿಜೆಪಿ ಸಭೆಯಲ್ಲೇ, ಕಾವೇರಿ ಹೋರಾಟಕ್ಕೆ ಬಿಜೆಪಿ ಸಂಸದರು ಬೆಂಬಲ ನೀಡಿರಲಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.