ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿರುವ ಪೊಲೀಸ್ ಠಾಣೆಯೊಂದರ ಹೊರಭಾಗದಲ್ಲಿ ಆತ್ಮಹುತಿ ಬಾಂಬರ್ ನಡೆಸಿದ ಸ್ಫೋಟದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸೇರಿದ್ದ ಶಾಂತಿಯುತ ಸಮಾವೇಶದ ಸಮೀಪದಲ್ಲೇ ಈ ದಾಳಿ ನಡೆದಿದೆ.
ಅಫ್ಗಾನಿಸ್ತಾನ ಗಡಿಗೆ ಸಮೀಪವಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಕಣಿವೆಯ ಕಬಾಲ್ ಎಂಬ ಪಟ್ಟಣದಲ್ಲಿ ಭಾನುವಾರ ಸಂಜೆ ಈ ಸ್ಫೋಟ ಸಂಭವಿಸಿದೆ.
ಸ್ವಾತ್ ಜಿಲ್ಲಾ ಪೊಲೀಸ್ ಅಧಿಕಾರಿ (DPO) ಉಮರ್ ಖಾನ್ ಅವರ ಪ್ರಕಾರ, ಪೊಲೀಸ್ ಠಾಣೆಯ ಪ್ರವೇಶ ದ್ವಾರದಲ್ಲಿ ಆತ್ಮಹುತಿ ಬಾಂಬರ್ ತನ್ನ ಬಳಿಯಿದ್ದ ಸ್ಫೋಟಕಗಳನ್ನು ಸ್ಫೋಟಿಸಿಕೊಂಡಿದ್ದಾನೆ. ಈ ದಾಳಿಯಲ್ಲಿ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ.
ಸುರಕ್ಷತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ತನಿಖೆ ಆರಂಭಿಸಿವೆ ಎಂದು ಪೊಲೀಸ್ ಅಧಿಕಾರಿ ಉಮರ್ ಖಾನ್ ತಿಳಿಸಿದ್ದಾರೆ. ಗಾಯಾಳುಗಳನ್ನು ಹತ್ತಿರದ ಸೈದು ಶರೀಫ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಸದ್ಯಕ್ಕೆ ಯಾವುದೇ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಸ್ವಾತ್ ಉಪ ಪೊಲೀಸ್ ಮಹಾನಿರೀಕ್ಷಕ (DIG) ಫಿದಾ ಹುಸೇನ್ ತಿಳಿಸಿದ್ದಾರೆ.
2009ರ ಮಿಲಿಟರಿ ಕಾರ್ಯಾಚರಣೆಯ ಮೊದಲು ಪಾಕಿಸ್ತಾನ್ ತಾಲಿಬಾನ್ (TTP) ನ ಭದ್ರಕೋಟೆಯಾಗಿದ್ದ ಸ್ವಾತ್ ಕಣಿವೆಯಲ್ಲಿ, ಮತ್ತೆ ಹಿಂಸಾತ್ಮಕ ದಾಳಿಗಳು ಹೆಚ್ಚುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಬಲ್ನಲ್ಲಿ ನೂರಾರು ಜನರು ಪ್ರತಿಭಟನೆ ಸೇರಿದ್ದರು. ಅಂತಿಮ ಭಾಷಣಕಾರರು ಮಾತನಾಡುತ್ತಿದ್ದಾಗ ಈ ಸ್ಫೋಟ ಸಂಭವಿಸಿದ್ದು, ಭಯಭೀತರಾದ ನಾಗರಿಕರು ಪ್ರಾಣಭಯದಿಂದ ಓಡಲಾರಂಭಿಸಿದರು ಎಂದು ಅವರು ತಿಳಿಸಿದ್ದಾರೆ.
ಸಮಾವೇಶದಲ್ಲಿದ್ದ ಭಾಷಣಕಾರರು, ಪ್ರದೇಶದಲ್ಲಿ ಭಯೋತ್ಪಾದಕರು ಬಹಿರಂಗವಾಗಿ ಓಡಾಡುತ್ತಿದ್ದರೂ, ಶಾಂತಿಪ್ರಿಯ ನಾಗರಿಕರ ಮೇಲೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಪಾಕಿಸ್ತಾನದ ಮಾಧ್ಯಮ ‘ಡಾನ್’ ಪ್ರಕಾರ, ಪ್ರತಿಭಟನಾಕಾರರೊಬ್ಬರು, “ನಾವು ಹಲವು ವರ್ಷಗಳಿಂದ ರಕ್ತಪಾತವನ್ನು ನೋಡಿದ್ದೇವೆ. ಇನ್ನೊಂದು ತಲೆಮಾರಿನ ವಿಧವೆಯರು ಮತ್ತು ಅನಾಥರನ್ನು ನಾವು ನೋಡಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಶರೀಫ್ ಈ ಬಾಂಬ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.
ದೇಶದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಪಾಕಿಸ್ತಾನದ ಹೋರಾಟ ಮುಂದುವರಿಯುತ್ತದೆ ಎಂದು ಇಬ್ಬರೂ ನಾಯಕರು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಟಿಟಿಪಿ ಸಂಘಟನೆಯು ತನ್ನ ಆಡಳಿತವನ್ನು ಹೇರಲು 2007 ರಿಂದ ನಿರಂತರ ಹಿಂಸಾಚಾರ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದಾಳಿಗಳು ತೀವ್ರಗೊಂಡಿವೆ. ಕೇವಲ ಮೂರು ದಿನಗಳ ಹಿಂದಷ್ಟೇ ಹಂಗು ಜಿಲ್ಲೆಯ ಚೆಕ್ಪೋಸ್ಟ್ ಒಂದರಲ್ಲಿ ಸ್ಪೋಟಕ ತುಂಬಿದ ಡ್ರೋನ್ಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ 11 ಮಂದಿ ಪೊಲೀಸರು ಮೃತಪಟ್ಟಿದ್ದರು. ಜುಲೈ ಕೊನೆಯಲ್ಲಿ ಟ್ಯಾಂಕ್ ಪ್ರದೇಶದಲ್ಲಿ ನಡೆದ ಕಾರ್ ಬಾಂಬ್ ದಾಳಿಯಲ್ಲಿ 27 ಸೈನಿಕರು ಸಾವನ್ನಪ್ಪಿದ್ದರು. ತಮ್ಮ ವಿರುದ್ಧ ದಾಳಿ ನಡೆಸುವ ಸಶಸ್ತ್ರ ಗುಂಪುಗಳಿಗೆ ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಪದೇ ಪದೇ ಆರೋಪಿಸುತ್ತಿದೆ. ಆದರೆ ಅಫ್ಘಾನ್ ಈ ಆರೋಪವನ್ನು ನಿರಾಕರಿಸಿದೆ.



