- ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
- ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ
ಗಾಂಜಾ ಸೇದುತ್ತಿದ್ದ ಇಬ್ಬರು ವ್ಯಕ್ತಿಗಳೊಂದಿಗೆ ಇದ್ದ ವ್ಯಕ್ತಿ ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂಬ ಆತಂಕದಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ರೈಲ್ವೆ ಮೇಲ್ಸೇತುವೆಯಿಂದ ಬಿದ್ದು ಮೃತಪಟ್ಟಿದ್ದಾನೆ ಎಂಬ ಸಂಶಯ ವ್ಯಕ್ತವಾಗಿದೆ.
ಬೆಂಗಳೂರಿನ ರೈಲ್ವೆ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಶ್ರೀರಾಂಪುರದ ಸ್ವತಂತ್ರಪಾಳ್ಯದ ನಿವಾಸಿ ಅಬ್ರಹಾಂ(30) ಮೃತ ವ್ಯಕ್ತಿ ಎಂದು ಪತ್ತೆ ಮಾಡಲಾಗಿದೆ.
ಬೆಂಗಳೂರಿನ ಖಾಸಗಿ ಅಪಾರ್ಟ್ಮೆಂಟ್ ಬಳಿ ನಿರ್ಜನ ಪ್ರದೇಶದಲ್ಲಿ ಗಾಂಜಾ ಸೇದುತ್ತಿದ್ದ ಇಬ್ಬರು ವ್ಯಕ್ತಿಗಳ ಜೊತೆ ಅಬ್ರಹಾಂ ಕೂಡ ಇದ್ದ ಎಂದು ತಿಳಿದುಬಂದಿದೆ.
ಗಾಂಜಾ ಸೇದುತ್ತಿದ್ದ ಇಬ್ಬರನ್ನು ಪೊಲೀಸರು ಸೆರೆ ಹಿಡಿದಿದ್ದು, ತನ್ನನ್ನು ಸೆರೆಹಿಡಿಯಬಹುದು ಎಂದು ತಿಳಿದು ಅಬ್ರಹಾಂ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದಾನೆ. ಈ ವೇಳೆ, ಗಾಂಜಾ ಮತ್ತಿನಲ್ಲಿ ಓಡಿ ಹೋಗುವಾಗ ಅಬ್ರಹಾಂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? Beautiful Bengaluru | ನಗರದ ಅಂದ ಹೆಚ್ಚಿಸಿದ ಟಬೆಬೂಯ ಬಂದದ್ದು ಎಲ್ಲಿಂದ? ಇಲ್ಲಿದೆ ನೋಡಿ
ಪೊಲೀಸರ ಹಲ್ಲೆಯಿಂದ ಸಾವು; ಮೃತನ ತಂದೆ ಆರೋಪ
“ಅಬ್ರಹಾಂಗೆ ಈ ಹಿಂದೆ ಗಾಂಜಾ ಸೇದುವ ಚಟವಿತ್ತು. ಆದರೆ, ಈಗ ಎಲ್ಲ ಚಟಗಳನ್ನು ಬಿಟ್ಟು ಒಳ್ಳೆಯವನಾಗಿದ್ದನು. ಮಧ್ಯಾಹ್ನ ಮನೆಯಲ್ಲಿ ಊಟ ಮಾಡಿಕೊಂಡು ಕೆಲಸ ಇದ್ದ ಕಾರಣ ಹೊರಗಡೆ ಹೋಗಿದ್ದನು. ಅಬ್ರಹಾಂನನ್ನು ಸೆರೆ ಹಿಡಿದು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರೇ ಅವನ ಮೇಲೆ ಹಲ್ಲೆ ಮಾಡಿ ಕೊಂದಿದ್ದಾರೆ. ಅಬ್ರಹಾಂನ ದೇಹದ ಮೇಲೆ ಪೊಲೀಸರ ಬೂಟಿನ ಗುರುತುಗಳಿವೆ. ಮಗನ ಸಾವಿಗೆ ನ್ಯಾಯ ಬೇಕು” ಎಂದು ಅಬ್ರಹಾಂ ತಂದೆ ಶಂಕರ್ ತಿಳಿಸಿದ್ದಾರೆ.