- ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಬೇಕಾದರೆ ಪರಿಶೀಲನಾ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು
- ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.36 ಲಕ್ಷ ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ರೇಡಿಯೋ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಬೇಕಾದರೆ ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯದೆ ಜಾಹೀರಾತು ನೀಡಿದರೆ ಸಂಬಂಧಪಟ್ಟ ಅಭ್ಯರ್ಥಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಉಜ್ವಲ್ ಕುಮಾರ್ ಘೋಷ್ ತಿಳಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆ, ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಮಾಹಿತಿ ಕಾರ್ಯಾಗಾರ ನಡೆಯಿತು.
ಈ ವೇಳೆ ಮಾತನಾಡಿದ ಅವರು, “ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾಹಿಸುವ ಸಲುವಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ದೃಶ್ಯ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೇಲೆ ನಿಗಾವಹಿಸಲು 3 ಪಾಳಿಯಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಅವರು ನಿಗಾವಹಿಸಲಿದ್ದಾರೆ. ಪೂರ್ವಾನುಮತಿ ಪಡೆಯದ ಅಥವಾ ಪಾವತಿಸಿದ ಸುದ್ದಿಗಳು ಪ್ರಸಾರವಾದಲ್ಲಿ ಕೂಡಲೆ ಅದನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗೆ ರವಾನಿಸಿ ಅದನ್ನು ಪರಿಶೀಲಿಸಿ ಶೀಘ್ರ ವರದಿ ನೀಡಲು ಸೂಚನೆ ನೀಡಲಾಗುತ್ತದೆ” ಎಂದು ಹೇಳಿದರು.
ಪೋಸ್ಟಲ್ ಬ್ಯಾಲೆಟ್ನಲ್ಲಿ ಮತ ಚಲಾಯಿಸಿ
ನಗರದ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.36 ಲಕ್ಷ ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. ಹಾಗಾಗಿ, ಅವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶವಿದೆ. ನಾಮನಿರ್ದೇಶನಕ್ಕೂ ಮುಂಚಿತವಾಗಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು 80 ವರ್ಷ ಮೇಲ್ಪಟ್ಟವರ ಮನೆಗೆ ತೆರಳಿ ಪೋಸ್ಟಲ್ ಬ್ಯಾಲೆಟ್ ಹಾಕುವ ಬಗ್ಗೆ 12ಡಿ ಫಾರ್ಮ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ” ಎಂದರು.
“ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಇಚ್ಛಿಸುವವರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬಹುದು. ಪೋಸ್ಟಲ್ ಬ್ಯಾಲೆಟ್ ವೇಳೆ ಮತಪೆಟ್ಟಿಗೆಯ ಜತೆಗೆ ಇಬ್ಬರು ಅಧಿಕಾರಿಗಳು ಹಾಗೂ ವೀಡಿಯೋ ಗ್ರಾಫರ್ ತೆರಳಿ ಮತ ಹಾಕಿಸಿಕೊಂಡು ಬರಲಿದ್ದಾರೆ” ಎಂದು ಹೇಳಿದರು.
“ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ನಾನಾ ಪಕ್ಷಗಳಿಂದ ಆಯ್ಕೆಯಾದಂತಹ ಅಭ್ಯರ್ಥಿಗಳು ₹40 ಲಕ್ಷ ವ್ಯಯಿಸಲು ಮಾತ್ರ ಅವಕಾಶವಿರುತ್ತದೆ. ಯಾವುದಕ್ಕೆ ಎಷ್ಟು ಹಣ ವ್ಯಯಿಸಲಾಗಿದೆ ಎಂಬ ಬಗ್ಗೆ ಅಭ್ಯರ್ಥಿಗಳು ಅಧಿಕಾರಿಗಳಿಗೆ ನಿಖರ ಮಾಹಿತಿಯನ್ನು ನೀಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲೆಕ್ಕಕ್ಕಾಗಿ ಮರಗಳ ಸುತ್ತ ಬೈಂಡಿಂಗ್ ವೈರ್ ಬಿಗಿದ ಬಿಎಂಆರ್ಸಿಎಲ್
ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ
“ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಆಯ್ಕೆಯಾದ ಅಭ್ಯರ್ಥಿಗಳು https://encore.eci.gov.in ಎನ್ಕೋರ್ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ದಿನಾಂಕ, ಸಮಯವನ್ನು ನಿಗದಿಪಡಿಸಿಕೊಂಡು, ಆ ದಿನ ತೆರಳಿ ನಾಮಪತ್ರ ಸಲ್ಲಿಸಬಹುದು” ಎಂದು ಹೇಳಿದರು.
ಬ್ಯಾಂಕ್ ಖಾತೆಗಳ ಮೇಲೆ ನಿಗಾ
“ಒಂದೇ ಬ್ಯಾಂಕ್ ಖಾತೆಯಿಂದ ಹೆಚ್ಚು ಹಣ ವರ್ಗಾವಣೆಯಾಗುವುದು ಕಂಡುಬಂದರೆ ಅಂತವರ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳು ಬ್ಯಾಂಕ್ ಖಾತೆಗಳ ಮೇಲೆ ನಿಗಾವಹಿಸುತ್ತಿದ್ದಾರೆ” ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಟ್ರೈನಿಂಗ್ ನೋಡಲ್ ಅಧಿಕಾರಿಯಾದ ನಾಗರಾಜ್, ನಾಗೇಂದ್ರ ಹೊನ್ನವಳ್ಳಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.