ಮೋದಿಯವರದು ಏನಿದ್ದರೂ ಬರೀ ಮಾತು. ಆ ಮಾತು ಕೂಡ ಅವರಷ್ಟೇ ಆಡಬೇಕು. ವಿರೋಧ, ಟೀಕೆ, ಚರ್ಚೆ, ಸಂವಾದಕ್ಕೆ ಆಸ್ಪದವಿಲ್ಲ. ಪ್ರಶ್ನೆಗಳಿಗೆ ಉತ್ತರವಿಲ್ಲ. ಪ್ರಧಾನಿಯವರ ಮಾತುಗಳನ್ನು ಎಷ್ಟು ಜನ ಕೇಳುತ್ತಿದ್ದಾರೆ, ಏನು ಪ್ರಯೋಜನವಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ʻಮನ್ ಕಿ ಬಾತ್ʼ (ಮನದ ಮಾತು) ಎಂಬ ಮೂವತ್ತು ನಿಮಿಷಗಳ ರೇಡಿಯೋ ಕಾರ್ಯಕ್ರಮ 100ನೇ ಕಂತನ್ನು ಪೂರೈಸಿದೆ. ದೇಶದ ಜನರೊಂದಿಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಳ್ಳಲು, ದೇಶದ ಜನರ ಮಾತನ್ನು ತಾವು ಆಡಲು ಈ ರೇಡಿಯೋ ಕಾರ್ಯಕ್ರಮಕ್ಕೆ 2014ರ ಅಕ್ಟೋಬರ್ 3ರಂದು ಚಾಲನೆ ನೀಡಲಾಗಿತ್ತು. ಪ್ರಸಾರ ಭಾರತಿ ರೇಡಿಯೋ ವಾಹಿನಿ, ದೂರದರ್ಶನ, ಎಫ್ಎಂ ರೇಡಿಯೋ ವಾಹಿನಿಗಳು, ಮೋದಿ ಮತ್ತು ಪ್ರಧಾನಿ ಯೂಟ್ಯೂಬ್ ವಾಹಿನಿಗಳಲ್ಲೂ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ.
ಪ್ರಧಾನಿ ಕಾರ್ಯಾಲಯ ಮತ್ತು ಬಿಜೆಪಿ ಪ್ರಕಾರ ಇದು ಇಡೀ ದೇಶವೇ ಆಲಿಸುವ ಬಹಳ ಜನಪ್ರಿಯ ಕಾರ್ಯಕ್ರಮ.
೨೦೧೪ರಿಂದ ಇಲ್ಲಿಯವರೆಗೆ, ಮೋದಿಯವರು ʻಮನ್ ಕಿ ಬಾತ್ʼ ಮೂಲಕ ಹಲವಾರು ವಿಷಯಗಳನ್ನು ಕುರಿತು ಮಾತನಾಡಿದ್ದಾರೆ. ಹಲವು ಜನಪ್ರಿಯ ಅಭಿಯಾನಗಳಾದ ಸ್ವಚ್ಛ ಭಾರತ, ನಮಾಮಿ ಗಂಗೆ, ಬೇಟಿ ಬಚಾವೋ, ಬೇಟಿ ಪಢಾವೋ, ವಿಶ್ವ ಯೋಗ ದಿನ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಜೊತೆಗೆ ದೇಶದ ಮೂಲೆ ಮೂಲೆಗಳಲ್ಲಿ ಎಲೆಮರೆ ಕಾಯಿಯಂತಿದ್ದ ಪ್ರತಿಭೆಗಳನ್ನು ಹೆಕ್ಕಿ, ಅವರ ಸಾಧನೆಗಳ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.
ಮೋದಿಯವರ ʻಮನ್ ಕಿ ಬಾತ್ʼ 100 ಸಂಚಿಕೆಯನ್ನು ಇದೇ ಮೊದಲ ಬಾರಿಗೆ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಪ್ರಸಾರವಾಗುವಂತೆ ನೋಡಿಕೊಳ್ಳಲಾಗಿದೆ. ಇದರ ಜೊತೆಗೆ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಕೇಂದ್ರ ಸರ್ಕಾರ ನೂರನೇ ಸಂಚಿಕೆಯನ್ನು ಸ್ಮರಣೀಯಗೊಳಿಸಲು ೧೦೦ ರೂ. ಮುಖಬೆಲೆಯ ನಾಣ್ಯ ಮತ್ತು ಅಂಚಿಚೀಟಿಯನ್ನು ಹೊರತಂದಿದೆ.
ಮೋದಿಯವರ ಮನದ ಮಾತು ನೂರು ಕಂತು ಪೂರೈಸಿದ್ದನ್ನು ಮಹಾನ್ ಕೆಲಸವೆಂದು ಕೊಂಡಾಡಲಾಗುತ್ತಿದೆ. ಸುಧಾ ಮೂರ್ತಿಯಿಂದ ಹಿಡಿದು ಬಿಲ್ ಗೇಟ್ಸ್ ವರೆಗೆ ಮುಕ್ತಕಂಠದಿಂದ ಮೆಚ್ಚಿ ಮಾತನಾಡಿದ್ದಾರೆ. ಇದೊಂದೇ ಅಲ್ಲ, ಮೋದಿ ಅವರ ಪ್ರತಿಯೊಂದು ನಡೆ-ನುಡಿಯನ್ನು ಅದ್ಭುತ-ಅನನ್ಯ ಎನ್ನುವ ಮಟ್ಟಕ್ಕೆ ಕೊಂಡೊಯ್ಯುವ, ಕೊಂಡಾಡುವ ಕೆಲಸವಾಗುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರದ ಯಂತ್ರಾಂಗ, ಅಧಿಕಾರ ಮತ್ತು ಹಣ ಯಥೇಚ್ಛವಾಗಿ ಬಳಕೆಯಾಗುತ್ತಿದೆ.
ಮೋದಿಯವರ ಮನದ ಮಾತಿನಿಂದ ದೇಶದ ಬಡವರ, ನಿರ್ಗತಿಕರ, ಶೋಷಿತರ ಬದುಕು ಬದಲಾಗಿದೆಯೇ; ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರ ಬದಲಾವಣೆ ಕಂಡಿದೆಯೇ? ಹೀಗೆ ಪ್ರಶ್ನಿಸುವವರು ದೇಶದ್ರೋಹಿಗಳ ಪಟ್ಟಿ ಸೇರುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದ ಕುಸ್ತಿ ಫೆಡರೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರಣಿ ಕುಳಿತಿರುವ ಕುಸ್ತಿಪಟು ವಿನೇಶಾ ಫೋಗಟ್ ಎಂಬ ಹೆಣ್ಣುಮಗಳು, ʻನಿಮ್ಮ ಮನ್ ಕಿ ಬಾತ್ ಕೇಳಿದ್ದೇನೆ, ಈಗ ನಮ್ಮ ಮನ್ ಕಿ ಬಾತ್ ಕೇಳಿ ಪ್ರಧಾನಿಗಳೇʼ ಎಂದರೂ ಕಿವುಡರಂತೆ ವರ್ತಿಸುತ್ತಿದ್ದಾರೆ.
2022ರಲ್ಲಿ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ಸ್ಕೂಲಿಗೆ ಹೋಗುವ ಪುಟ್ಟ ಬಾಲಕಿ ಕೃತಿ ದುಬೇ ಮೋದಿ ಅವರಿಗೆ ಪತ್ರ ಬರೆದು, ʻನೀವು ಪೆನ್ಸಿಲ್, ರಬ್ಬರ್, ಮ್ಯಾಗಿಗಳ ಬೆಲೆ ಏರಿಕೆ ಮಾಡಿದ್ದೀರಿ, ಶಾಲೆಯಲ್ಲಿ ಮಕ್ಕಳು ನನ್ನ ಪೆನ್ಸಿಲ್ ಕದಿಯುತ್ತಾರೆ, ಅಮ್ಮನಿಗೆ ಹೊಸ ಪೆನ್ಸಿಲ್ ಕೇಳಿದರೆ ಹೊಡೆಯುತ್ತಾರೆʼ ಎಂದು ತನ್ನ ಕಷ್ಟವನ್ನು ಹೇಳಿಕೊಂಡಿದ್ದಳು. ಇದಕ್ಕೆ ಇಲ್ಲಿಯವರೆಗೆ 56 ಇಂಚಿನ ಪ್ರಧಾನಿಯವರಿಂದ ಉತ್ತರವಿಲ್ಲ. ಇದೇ ರೇಡಿಯೋ ಕಾರ್ಯಕ್ರಮದಲ್ಲಿ ಘೋಷಿಸಿದ ಬೇಟಿ ಬಚಾವೋ, ಬೇಟಿ ಪಢಾವೋ ಕಾರ್ಯಕ್ರಮಕ್ಕೆ ಏನಾದರೂ ಅರ್ಥವಿದೆಯೇ?
ಅಷ್ಟೇ ಅಲ್ಲ, 2020ರ ಸೆಪ್ಟೆಂಬರ್ 17ರಂದು ಪ್ರಸಾರವಾಗಿದ್ದ ʻನಿರುದ್ಯೋಗ ದಿನಾಚರಣೆʼ ಕಾರ್ಯಕ್ರಮ ಕುರಿತು, ʻನಿಮ್ಮ ಮಾತು ನಿಲ್ಲಿಸಿ, ನಮ್ಮ ಮಾತು ಕೇಳಿಸಿಕೊಳ್ಳಿ, ನಮಗೆ ಉದ್ಯೋಗ ನೀಡಿʼ ಎಂದು ಸಾವಿರಾರು ಸಂಖ್ಯೆಯ ನಿರುದ್ಯೋಗಿಗಳಿಂದ ಟೀಕೆ ವ್ಯಕ್ತವಾಗಿತ್ತು. ಕಾರ್ಯಕ್ರಮ ಪ್ರಸಾರವಾದ ಕೆಲವೇ ನಿಮಿಷಗಳಲ್ಲಿ 4.7 ಲಕ್ಷ ಡಿಸ್ ಲೈಕ್ ಬಂದಿದ್ದವು. ಅಂದಿನಿಂದ ಪ್ರತಿಕ್ರಿಯೆ ಹಾಗೂ ಲೈಕ್-ಡಿಸ್ಲೈಕ್ ವ್ಯಕ್ತಪಡಿಸುವ ಆಯ್ಕೆಯನ್ನೇ ತೆಗೆದುಹಾಕಲಾಯಿತು.
ಮೋದಿಯವರದು ಏನಿದ್ದರೂ ಬರೀ ಮಾತು. ಆ ಮಾತು ಕೂಡ ಅವರಷ್ಟೇ ಆಡಬೇಕು. ವಿರೋಧ, ಟೀಕೆ, ಚರ್ಚೆ, ಸಂವಾದಕ್ಕೆ ಆಸ್ಪದವಿಲ್ಲ. ಪ್ರಶ್ನೆಗಳಿಗೆ ಉತ್ತರವಿಲ್ಲ. ಪ್ರಧಾನಿಯವರ ಮಾತುಗಳನ್ನು ಎಷ್ಟು ಜನ ಕೇಳುತ್ತಿದ್ದಾರೆ, ಏನು ಪ್ರಯೋಜನವಾಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲ.
ನೂರನೇ ಕಂತನ್ನು ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ʻಮನ್ ಕಿ ಬಾತ್ನಲ್ಲಿ ನೀವು ಎರಡು ಮೋದಿ ಕಾಣಬಹುದು. ಪ್ರಬಲ, ಶಕ್ತಿಯುತ, ಉದ್ದೇಶಗಳನ್ನು ಸಂವಹನ ಮಾಡುವ ಮೋದಿ ಮತ್ತು ಮೃದು ಮಾತುಗಳ, ಕಾಳಜಿಯ ಮಾತನಾಡುವ ಮೋದಿʼ ಎಂದಿದ್ದಾರೆ.
ಹೌದು, ಅನುರಾಗ್ ಠಾಕೂರ್ ನಿಜವನ್ನೇ ಹೇಳಿದ್ದಾರೆ. ಮೋದಿಯವರ ಮಾತುಗಳು ವೇದಿಕೆಗೆ, ಸಂದರ್ಭಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತವೆ. ನಿರ್ಜನ ಕೋಣೆಯಲ್ಲಿ ಕೂತು ಉಪ್ಪಿಗಿಲ್ಲದ ಸೊಪ್ಪಿಗಿಲ್ಲದ ಮಾತುಗಳು ಭಕ್ತರಿಗಷ್ಟೇ ಹಿತವಾಗುತ್ತವೆ. ಇವರಿಂದ, ಇವರ ಮೋದಿಯವರಿಂದ ಈ ದೇಶ ವಿಶ್ವದ ಎದುರು ನಗೆಪಾಟಲಿಗೀಡಾದರೂ ಆಶ್ಚರ್ಯವಿಲ್ಲ.
After many days of my internet research finally I found neutral Digital Media in Kannada.
Yes this is what India wants, a strong neutral media which is essential for democracy