ಐದು ಗ್ಯಾರಂಟಿಗಳನ್ನು ಜಾರಿಗೆ ತಂದರೂ, ರಾಜ್ಯದ ಹಣಕಾಸಿನ ಸ್ಥಿತಿಗತಿ ಕೆಡದಂತೆ ನಿಭಾಯಿಸಿರುವುದು ಸಿದ್ದರಾಮಯ್ಯನವರ ಹೆಚ್ಚುಗಾರಿಕೆ. ಜೊತೆಗೆ ಸಂಪತ್ತಿನ ಮರುಹಂಚಿಕೆಯ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ; ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಮುನ್ನಡೆಸಿದ ಸಿದ್ದರಾಮಯ್ಯನವರು ಸದ್ಯಕ್ಕೆ ಬಜೆಟ್ ಚಾಂಪಿಯನ್.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ 76ರ ಹರೆಯ. ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಯಾವ ಇರಾದೆಯೂ ಇಲ್ಲ. ಆದರೆ ಸಿಕ್ಕಿರುವ ಅಧಿಕಾರವನ್ನು ಸಂಪೂರ್ಣವಾಗಿ ಅನುಭವಿಸುವ, ಐದು ವರ್ಷ ಪೂರೈಸುವ ಪುಟ್ಟ ಆಸೆ ಇದೆ. ಅದರ ನಡುವೆ ನಾಡಿನ ಜನತೆಗಾಗಿ ಒಂದಿಷ್ಟು ಮಾಡುವ ಮಹದಾಸೆಯೂ ಇದ್ದಂತಿದೆ. ಅದು ಬಜೆಟ್ನಲ್ಲಿ ಕಾಣುತ್ತಿದೆ.
ಫೆ. 16ರಂದು ದಾಖಲೆಯ 15ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಬಜೆಟ್ ಮುಖಪುಟಕ್ಕೆ ಭಾರತದ ಸಂವಿಧಾನದ ಪ್ರಸ್ತಾವನೆಯ ಚಿತ್ರ ಬಳಸಿದ್ದು- ಅಂಬೇಡ್ಕರ್ ಗೆ ಸಲ್ಲಿಸಿದ ಗೌರವವಾಗಿದೆ. ಬಜೆಟ್ ಭಾಷಣದುದ್ದಕ್ಕೂ ನಾಡಿನ ಸಾಕ್ಷಿಪ್ರಜ್ಞೆಗಳಾದ ರಾಜಕುಮಾರ್, ಕುವೆಂಪು, ಸಿದ್ದಲಿಂಗಯ್ಯ, ಬಸವಣ್ಣನವರ ಆಶಯದ ನುಡಿಗಳನ್ನು ಬಳಸಿದ್ದು- ನೊಂದವರ ಪರ ಎನ್ನುವ ಸಂದೇಶವನ್ನು ರವಾನಿಸಿದೆ.
ಹಾಗೆಯೇ, ಬಜೆಟ್ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಹಣದುಬ್ಬರ ಇದೆ ಎಂದು ಒಪ್ಪಿಕೊಂಡಿದ್ದಾರೆ. ಏಕೆಂದರೆ, ಅಂಗೈಯಲ್ಲಿ ಅರಮನೆ ತೋರಿಸುವ ರಾಜಕಾರಣಿಗಳು ಸತ್ಯವನ್ನು ಒಪ್ಪಿಕೊಳ್ಳುವುದು ಕಷ್ಟವಿರುವ ಕಾಲದಲ್ಲಿ; ದೇಶ ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿದೆ ಎಂದು ಬೊಬ್ಬೆ ಹಾಕುವವರ ನಡುವೆ ಸಿದ್ದರಾಮಯ್ಯನವರ ನಡೆ ಮತ್ತು ನುಡಿ ಭಿನ್ನವಾಗಿ ಕಾಣುತ್ತದೆ.
ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ, ಆದಕಾರಣ ಕಾಂಗ್ರೆಸ್ ಸರ್ಕಾರ ಬಡವರಿಗೆ ಶಕ್ತಿ ತುಂಬಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಪ್ರತೀ ಕುಟುಂಬಕ್ಕೆ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿಯಷ್ಟು ಮೂಲ ಆದಾಯ ಖಾತರಿಯಾಗುತ್ತದೆ. ಬಡವರ ಕೈಗೆ ಹೆಚ್ಚಿನ ಹಣ ಸಿಕ್ಕಿ ಬದುಕಿನ ಬಂಡಿ ಸರಾಗವಾಗಿ ಉರುಳಿದರೆ, ಆರ್ಥಿಕ ಚಕ್ರ ತಿರುಗಲಿದೆ ಎಂಬ ಸಿದ್ದರಾಮಯ್ಯನವರ ಆಶಯ, ಅನುಷ್ಠಾನಕ್ಕೂ ಬಂದಿದೆ. ಅದು ಅರ್ಥಶಾಸ್ತ್ರಜ್ಞರಿಗೂ ಅರ್ಥವಾಗಿದೆ.
ಕಳೆದ ಒಂಭತ್ತು ತಿಂಗಳ ಹಿಂದೆ, ತರಾತುರಿಯಲ್ಲಿ 14ನೇ ಬಜೆಟ್ ಮಂಡಿಸಿದಾಗ, ಅದರ ಗಾತ್ರ 3.27 ಲಕ್ಷ ಕೋಟಿಯಷ್ಟಿತ್ತು. ಸಿದ್ದರಾಮಯ್ಯನವರು, ಜನತೆಗೆ ಗ್ಯಾರಂಟಿಗಳ ಆಶ್ವಾಸನೆ ಕೊಟ್ಟಿದ್ದೇವೆ, ಈಡೇರಿಸುತ್ತೇವೆ, ಇದು ಗ್ಯಾರಂಟಿ ಬಜೆಟ್ ಎಂದಿದ್ದರು. ಜೊತೆಗೆ ಸಂಪತ್ತಿನ ಮರುಹಂಚಿಕೆಯ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯವೊಂದನ್ನು ಬರೆಯುವ ಇರಾದೆಯನ್ನೂ ವ್ಯಕ್ತಪಡಿಸಿದ್ದರು. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಮುನ್ನಡೆಸುವ ಮಾತುಗಳನ್ನೂ ಆಡಿದ್ದರು.
ಕಳೆದ ಒಂಭತ್ತು ತಿಂಗಳ ಆಡಳಿತ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾದ ಆರ್ಥಿಕ ಚಲನಶೀಲತೆಯನ್ನು ಗಮನಿಸಿದರೆ, ಸಿದ್ದರಾಮಯ್ಯನವರ ಆರ್ಥಿಕ ಶಿಸ್ತು ಎದ್ದುಕಾಣತ್ತದೆ. ಅದು ಈಗ ಚರ್ಚೆಯ ವಸ್ತುವಾಗಿದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದರೂ, ರಾಜ್ಯದ ಹಣಕಾಸಿನ ಸ್ಥಿತಿಗತಿ ಕೆಡದಂತೆ ನಿಭಾಯಿಸಿರುವುದು ಸಿದ್ದರಾಮಯ್ಯನವರ ಹೆಚ್ಚುಗಾರಿಕೆ ಎಂದೇ ಹೇಳಬೇಕಾಗಿದೆ.
ರಾಜಸ್ವ ಕೊರತೆ ಇರಬಹುದು, ವಿತ್ತೀಯ ಕೊರತೆ ಇರಬಹುದು, ಸಾಲ ಮಾಡಿರಬಹುದು. ಸರ್ಕಾರಿ ವೆಚ್ಚ ಹೆಚ್ಚಳವಾಗಿ, ಆದಾಯ ಇಳಿಮುಖವಾಗಿರಬಹುದು. ಆದರೆ ಅದೆಲ್ಲವೂ ಇತಿಮಿತಿಯಲ್ಲಿಯೇ ಇದೆ. ರಾಜ್ಯ ಭೀಕರ ಬರಗಾಲ ಎದುರಿಸುತ್ತಿದ್ದರೂ; ಬಿಟ್ಟಿ ಗ್ಯಾರಂಟಿಗಳಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ವಿರೋಧ ಪಕ್ಷಗಳ ಟೀಕೆಗಳಿದ್ದರೂ; ಕೇಂದ್ರ ಸರಕಾರದಿಂದ ಪರಿಹಾರ ಬರದಿದ್ದರೂ- ಆಡಳಿತ ಮತ್ತು ಹಣಕಾಸಿನ ಸ್ಥಿತಿಗತಿ ಏರುಪೇರಾಗದಂತೆ ನೋಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯನವರಲ್ಲದೆ ಬೇರೆ ಯಾರೇ ಇದ್ದರೂ ಇದನ್ನು ನಿಭಾಯಿಸುವುದು ಕಷ್ಟವಿತ್ತು ಎನ್ನುವುದು ಆರ್ಥಿಕ ತಜ್ಞರ ಮಾತಾಗಿದೆ.
ಇಲ್ಲಿ, ಸಿದ್ದರಾಮಯ್ಯನವರ ರಾಜಕಾರಣದ ಹಾದಿಯನ್ನು ಗಮನಿಸಬೇಕಾದ ಅಗತ್ಯವಿದೆ. 1983ರಲ್ಲಿ ಭಾರತೀಯ ಲೋಕದಳದಿಂದ ಚುನಾವಣಾ ರಾಜಕಾರಣಕ್ಕಿಳಿದಾಗ ಅವರಿಗೆ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಮಾರ್ಗದರ್ಶನವಿತ್ತು. ಆನಂತರ ಜನತಾಪಕ್ಷಕ್ಕೆ ಬಂದಾಗ, ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಮತ್ತು ಜೆ.ಎಚ್. ಪಟೇಲರೊಂದಿಗೆ ಆಪ್ತವಾಗಿ ಬೆರೆಯುವ, ಬೆಳೆಯುವ ಅವಕಾಶ ಸಿಕ್ಕಿತ್ತು. ಆ ಮೂವರ ವ್ಯಕ್ತಿತ್ವ ಸಿದ್ದರಾಮಯ್ಯನವರಲ್ಲಿ ಸಂಚಯಗೊಂಡಿದೆ. ನಲವತ್ತು ವರ್ಷಗಳ ರಾಜಕೀಯ ಅನುಭವ ಬಜೆಟ್ನಲ್ಲಿ ಕಾಣುತ್ತಿದೆ.
‘ಗ್ಯಾರಂಟಿಗೂ ಕೊಟ್ಟಿದ್ದೇವೆ, ಅಭಿವೃದ್ಧಿಯನ್ನೂ ಮಾಡಿದ್ದೇವೆ’ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಸರ್ಕಾರಿ ಕಾರ್ಯಕ್ರಮಗಳು ನೂರಕ್ಕೆ ನೂರು ಪರ್ಸೆಂಟ್ ಜನರಿಗೆ ತಲುಪುವುದಿಲ್ಲವೆಂಬ ಸತ್ಯ ಗೊತ್ತಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವುದು ಕಷ್ಟ ಎನ್ನುವುದೂ ತಿಳಿದಿದೆ. ರಾಜ್ಯದ ಅಭಿವೃದ್ಧಿ ಮತ್ತು ಹಣಕಾಸಿನ ಸ್ಥಿತಿಯ ಅರಿವೂ ಇದೆ. ಇದೆಲ್ಲ ಗೊತ್ತಿರುವ ಸಿದ್ದರಾಮಯ್ಯನವರಿಗೆ ನಿಭಾಯಿಸುವುದೇ ನಿಜವಾದ ಗೆಲುವಲ್ಲ ಎಂಬ ಎಚ್ಚರವೂ ಇರಲಿ.
Intaha anubhavi rajakarani Badavara Ashakirana, Srama Jeevi, Garanteegala saradara, Badavara Bhagyavidhatha, Ivarige Ayassu, arogya chennagirali Endu Harisuva, B.Raj