ದೇಶದ ಕಾರ್ಪೊರೇಟ್ ಕುಳಗಳಿಗೆ 10 ಲಕ್ಷ ಕೋಟಿ; ರೈತರಿಗೆ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿಯವರ ಸರ್ಕಾರದ ವಿರುದ್ಧ ನ್ಯಾಯಯುತ ಬೇಡಿಕೆಗಳಿಗಾಗಿ ದೆಹಲಿಯತ್ತ ಹೊರಟ ಸಹಸ್ರಾರು ರೈತರಿಗೆ ಮುಳ್ಳಿನ ಬೇಲಿ ನಿರ್ಮಿಸಿದೆ. ಪ್ರಧಾನಿ ಮೋದಿಯವರ ಸರ್ಕಾರ ರೈತರೊಂದಿಗೆ ಯುದ್ಧಕ್ಕೆ ನಿಂತಿದೆಯೇ? ರೈತರು ಈ ದೇಶದ ಶತ್ರುಗಳೇ? ಇದು ಮನುಷ್ಯರು ಮಾಡುವ ಕೆಲಸವೇ?
ದೇಶದ ರಾಜಧಾನಿ ದೆಹಲಿಯತ್ತ ಹೊರಟ ಸಹಸ್ರಾರು ರೈತರನ್ನು ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಗಡಿಯಲ್ಲಿ ತಡೆದು ನಿಲ್ಲಿಸಲಾಗಿದೆ. ರೈತರು ದಿಲ್ಲಿಯತ್ತ ಬರಬಾರದೆಂದು ರಸ್ತೆಗೆ ಬ್ಯಾರಿಕೇಡ್ಗಳ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ರೈತರು ಬರುವ ಹಾದಿಗೆ ಕಬ್ಬಿಣದ ಚೂಪಾದ ಮುಳ್ಳುಗಳನ್ನು ನೆಡಲಾಗಿದೆ. ರಸ್ತೆಗಳಿಗೆ ಕಬ್ಬಿಣದ ಮುಳ್ಳುಗಳಿರುವ ತಂತಿ ಬೇಲಿ ಕಟ್ಟಲಾಗಿದೆ. ಕ್ರೇನ್ ಬಳಸಿ ದೊಡ್ಡ ದೊಡ್ಡ ಸೈಜಿನ ಕಾಂಕ್ರೀಟ್ ಬ್ಲಾಕ್ಗಳನ್ನು ರಸ್ತೆಗೆ ಅಡ್ಡ ಇಡಲಾಗಿದೆ. ಇದನ್ನೂ ಭೇದಿಸಿ ಬಂದ ರೈತರೊಂದಿಗೆ ಅರೆಸೇನಾ ಪಡೆ, ಕ್ಷಿಪ್ರ ಕಾರ್ಯಪಡೆ ಮತ್ತು ಶಸ್ತ್ರಸಜ್ಜಿತ ಪೊಲೀಸರು ಸಂಘರ್ಷಕ್ಕೆ ಇಳಿದಿದ್ದಾರೆ. ರೈತರ ಮೇಲೆ ರಬ್ಬರ್ ಗುಂಡಿನ ದಾಳಿ, ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗಿದೆ. ಅಷ್ಟೇ ಅಲ್ಲ, ಗಡಿಭಾಗದಲ್ಲಿ ಶಸ್ತ್ರಾಸ್ತ್ರಗಳ ದೊಡ್ಡ ಸಂಗ್ರಹವನ್ನು ಸನ್ನದ್ಧು ಸ್ಥಿತಿಯಲ್ಲಿಡಲಾಗಿದೆ.
ಪ್ರಧಾನಿ ಮೋದಿಯವರ ಸರ್ಕಾರ ರೈತರೊಂದಿಗೆ ಯುದ್ಧಕ್ಕೆ ನಿಂತಿದೆಯೇ? ರೈತರು ಈ ದೇಶದ ಶತ್ರುಗಳೇ? ಇದು ಮನುಷ್ಯರು ಮಾಡುವ ಕೆಲಸವೇ? ಅಷ್ಟಕ್ಕೂ ರೈತರಿಗಾಗಿ ಪ್ರಧಾನಿ ಮೋದಿಯವರು ಮಾಡಿರುವುದಾದರು ಏನು?
2023ರ ಡಿಸೆಂಬರ್ನಲ್ಲಿ ಮೋದಿಯವರ ಸರ್ಕಾರದ ಉಪಹಣಕಾಸು ಸಚಿವರು ಸಾಲ ಮನ್ನಾದ ಬಗ್ಗೆ ಲೆಕ್ಕ ಕೊಟ್ಟಿದ್ದರು. ಅವರು ಸುದ್ದಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ದೇಶದ ರೈತರಿಗೆ 3 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಈ ಸಾಲ ಮನ್ನಾ ಮಾಡಿದ್ದರಲ್ಲಿ ಮೋದಿಯವರ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಪಾಲು ರಾಜ್ಯ ಸರ್ಕಾರಗಳದ್ದಾಗಿತ್ತು. ಇನ್ನು, ಫಲಾನುಭವಿಗಳ ಪಟ್ಟಿಯಲ್ಲಿ ದೊಡ್ಡ ರೈತರು, ಕಾರ್ಪೊರೇಟ್ ರೈತರು, ಮಧ್ಯಮ ರೈತರು, ಸಣ್ಣ ಮತ್ತು ಅತಿ ಸಣ್ಣ ರೈತರು- ಎಲ್ಲರೂ ಇದ್ದರು.
ಇದೇ ಸಮಯದಲ್ಲಿ, ದೇಶದ ಬಹು ದೊಡ್ಡ ಉದ್ಯಮಿಗಳಿಗೆ, ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿದ್ದು ಬರೋಬ್ಬರಿ 10.42 ಲಕ್ಷ ಕೋಟಿ ರೂಪಾಯಿಗಳು. ಆ ಬಹುದೊಡ್ಡ ಉದ್ಯಮಿಗಳ ಸಂಖ್ಯೆ ಕೇವಲ ಆರು ಸಾವಿರ. ಆದರೆ, ದೇಶದ ಜನಸಂಖ್ಯೆಯಲ್ಲಿ ಶೇ. 60ರಷ್ಟಿರುವ ರೈತರ ಸಾಲ ಮನ್ನಾ ಮಾಡಿದ್ದು ಕೇವಲ 3 ಲಕ್ಷ ಕೋಟಿ.
ರೈತರ ಬೇಡಿಕೆಗಳಲ್ಲಿ ಒಂದಾಗಿರುವ ಸಾಲ ಮನ್ನಾ ವಿಷಯ ಕುರಿತು ಮೋದಿಯವರು ಮತ್ತವರ ಭಕ್ತರು, ಬಿಸ್ಕೆಟ್ ತಿಂದ ಪತ್ರಕರ್ತರು- ದೇಶದ ಆರ್ಥಿಕ ಸ್ಥಿತಿಗೆ ಹೊಡೆತ ಬೀಳುತ್ತದೆ, ಹಣಕಾಸು ಸ್ಥಿತಿ ಏರುಪೇರಾಗುತ್ತದೆ, ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ- ಎಂಬ ರೆಡಿಮೇಡ್ ಉತ್ತರ ಕೊಡುತ್ತಾರೆ.
ಹಾಗಾದರೆ, ಕಾರ್ಪೊರೇಟ್ ಕುಳಗಳಿಗೆ ಕೊಟ್ಟಿರುವ ಸಾಲ, ಮಾಡಿರುವ ಮನ್ನಾ ದೇಶದ ಆರ್ಥಿಕ ಸ್ಥಿತಿಗೆ ಧಕ್ಕೆ ತರುವುದಿಲ್ಲವೇ?
ದೇಶದ ಉದ್ದಿಮೆದಾರರಿಗೆ ಬ್ಯಾಂಕ್ಗಳು ಪ್ರತಿವರ್ಷ ಕೊಡುವ ಸಾಲ ಸುಮಾರು 140 ಲಕ್ಷ ಕೋಟಿ ರೂಪಾಯಿಗಳು. ಅದರಲ್ಲಿ 80 ಲಕ್ಷ ಕೋಟಿ ರೂಪಾಯಿಗಳ ಫಲಾನುಭವಿಗಳು ಆರು ಸಾವಿರವಿರುವ ಬಹುದೊಡ್ಡ ಉದ್ಯಮಿಗಳು. ಅಂದರೆ ಅದಾನಿ-ಅಂಬಾನಿಗಳಂತಹ ಕಾರ್ಪೊರೇಟ್ ಕುಳಗಳು.
2020ರಲ್ಲಿ ಪ್ರಧಾನಿ ಮೋದಿಯವರು ಸಾಲ ಮನ್ನಾ ಮಾಡುವುದಾಗಿ ಮತ್ತು ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾನೂನು ಖಾತರಿಗೆ ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದ್ದರು. ಮೂರು ವರ್ಷಗಳಾದರೂ ಮೋದಿಯವರು ಕೊಟ್ಟ ಭರವಸೆ ಈಡೇರಿಸಲಿಲ್ಲ. ಅವರ ವಚನಭ್ರಷ್ಟತೆಯ ವಿರುದ್ಧ ಈಗ ಅನ್ನದಾತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದು ರೈತರ ನ್ಯಾಯಯುತ ಪ್ರತಿಭಟನೆ. ಅನ್ನ ತಿನ್ನುವ ಮನುಷ್ಯರು ಬೆಂಬಲಿಸಬೇಕಾದ ಪ್ರತಿಭಟನೆ.
ದುರದೃಷ್ಟಕರ ಸಂಗತಿ ಎಂದರೆ, ಇಡೀ ದೇಶ ಮೌನಕ್ಕೆ ಜಾರಿದೆ. ಮಾರಿಕೊಂಡ ಮಾಧ್ಯಮಗಳು ತಿರುಚಿದ ಸುದ್ದಿಗಳನ್ನು ಪ್ರಕಟಿಸಿ ಮೋದಿಯವರನ್ನು ಖುಷಿಪಡಿಸುವುದರಲ್ಲಿ ನಿರತವಾಗಿವೆ. ಆದರೆ ಈ ದೇಶವಿನ್ನೂ ಮೋದಿಮಯವಾಗಿಲ್ಲ ಎಂಬುದನ್ನು ಹೇಳಲು, ಮಾನವಂತರು ಆಡಬೇಕಾದ್ದನ್ನು ಆಡುತ್ತಿದ್ದಾರೆ. ದೇಶವನ್ನು ಎಚ್ಚರದ ಸ್ಥಿತಿಯಲ್ಲಿಟ್ಟಿದ್ದಾರೆ.
ನಿನ್ನೆ ದೆಹಲಿಯಲ್ಲಿ ಪ್ರೊ. ಎಂ.ಎಸ್. ಸ್ವಾಮಿನಾಥನ್ ಅವರಿಗೆ ಸಂದ ಭಾರತ ರತ್ನ ಪ್ರಶಸ್ತಿಯ ಸಲುವಾಗಿ ಆಯೋಜಿಸಲಾಗಿದ್ದ ಗೌರವಾರ್ಥ ಸಭೆಯಲ್ಲಿ, ”ಪಂಜಾಬ್ನ ರೈತರು ಇಂದು ದೆಹಲಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಅವರನ್ನು ತಡೆಯಲು ಬ್ಯಾರಿಕೇಡ್ ಗೋಡೆ ಕಟ್ಟಲಾಗಿದೆ, ಅವರನ್ನು ತುಂಬಲು ಜೈಲುಗಳನ್ನು ಸಿದ್ಧಪಡಿಸಲಾಗಿದೆ. ಅವರು ರೈತರು, ಅಪರಾಧಿಗಳಲ್ಲ. ಭಾರತದ ಪ್ರಮುಖ ವಿಜ್ಞಾನಿಗಳಾದ ನಿಮ್ಮೆಲ್ಲರಲ್ಲಿ ನಾನು ವಿನಂತಿಸುತ್ತೇನೆ, ನಾವು ನಮ್ಮ ಅನ್ನದಾತರೊಂದಿಗೆ ಮಾತನಾಡಬೇಕು, ಅವರನ್ನು ಅಪರಾಧಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ನಾವು ಪರಿಹಾರಗಳನ್ನು ಕಂಡುಕೊಳ್ಳಬೇಕು. ದಯವಿಟ್ಟು ಇದು ನನ್ನ ವಿನಂತಿ, ನಾವು ಎಂಎಸ್ ಸ್ವಾಮಿನಾಥನ್ ಅವರನ್ನು ಮುಂದುವರಿಸಬೇಕಾದರೆ ಮತ್ತು ಗೌರವಿಸಬೇಕಾದರೆ, ರೈತರನ್ನು ನಮ್ಮೊಂದಿಗೆ ಕರೆದೊಯ್ಯಬೇಕು” ಎಂದು ಸ್ವಾಮಿನಾಥನ್ ಅವರ ಪುತ್ರಿ, ಅರ್ಥಶಾಸ್ತ್ರಜ್ಞೆ ಡಾ. ಮಧುರ ಸ್ವಾಮಿನಾಥನ್, ದೇಶದ ಗಣ್ಯರು, ಚಿಂತಕರಲ್ಲಿ ಮನವಿ ಮಾಡಿಕೊಂಡರು. ಅವರ ಮಾತುಗಳು ಸೂಕ್ತ ಮತ್ತು ಸಕಾಲಿಕ.
ಮೋದಿಯವರಲ್ಲಿ ಮನುಷ್ಯತ್ವವಿದ್ದರೆ ಡಾ. ಮಧುರ ಸ್ವಾಮಿನಾಥನ್ ಅವರ ಮಾತುಗಳನ್ನು ಆಲಿಸಲಿ. ದೇಶವೆಂದರೆ ಮಣ್ಣಲ್ಲ, ಮನುಷ್ಯರು ಎಂಬುದನ್ನು ಅರಿಯಲಿ.