ಓದಿದ್ದು ಪಿಯುಸಿ, ವೃತ್ತಿ ಮೆಡಿಕಲ್ ಮೇಷ್ಟ್ರು; ‘ದೈತ್ಯ ಸಂಹಾರಿ’ ಪ್ರದೀಪ್ ಈಶ್ವರ್ ನಿಜಕ್ಕೂ ಎಂಥವರು?

Date:

 

ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ ಜನರ ಕೆಲಸ ಮಾಡುವುದನ್ನು ಬಿಟ್ಟು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಪ್ರದೀಪ್ ಈಶ್ವರ್ ನಿಜಕ್ಕೂ ಎಂಥವರು ಎನ್ನುವದನ್ನು ತಿಳಿಯಲು ಅವರ ಬೆನ್ನು ಹತ್ತಿದಾಗ ಸಿಕ್ಕ ವಿವರಗಳು ಇಲ್ಲಿವೆ


‘ಖಾಲಿ ಜೇಬು, ಖಾಲಿ ಹೊಟ್ಟೆ, ಒಡೆದ ಹೃದಯ ಏನು ಬೇಕಾದರೂ ಕಲಿಸುತ್ತೆ..’

ಇದು ‘ಮುಂಗಾರು ಮಳೆ’ ಖ್ಯಾತಿಯ ಗಣೇಶ್‌ನ ಸಿನಿಮಾ ಡೈಲಾಗ್ ಅಲ್ಲ; ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಡಾ.ಕೆ ಸುಧಾಕರ್ ಅವರನ್ನು ಸೋಲಿಸಿ ‘ದೈತ್ಯ ಸಂಹಾರಿ’ ಎಂದೇ ಹೆಸರು ಪಡೆದ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಡಿರುವ ಒಂದು ಮಾತು. ಇಂಥ ಮಾತುಗಳಿಂದಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಮನ ಗೆದ್ದ ಪ್ರದೀಪ್ ಈಶ್ವರ್ ಈಗ ಯೂತ್ ಐಕಾನ್ ಎನ್ನುವ ಮಟ್ಟಿಗೆ ಸುದ್ದಿಯಾಗುತ್ತಿದ್ದಾರೆ. ಆದರೆ, ಚುನಾವಣಾ ಕಾಲದಲ್ಲಿ ಪ್ರದೀಪ್ ಈಶ್ವರ್ ಆಡಿದ ಮಾತುಗಳು, ನೀಡಿದ ಮಾಹಿತಿ ಮತ್ತು ಅವರ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಬೇರೊಂದು ಚಿತ್ರಣ ಸಿಗುತ್ತಿದೆ.   

ಚಿಕ್ಕಬಳ್ಳಾಪುರದ ಶಾಸಕರಾಗಿದ್ದ ಡಾ.ಕೆ ಸುಧಾಕರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರದೀಪ್ ಈಶ್ವರ್ ಹೆಸರು ಘೋಷಣೆ ಆದಾಗ ಹಲವರು ಅಚ್ಚರಿ ಪಟ್ಟಿದ್ದರು. ವೈದ್ಯಕೀಯ ಓದಲು ಬಯಸುವವರಿಗೆ ನೀಟ್ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ‘ಪರಿಶ್ರಮ ಅಕಾಡೆಮಿ’ ಮೂಲಕ ಒಂದಿಷ್ಟು ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಮಾತ್ರ ಗೊತ್ತಿದ್ದವರು ಪ್ರದೀಪ್ ಈಶ್ವರ್. ಅವರು ‘ಪರಿಶ್ರಮ’ದ ಸ್ಥಾಪಕರು ಅಷ್ಟೇ ಅಲ್ಲ, ಅದರಲ್ಲಿ ಪಾಠವನ್ನೂ ಮಾಡುವವರು. ಅವರೇ ಹೇಳಿಕೊಂಡಂತೆ, ಅವರು ವಿದ್ಯಾರ್ಥಿಗಳ ನಡುವೆ ತುಂಬಾ ಖ್ಯಾತರಾದ ಮೇಷ್ಟ್ರು.  

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು ಖಚಿತ: ಶಾಸಕ ಕೆ.ಎನ್ ರಾಜಣ್ಣ

‘ಸುಧಾಕರ್ ಮೆಡಿಕಲ್ ಮಿನಿಸ್ಟರ್ ಆದರೆ, ನಾನು ಮೆಡಿಕಲ್ ಮೇಷ್ಟ್ರು’ ಎಂದು ಪ್ರದೀಪ್ ಈಶ್ವರ್ ಚುನಾವಣಾ ಪ್ರಚಾರದ ವೇಳೆ ಪಂಚ್ ಡೈಲಾಗ್ ಹೊಡೆದಿದ್ದರು. ಮೆಡಿಕಲ್ ಮೇಷ್ಟ್ರು ಎಂದು ತಮ್ಮನ್ನು ತಾವು ಕರೆದುಕೊಳ್ಳುವ, ಚಾನೆಲ್‌ವೊಂದರಲ್ಲಿ ತಾನು ಎಂಎಸ್‌ಸಿ ಓದಿದ್ದೇನೆ ಎಂದು ಹೇಳಿಕೊಂಡಿರುವ ಪ್ರದೀಪ್ ಈಶ್ವರ್ ನಿಜವಾದ ವಿದ್ಯಾರ್ಹತೆ ಎಷ್ಟು ಗೊತ್ತೆ? ಕೇವಲ ಪಿಯುಸಿ! ಇದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರೇ ದಾಖಲಿಸಿರುವ ಮಾಹಿತಿ. ಪ್ರದೀಪ್ ಈಶ್ವರ್‌ 2

ಪಿಯುಸಿ ಓದಿದವರು ನೀಟ್ ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡುತ್ತಾರೆ ಎನ್ನುವ ಅರ್ಹತೆಯ ಹಾಗೂ ನೈತಿಕತೆಯ ಅಂಶಗಳನ್ನು ಸದ್ಯ ಪಕ್ಕಕ್ಕಿಡೋಣ. ಅದು ಅವರ ಕೌಶಲ್ಯ ಎಂದೇ ಅಂದುಕೊಳ್ಳೋಣ. ಪಾಠ ಮಾಡುವಾಗ ಅವರು ಯಾವುದಕ್ಕೆ ಜನಪ್ರಿಯ ಗೊತ್ತೆ? ವ್ಯಕ್ತಿತ್ವ ವಿಕಸನ ತರಗತಿಗಳಿಗೆ. ಅವು ಹೇಗೆ ನಡೆಯುತ್ತವೆ ಎನ್ನುವುದು ಸ್ವಾರಸ್ಯಕರವಾಗಿದೆ. ಒಂದು ಕಲ್ಯಾಣ ಮಂಟಪವನ್ನೋ, ಗೋಡೌನ್ ಅನ್ನೋ ಬುಕ್ ಮಾಡಿ ಅಲ್ಲಿ 500ರಿಂದ 1000 ವಿದ್ಯಾರ್ಥಿಗಳನ್ನು ಕೂಡಿ ಹಾಕಿ ಅವರಿಗೆ ಪ್ರದೀಪ್ ಈಶ್ವರ್ ‘ಪ್ರವಚನ’ ನೀಡುತ್ತಾರೆ. ಆ ಪ್ರವಚನದಲ್ಲಿ ಭಗವದ್ಗೀತೆಯ ಶ್ಲೋಕಗಳು, ನೀತಿ ಕಥೆಗಳು, ಗಾಂಧಿ ಎಲ್ಲರೂ ಬಂದು ಹೋಗುತ್ತಾರೆ. ಅದರ ಜೊತೆಗೆ ಅವರ ವೈಯಕ್ತಿಕ ಜೀವನದ ಘಟನೆಗಳನ್ನೂ ಸೇರಿಸಿ ವಿದ್ಯಾಭ್ಯಾಸ, ಬದುಕು ಎಲ್ಲವನ್ನೂ ತಮಗೆ ತೋಚಿದಂತೆ ವ್ಯಾಖ್ಯಾನಿಸುತ್ತಾ ಹೋಗುತ್ತಾರೆ. ಅದಕ್ಕೆ ಅವರು ಕೊಟ್ಟಿರುವ ಹೆಸರು ವ್ಯಕ್ತಿತ್ವ ವಿಕಸನ ತರಗತಿ.

ನೀಟ್ ಲಾಂಗ್ ಟರ್ಮ್ ಕೋಚಿಂಗ್‌ಗೆ ಪ್ರದೀಪ್ ಈಶ್ವರ್ ಒಬ್ಬ ವಿದ್ಯಾರ್ಥಿಗೆ ವಿಧಿಸುವ ಶುಲ್ಕ 3 ಲಕ್ಷ ರೂಪಾಯಿ. ಸದ್ಯ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಸುಮಾರು 2000 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅಂದರೆ, ಪ್ರದೀಪ್ ಈಶ್ವರ್ ಅವರ ವಾರ್ಷಿಕ ಸಂಪಾದನೆ 60 ಕೋಟಿ ರೂಪಾಯಿ. ಈ ದುಡ್ಡಿನ ಹರಿವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಅವರು ‘ಇನ್ನು ಆರು ವರ್ಷದಲ್ಲಿ ನಾನು ಮೆಡಿಕಲ್ ಕಾಲೇಜ್ ಮಾಲೀಕನಾಗುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಅಪ್ಪ ಅಮ್ಮ ಆತ್ಮಹತ್ಯೆಗೆ ಪ್ರಯತ್ನಿಸಿ ಅಕಾಲಿಕವಾಗಿ ಸಾವನ್ನಪ್ಪಿದ್ದು, ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಇದ್ದುದು ತಾನು ಮೆಡಿಕಲ್ ಮೇಷ್ಟ್ರಾಗಲು, ಮೆಡಿಕಲ್ ಕಾಲೇಜ್ ಕಟ್ಟುವ ಕನಸು ಹೊಂದಲು ಕಾರಣ ಎನ್ನುವುದು ಪ್ರದೀಪ್ ಈಶ್ವರ್ ಸಮಜಾಯಿಷಿ.      

ಇನ್ನು ಅವರ ರಾಜಕೀಯ ಬದುಕಿಗೆ ಬರೋಣ. ಪ್ರದೀಪ್ ಈಶ್ವರ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಗ್ರಾಮದವರು. ಡಾ.ಕೆ ಸುಧಾಕರ್ ಕೂಡ ಅದೇ ಗ್ರಾಮದವರು. ಚಿಕ್ಕವಯಸ್ಸಿನಲ್ಲೇ ಅಪ್ಪ ಅಮ್ಮನನ್ನು ಕಳೆದುಕೊಂಡಿದ್ದ ಪ್ರದೀಪ್ ಈಶ್ವರ್ ಕಷ್ಟಪಟ್ಟು ಬೆಳೆದವರು. ಸಿದ್ದಗಂಗಾ ಮಠದಲ್ಲಿ ಒಂದಷ್ಟು ಕಾಲ ವಿದ್ಯಾಭ್ಯಾಸ ಮಾಡಿದರು. ನಂತರ ಟ್ಯೂಷನ್‌ಗಳನ್ನು ಮಾಡುತ್ತಾ ‘ಪರಿಶ್ರಮ’ದವೆರೆಗೆ ಬೆಳೆದರು.

ಪ್ರದೀಪ್ ಈಶ್ವರ್‌ 3
ತಾಲ್ಲೂಕಿನ ಬಹುಸಂಖ್ಯಾತ ಬಲಿಜ ಸಮುದಾಯಕ್ಕೆ ಸೇರಿದ ಪ್ರದೀಪ್ ಈಶ್ವರ್, 2018ರ ಚುನಾವಣೆಯಲ್ಲಿ ತಮ್ಮದೇ ಸಮುದಾಯದ ನವೀನ್ ಕಿರಣ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗ ಅವರ ಪರವಾಗಿ ಪ್ರಚಾರ ಮಾಡುವ ಮೂಲಕ ರಾಜಕೀಯ ವಲಯದ ಗಮನ ಸೆಳೆದಿದ್ದರು. ತಮ್ಮ ವಾಕ್ ಚಾತುರ್ಯದ ಮೂಲಕ ಸುಧಾಕರ್ ಅವರನ್ನು ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಕೇಳಿ ಸುಧಾಕರ್ ವಿರೋಧ ಕಟ್ಟಿಕೊಂಡಿದ್ದರು. ಅದರ ಫಲವಾಗಿ ಪ್ರದೀಪ್ ಈಶ್ವರ್ ಜೈಲಿಗೂ ಹೋಗಿಬಂದರು. ಚುನಾವಣೆಯಲ್ಲಿ ಸುಧಾಕರ್ ಗೆದ್ದ ನಂತರ ಕ್ಷೇತ್ರ ಬಿಟ್ಟಿದ್ದರು. ನಂತರ ಸುಧಾಕರ್ ಜೊತೆ ಸಂಬಂಧ ಸರಿಪಡಿಸಿಕೊಂಡು ಅವರ ಜೊತೆ ಚೆನ್ನಾಗಿಯೇ ಇದ್ದರು. ಎಷ್ಟರ ಮಟ್ಟಿಗೆ ಎಂದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪ್ರದೀಪ್ ಈಶ್ವರ್‌ಗೆ ಘೋಷಣೆಯಾದಾಗ ಅನೇಕರು ಅವರನ್ನು ಸುಧಾಕರ್ ಅವರ ಬೇನಾಮಿ ಎಂದಿದ್ದರು. ಅದಕ್ಕೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದ ಅವರು, ‘ತಾನು ಬೇನಾಮಿ ಅಲ್ಲ ಸುನಾಮಿ’ ಎಂದಿದ್ದರು.

ಪ್ರದೀಪ್ ಈಶ್ವರ್ ಅವರ ಬಂಡವಾಳ ಅವರ ಧೈರ್ಯ ಮತ್ತು ಮಾತು. ತಮ್ಮ ಮಾತಿನಲ್ಲಿ ಜನಪ್ರಿಯ ಸಿನಿಮಾ ಡೈಲಾಗ್‌ಗಳನ್ನು, ಭಗವದ್ಗೀತೆ ಶ್ಲೋಕಗಳನ್ನು ಧಾರಾಳವಾಗಿ ಬಳಸುತ್ತಾರೆ. ಚುನಾವಣಾ ಭಾಷಣಗಳಲ್ಲಿ ಅವರ ಮಾತಿನ ಧಾಟಿ ಕಂಡಿದ್ದ ಕೆಲವರು ಈತ ಅಂಬೇಡ್ಕರ್‌ವಾದಿ ಇರಬಹುದೇ ಎಂದುಕೊಂಡಿದ್ದರು. ಆದರೆ, ಅವರೇ ಹೇಳಿಕೊಂಡಂತೆ, ಪ್ರದೀಪ್ ಈಶ್ವರ್ ವಿಶ್ವೇಶರ್ ಭಟ್ ಮತ್ತು ಪ್ರತಾಪ್ ಸಿಂಹನ ವೀರಾಭಿಮಾನಿ. ‘ವಿಶ್ವೇಶ್ವರ ಭಟ್ ನನ್ನ ಆರಾಧ್ಯ ದೈವ’ ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ಎಲ್ಲ ಪುಸ್ತಕಗಳನ್ನೂ ಒಂದಲ್ಲ ಹಲವು ಬಾರಿ ಓದಿಕೊಂಡು, ಅವುಗಳಿಂದ ಪ್ರಭಾವಿತನಾಗಿದ್ದಾಗಿ ಅವರು ಹೇಳಿದ್ದಾರೆ. ಅವರ ಬರಹಗಳನ್ನು ಓದಿಯೇ ತನ್ನಲ್ಲಿ ಅಗ್ರೆಸ್ಸೀವ್ ಪರ್ಸನ್ ಹುಟ್ಟಿದ್ದಾನೆ ಎನ್ನುವುದು ಅವರ ಅಭಿಪ್ರಾಯ. ಅಲ್ಲಿಗೆ ಅವರು ಅಂಬೇಡ್ಕರ್ ಅವರನ್ನು ಓದಿಲ್ಲ ಎನ್ನುವುದು, ಅವರು ಚುನಾವಣಾ ಕಾಲದಲ್ಲಿ ದಲಿತರ ಮತ ಸೆಳೆಯುವುದಕ್ಕಾಗಿ ಮಾತ್ರವೇ ಅಂಬೇಡ್ಕರ್ ಹೆಸರನ್ನು ಬಳಸಿದ್ದಾರೆ ಎನ್ನುವುದು ಖಚಿತವಾಗುತ್ತದೆ.

ಈ ಸುದ್ದಿ ಓದಿದ್ದೀರಾ: ಕಷ್ಟ ಪಟ್ಟಿದ್ದೀವಿ, ಕೂಲಿ ಕೊಡಿ ಎಂದು ನಮ್ಮ ನಾಯಕರನ್ನು ಕೇಳುತ್ತೇವೆ: ಡಿ ಕೆ ಸುರೇಶ್‌

ಇದೆಲ್ಲ ಏನೇ ಇದ್ದರೂ ಪ್ರದೀಪ್ ಈಶ್ವರ್ ಚುನಾವಣೆಯಲ್ಲಿ ಸುಧಾಕರ್ ಅವರನ್ನು ಮಣಿಸಿದ್ದಾರೆ. ಅವರ ಸಮುದಾಯದ ಮತಗಳು, ಅಹಿಂದ ಮತಗಳು, ಸುಧಾಕರ್ ಅವರ ಆಡಳಿತ ವಿರೋಧಿ ಅಲೆ ಎಲ್ಲದರ ಮೊತ್ತ ಅವರ ಫಲಿತಾಂಶ. ಗೆದ್ದ ಮೇಲಾದರೂ ಪ್ರದೀಪ್ ಈಶ್ವರ್ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕೇವಲ ವಾಕ್ಚಾತುರ್ಯ ತನ್ನನ್ನು ಬಹು ದೂರ ಕರೆದುಕೊಂಡು ಹೋಗದು ಎನ್ನುವುದನ್ನೂ ಅವರು ಅರಿಯಬೇಕಿದೆ. ಸಿ ಎಂ ಇಬ್ರಾಹಿಂ ಅತ್ಯುತ್ತಮ ವಾಗ್ಮಿ. ಆದರೆ, ಅವರು ಅತ್ಯುತ್ತಮ ರಾಜಕಾರಣಿ ಆಗಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ, ಕಾಂಗ್ರೆಸ್‌ ಶಾಸಕರಾಗಿರುವ ಪ್ರದೀಪ್ ಈಶ್ವರ್, ಪ್ರತಾಪ್ ಸಿಂಹ, ವಿಶ್ವೇಶ್ವರ ಭಟ್ಟರನ್ನು ಬಿಟ್ಟು ಕುವೆಂಪು, ಲಂಕೇಶ್, ತೇಜಸ್ವಿಯಂಥವರನ್ನು ಓದುವುದನ್ನು ಆರಂಭಿಸಬೇಕಿದೆ; ಅಂಬೇಡ್ಕರ್ ಚಿಂತನೆಗಳನ್ನು ಅರಿಯಬೇಕಿದೆ; ಕಾಂಗ್ರೆಸ್‌ನ ಸಿದ್ಧಾಂತ, ಹಿನ್ನೆಲೆ, ಕಾರ್ಯಕ್ರಮಗಳು ಎಲ್ಲವನ್ನೂ ಅಧ್ಯಯನ ಮಾಡಬೇಕಿದೆ.

ಪ್ರದೀಪ್ ಈಶ್ವರ್‌ 4ಕರ್ನಾಟಕದಲ್ಲಿ ಹೀಗೆ ಟ್ಯೂಷನ್‌ಗಳನ್ನು ಮಾಡುವ ಮೂಲಕ ಖ್ಯಾತಿ ಪಡೆದು ನಂತರ ಶಾಸಕರಾದವರು ಚನ್ನಪಟ್ಟಣದ ಡಿ ಟಿ ರಾಮು. ಅವರು ಮಾಜಿ ಶಾಸಕ ಡಿ ಟಿ ಜಯಕುಮಾರ್ ಅವರ ಸಹೋದರ. ಇದೀಗ ಪ್ರದೀಪ್ ಈಶ್ವರ್ ಅದೇ ರೀತಿ ರಾಜಕಾರಣಕ್ಕೆ ಅಡಿಯಿಟ್ಟಿದ್ದಾರೆ. ವಿಶೇಷ ಅಂದರೆ, ‘ನಾನು ಚುನಾವಣೆಗೆ ನಿಂತು, ಗೆದ್ದು ಶಾಸಕನಾಗಿ ಆಯ್ಕೆಯಾಗಿ, ಶಿಕ್ಷಣ ಸಚಿವರಾಗಿ ನಿಮಗೆಲ್ಲಾ ಸರ್ಟಿಫಿಕೇಟ್ ವಿತರಿಸಲು ಬರುತ್ತೇನೆ’ ಎಂದು ಪ್ರದೀಪ್ ಈಶ್ವರ್ ತನ್ನ ಪರಿಶ್ರಮ ಅಕಾಡಮಿಯ ವಿದ್ಯಾರ್ಥಿಗಳಿಗೆ ಹೇಳಿ ಬಂದಿದ್ದರಂತೆ!

ಡಾ.ಕೆ ಸುಧಾಕರ್ ಪತನಕ್ಕೆ ಕಾರಣವಾಗಿದ್ದು ಕೂಡ ಇಂಥದ್ದೇ ಮಹತ್ವಾಕಾಂಕ್ಷೆ ಎನ್ನುವುದನ್ನು ಪ್ರದೀಪ್ ಈಶ್ವರ್ ಅರಿತು ನಡೆದರೆ ಒಳ್ಳೆಯದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪ್ರದೀಪ್ ಈಶ್ವರ್ ಮತ್ತೊಬ್ಬ ಸಿ.ಎಂ.ಇಬ್ರಾಹಿಂ ಆಗದಿರಲಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಛಲಬಿಡದೆ ಬರಪರಿಹಾರ ತಂದ ಕಾಂಗ್ರೆಸ್‌ಗೆ ಜನ ಮೆಚ್ಚುಗೆ; ಯಾರು ಏನಂದರು?

ಬಿಜೆಪಿ ನಾಯಕರು ಎಷ್ಟೇ ಸುಳ್ಳು ಹೇಳಿದರೂ ಕುಗ್ಗದೆ, ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ...

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...