ರಾಜ್ಯದಲ್ಲಿ ಮತದಾನ ರಂಗು ಹೆಚ್ಚಾಗಿದೆ. ಎಲ್ಲೆಡೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಇಷ್ಟು ದಿನ ಚುನಾವಣಾ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆ ಹಂಚುತ್ತಿದ್ದದ್ದು ಕಂಡುಬರುತ್ತಿತ್ತು. ಆದರೆ, ಈಗ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂದು ಹಲವು ಮಂದಿ ಬೆಟ್ಟಿಂಗ್ ಭರಾಟೆಯಲ್ಲಿ ಮುಳುಗಿರುವುದು ಕಂಡುಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿ ಗೆಲ್ಲುತ್ತಾರೆಂದು ಕೆಲವರು ಬೆಟ್ಟಿಂಗ್ ಮಾಡಿದ್ದರೆ, ಇನ್ನೂ ಕೆಲವರು ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುರಿತೂ ಬೆಟ್ಟಿಂಗ್ ಮಾಡಿದ್ದಾರೆ. ಬೆಟ್ಟಿಂಗ್ ಅಖಾಡದಲ್ಲಿ ಹಣ, ಕುರಿ, ಕೋಳಿ, ತೋಟಗಳನ್ನೂ ಪಣಕ್ಕಿಟ್ಟಿರುವುದು ತಿಳಿದುಬಂದಿದೆ.
ಮೈಸೂರು, ಚಾಮರಾಜನಗರ, ತುಮಕೂರು, ಹುಬ್ಬಳ್ಳಿ, ಯಾದಗಿರಿ, ಬೀದರ್, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಬೆಟ್ಟಿಂಗ್ ಜೋರಾಗಿದೆ. ಹಲವರು ಹಣವನ್ನು ಪಣಕ್ಕಿಟ್ಟಿದ್ದರೆ, ಮತ್ತಷ್ಟು ಮಂದಿ ತಮ್ಮ ಬಳಿಯಿರುವ ವಸ್ತುಗಳನ್ನು ಪಣಕ್ಕಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಕೈ ಕಾರ್ಯಕರ್ತರೊಬ್ಬರು ತಮ್ಮ ಎರಡು ಎಕರೆ ಭೂಮಿಯನ್ನೇ ಪಣಕ್ಕೆ ಇಟ್ಟಿದ್ದಾರೆ ಎನ್ನಲಾಗಿದೆ. ದೇವದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೆಲ್ಲುತ್ತಾರೆಂದು ಅಲ್ಲಿನ ರೈತನೊಬ್ಬ ತನ್ನ ಮೂರು ಎಕರೆ ಜಮೀನನನ್ನು ಪಣಕ್ಕಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈ ಸುದ್ದಿ ಓದಿದ್ದೀರಾ?: ಮೈಸೂರು | ಮತಗಟ್ಟೆಯತ್ತ ಸುಳಿಯದ ಮತದಾರರು; ಖಾಲಿ ಕುಳಿತ ಅಧಿಕಾರಿಗಳು
ಇನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಲಕರ್ಣಿ ಗೆಲ್ಲುತ್ತಾರೆಂದು ಬಸವರಾಜ ಬೆಂಡಿಗೇರಿ ಎಂಬಾತ ತನ್ನ ಮಗನಿಗೆ ‘ವಿನಯ’ ಎಂದು ಹೆಸರಿಟ್ಟಿದ್ದಾರೆ. ವಿನಯ್ ಸೋತರೆ, ತನ್ನ ಮಗನ ಹೆಸರನ್ನು ಬದಲಿಸುವುದಾಗಿ ಹೇಳಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆಂದು ಕಾರ್ಯಕರ್ತನೊಬ್ಬ 10 ಲಕ್ಷ ರೂ. ಬೆಟ್ಟಿಂಗ್ ಮಾಡಿದ್ದಾನೆ. ಆದರೆ, ಜೆಡಿಎಸ್ ಪರವಾಗಿ ಅಷ್ಟು ಮೊತ್ತದ ಬೆಟ್ಟಿಂಗ್ ಮಾಡಲು ಯಾರು ಮುಂದೆ ಬಂದಿಲ್ಲವೆಂದು ತಿಳಿದುಬಂದಿದೆ.