ಕಾಳೇನಹಳ್ಳಿಯ ಧನಂಜಯ ʼಡಾಲಿʼ ಆದ ಕಥೆ

Date:

ನಟ ಡಾಲಿ ಧನಂಜಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಮೇ 31ಕ್ಕೆ ಧನಂಜಯ ನಟನೆಯ ಚೊಚ್ಚಲ ಚಿತ್ರ ‘ಡೈರೆಕ್ಟರ್‌ ಸ್ಪೆಷಲ್‌’ ಬಿಡುಗಡೆಯಾಗಿ 10 ವರ್ಷಗಳ ಕಳೆದಿವೆ. ಈ ಹಿನ್ನೆಲೆ ಅವರ ಆಪ್ತರು ಮತ್ತು ಅಭಿಮಾನಿಗಳು ಮಂಗಳವಾರ ಮೈಸೂರಿನಲ್ಲಿ ಅದ್ದೂರಿಯಾಗಿ ದಶಮಾನೋತ್ಸವ ಆಚರಿಸಿ, ನಟನನ್ನು ಆತ್ಮೀಯವಾಗಿ ಅಭಿನಂದಿಸಿದ್ದಾರೆ.

ಅರಸಿಕೆರೆ ತಾಲ್ಲೂಕಿನ ಕಾಳೇನಹಳ್ಳಿಯ ಮಧ್ಯಮ ಕುಟುಂಬದ ಧನಂಜಯ ಇವತ್ತಿಗೆ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ. ಚಿತ್ರರಂಗದ ಯಾವುದೇ ಹಿನ್ನೆಲೆ ಇರದ ಈತ ಬೆಳೆದ ಬಂದು ಹಾದಿಯೇ ರೋಚಕ. ಕಾಲೇಜು ದಿನಗಳಿಂದಲೂ ಧನಂಜಯ್‌ಗೆ ರಂಗಭೂಮಿಯ ಜೊತೆಗಿದ್ದ ನಂಟು ಇನ್ಫೋಸಿಸ್‌ ಸಂಸ್ಥೆಯಲ್ಲಿದ್ದ ಕೆಲಸವನ್ನು ತೊರೆದು ನಟನೆಯತ್ತ ಮುಖ ಮಾಡಲು ಪ್ರೇರಣೆಯಾಯಿತು.

ʼಮಠʼ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ನಿರ್ದೇಶನದ 2013ರ ಮೇ 31ರಂದು ತೆರೆಕಂಡ ʼಡೈರೆಕ್ಟರ್‌ ಸ್ಪೆಷಲ್‌ʼ ಚಿತ್ರದ ಮೂಲಕ ಧನಂಜಯ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾದರು. ನಂತರ ʼರಾಮಾ ರಾಮಾ ರೇʼ ಖ್ಯಾತಿಯ ಡಿ ಸತ್ಯಪ್ರಕಾಶ್‌ ನಿರ್ದೇಶನದ ʼಜಯನಗರ ಫೊರ್ತ್‌ ಬ್ಲಾಕ್‌ʼ ಕಿರುಚಿತ್ರದಲ್ಲಿ ನಟಿಸಿ ತಕ್ಕ ಮಟ್ಟಿಗೆ ಗುರುತಿಸಿಕೊಂಡರು. ಇದಾದ ಬಳಿಕ ʼರಾಟೆʼ, ʼಬಾಕ್ಸರ್‌ʼ, ʼಜೆಸ್ಸೀʼ, ʼಬದ್ಮಾಶ್‌ʼ, ʼಅಲ್ಲಮʼ, ʼಎರಡನೇ ಸಲʼ ಮುಂತಾದ ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡರಾದರೂ ನಿರೀಕ್ಷಿತ ಯಶಸ್ಸು ದಕ್ಕಿರಲಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಧನಂಜಯ ಅವರನ್ನು ನಟ ರಾಕ್ಷಸನ ಪಟ್ಟಕ್ಕೇರಿಸಿದ್ದು ʼಡಾಲಿʼಯ ಪಾತ್ರ. ದುನಿಯಾ ಸೂರಿ ನಿರ್ದೇಶನದ, ಶಿವರಾಜ್‌ ಕುಮಾರ್‌ ಮುಖ್ಯಭೂಮಿಕೆಯ ʼಟಗರುʼ ಚಿತ್ರದಲ್ಲಿ ಧನಂಜಯ, ʼಡಾಲಿʼಯಾಗಿ ಜೀವಿಸಿದ್ದರು. ಅದಾಗಲೇ ನಾಯಕ ನಟನಾಗಿ ಗುರುತಿಸಿಕೊಂಡಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ಮಾಡಿದ್ದ ಅದೊಂದು ಪಾತ್ರ ಅವರ ಸಿನಿ ಬದುಕಿಗೆ ಮಹತ್ತರ ತಿರುವು ನೀಡಿತು. ಡಾಲಿ ಧನಂಜಯ ಎಂದೇ ಖ್ಯಾತಿ ಗಳಿಸಿದ ಅವರು ಟಗರು ಚಿತ್ರದ ಯಶಸ್ಸಿನ ಬಳಿಕ ʼಯಜಮಾನʼ, ʼಯುವರತ್ನʼ, ʼಪೊಗರುʼ, ʼಸಲಗʼ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಅದೇ ಸಿದ್ಧಮಂತ್ರಕ್ಕೆ ಜೋತು ಬೀಳದೆ ʼಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಮೂಲಕ ಮತ್ತೆ ನಾಯಕ ನಟನಾಗಿ ಪ್ರೇಕ್ಷಕರನ್ನು ಎದುರುಗೊಂಡರು.

ಲಾಕ್‌ಡೌನ್‌ ಬಳಿಕ ತೆರೆಗೆ ಬಂದ ʼರತ್ನನ್‌ ಪ್ರಪಂಚʼ ಯಶಸ್ಸು ಕಂಡಿತು. ಅದರ ಬೆನ್ನಲ್ಲೇ ತೆರೆಕಂಡ ತೆಲುಗಿನ ʼಪುಷ್ಪʼ ಸಿನಿಮಾ ಧನಂಜಯ ಅವರಿಗೆ ಬಹುಭಾಷಾ ನಟನ ವರ್ಚಸ್ಸು ತಂದುಕೊಟ್ಟಿತು. ಹಲವು ವರ್ಷಗಳ ಕಾಲ ಏಳು ಬೀಳುಗಳನ್ನು ಕಂಡು ಸ್ಟಾರ್‌ ನಟರ ಸಾಲಿನಲ್ಲಿ ನಿಂತ ಧನಂಜಯ ತಮ್ಮ ವೃತ್ತಿ ಬದುಕಿಗೆ ತಿರುವು ನೀಡಿದ, ಜನಮೆಚ್ಚಿದ ʼಡಾಲಿʼ ಪಾತ್ರದ ಹೆಸರಲ್ಲೇ ʼಡಾಲಿ ಪಿಕ್ಚರ್ಸ್‌ʼ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು. ʼಬಡವ ರಾಸ್ಕಲ್‌ʼ ಸಿನಿಮಾದಲ್ಲಿ ನಟಿಸಿದ್ದು ಮಾತ್ರವಲ್ಲದೇ, ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಯಶಸ್ವಿ ನಿರ್ಮಾಪಕ ಎನ್ನಿಸಿಕೊಂಡರು. ಡಾನ್‌ ಜಯರಾಜ್‌ ಜೀವನಾಧಾರಿತ ʼಹೆಡ್‌ ಬುಷ್‌ʼ ಸಿನಿಮಾಗೂ ಧನಂಜಯ ಅವರೇ ಬಂಡವಾಳ ಹೂಡಿದ್ದು. “ಬಡವರ ಮಕ್ಕಳು ಬೇಳಿಬೇಕು ಕಣ್ರಯ್ಯಾ” ಎನ್ನುವ ಸ್ನೇಹಜಿವಿ ಧನಂಜಯ, ತಮ್ಮ ʼಡಾಲಿ ಪಿಕ್ಚರ್ಸ್‌ʼ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಹೊಸಬರ ʼಆರ್ಕೆಸ್ಟ್ರಾ ಮೈಸೂರುʼ, ʼಡೇರ್‌ ಡೆವಿಲ್‌ ಮುಸ್ತಾಫಾʼ ಸಿನಿಮಾಗಳನ್ನು ತಮ್ಮದೇ ಬ್ಯಾನರ್‌ನಡಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ʼಟಗರು ಪಲ್ಯʼ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೇ ಗೀತ ರಚನೆಕಾರನಾಗಿಯೂ ಧನಂಜಯ ಗುರುತಿಸಿಕೊಂಡಿದ್ದಾರೆ.

ಚೊಚ್ಚಲ ಚಿತ್ರದಲ್ಲೇ ʼಸೈಮಾ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿʼಯನ್ನು ಗೆದ್ದುಕೊಂಡಿದ್ದ ಧನಂಜಯ, ʼಅಲ್ಲಮʼ ಚಿತ್ರದಲ್ಲಿನ ನಟನೆಗಾಗಿ ʼಫಿಲ್ಮ್‌ಫೇರ್‌ ಅತ್ಯುತ್ತಮ ನಟʼ, ʼಬಸವರತ್ನ ಪ್ರಶಸ್ತಿʼ, ʼಟಗರುʼ ಚಿತ್ರದಲ್ಲಿನ ಡಾಲಿಯ ಪಾತ್ರಕ್ಕಾಗಿ ʼಸೈಮಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿʼ, ʼಫಿಲ್ಮ್‌ಫೇರ್‌ ಅತ್ಯುತ್ತಮ ಖಳನಟ ಪ್ರಶಸ್ತಿʼ, ʼಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಚಿತ್ರದಲ್ಲಿನ ನಟನೆಗಾಗಿ ʼಸೈಮಾ ಅತ್ಯುತ್ತಮ ನಟ ಪ್ರಶಸ್ತಿʼಗೆ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ಧನಂಜಯ ಮುಖ್ಯಭೂಮಿಕೆಯ ʼಹೊಯ್ಸಳʼ ಸಿನಿಮಾ ಭರ್ಜರಿ ಯಶಸ್ಸುಕಂಡಿದೆ. ರಮ್ಯಾ ಜೊತೆಗಿನ ʼಉತ್ತರಕಾಂಡʼ ಸಿನಿಮಾ ಈಗಾಗಲೇ ಸೆಟ್ಟೇರಿದೆ. ತೆಲುಗಿನ ʼಪುಷ್ಟ-2ʼ, ʼಝೀಬ್ರಾʼ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಧನಂಜಯ, ʼಪಾಯುಮ್‌ ಒಲಿ ನೀ ಎನಕ್ಕುʼ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...