ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಮತ್ತು ಪೂರ್ಣ ಸಚಿವ ಸಂಪುಟ ಇಂದು (ಸೋಮವಾರ-ಆ.3) ರಚನೆಯಾಗಿದೆ. ಸಂಪುಟದಲ್ಲಿ ಹೊಸ ಮುಖಗಳಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಈ ಹಿಂದೆ, ಸಿದ್ದರಾಮಯ್ಯ ನೇತೃತ್ವದ 2023–2026ರ ಸರ್ಕಾರದಲ್ಲಿ ಸಚಿವರಾಗಿದ್ದ ಒಂಬತ್ತು ಮಂದಿಯನ್ನು ಹೊಸ ಸಂಪುಟದಲ್ಲಿ ಕೈಬಿಡಲಾಗಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಚ್.ಕೆ ಪಾಟೀಲ, ಕೆ.ಎನ್ ರಾಜಣ್ಣ, ಎನ್.ಎಸ್ ಬೋಸರಾಜು, ದಿನೇಶ್ ಗುಂಡೂರಾವ್, ಶಿವಾನಂದ ಪಾಟೀಲ, ಎಸ್. ಎಸ್. ಮಲ್ಲಿಕಾರ್ಜುನ, ರಹೀಂ ಖಾನ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆ. ವೆಂಕಟೇಶ್ ಅವರಿಗೆ ಹೊಸ ಸಂಪುಟದಲ್ಲಿ ಸ್ಥಾನ ನೀಡಲಾಗಿಲ್ಲ.
ಈ ಪೈಕಿ, ಕೆ.ಎನ್ ರಾಜಣ್ಣ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ 2025ರಿಂದ ಸಂಪುಟದಿಂದ ಕೈಬಿಡಲಾಗಿತ್ತು.
ಕೆ.ಎನ್ ರಾಜಣ್ಣ ಸೇರಿದಂತೆ, ಎಚ್.ಕೆ. ಪಾಟೀಲ, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಹಾಗೂ ಶಿವಾನಂದ ಪಾಟೀಲ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಹಲವು ಮಹತ್ವದ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು.
This video cannot be played in your browser. Open the video directly
ಆದಾಗ್ಯೂ, ಇದೇ ವರ್ಷದ ಮೇ ಅಂತ್ಯದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿ, ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರು. ಬಳಿಕ, ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಯಿತು. ಆ ವೇಳೆ, ಮೊದಲ ಹಂತದಲ್ಲಿ 13 ಸಚಿವರೊಂದಿಗೆ ಸಂಪುಟ ರಚಿಸಿದ್ದರು. ಇದೀಗ, ಸಂಪುಟವನ್ನು ವಿಸ್ತರಣೆ ಮಾಡಲಾಗಿದೆ. 20 ಮಂದಿ ಸಚಿವರ ನೇಮಕದೊಂದಿಗೆ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದೆ. ಈ ವಿಸ್ತರಣೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸೂತ್ರದಂತೆ ಹಲವು ಹೊಸ ಮುಖಗಳು, ಪ್ರಾದೇಶಿಕ ಸಮೀಕರಣಗಳು, ಸಮುದಾಯಗಳ ಪ್ರಾತಿನಿಧ್ಯ ಹಾಗೂ ರಾಜಕೀಯ ಸಮತೋಲನಕ್ಕೆ ಆದ್ಯತೆ ನೀಡಲಾಗಿದೆ.
ಈ ಲೇಖನ ಓದಿದ್ದೀರಾ?: ಸುದ್ದಿ ವಿವರ | ಹೊಸ ‘ಪರೀಕ್ಷೆ ತಿದ್ದುಪಡಿ ಮಸೂದೆ’ಯಲ್ಲಿ ಏನಿದೆ?
ಹೊಸ ಸಂಪುಟದಲ್ಲಿ ಪಿ.ಎಂ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಕೆ.ಎಸ್ ಬಸವಂತಪ್ಪ, ರಿಜ್ವಾನ್ ಅರ್ಷದ್, ಟಿ ರಘುಮೂರ್ತಿ, ಪುಟ್ಟರಂಗಶೆಟ್ಟಿ, ಡಾ. ಅಜಯ್ ಸಿಂಗ್, ಕೆ.ಎಂ ಶಿವಲಿಂಗೇಗೌಡ, ಎಚ್.ಸಿ ಬಾಲಕೃಷ್ಣ, ಗಾಯತ್ರಿ ಶಾಂತೇಗೌಡ, ಬಸವರಾಜ್ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್ ಹಾಗೂ ಲಕ್ಷ್ಮಣ ಸವದಿ ಸೇರಿದಂತೆ ಹಲವು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಗಮನಾರ್ಹವಾಗಿ, ಬಿ. ನಾಗೇಂದ್ರ ಅವರ ವಿರುದ್ಧ ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ’ ನಿಧಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು 2024ರಲ್ಲಿ ರಾಜೀನಾಮೆ ನೀಡಿದ್ದರು. ಇದೀಗ, ಸಂಪುಟದಲ್ಲಿ ಅವರಿಗೆ ಮರಳಿ ಸ್ಥಾನ ನೀಡಲಾಗಿದೆ.
ಆದರೆ, ಸಂಪುಟದಿಂದ ಹೊರಗುಳಿದ 10 ಮಂದಿ ಮಾಜಿ ಸಚಿವರ ಭವಿಷ್ಯದ ರಾಜಕೀಯ ಪಾತ್ರದ ಬಗ್ಗೆ ಕಾಂಗ್ರೆಸ್ ನಾಯಕತ್ವ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇವರಲ್ಲಿ ಕೆಲವರಿಗೆ ಪಕ್ಷದ ಸಂಘಟನೆ, ನಿಗಮ-ಮಂಡಳಿಗಳು ಸೇರಿದಂತೆ ಪ್ರಮುಖ ಹುದ್ದೆಗಳನ್ನು ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.




