ಕಾವೇರಿ ನೀರು ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆಯು ಒಗ್ಗಟ್ಟಿನ ಹೋರಾಟ ಪ್ರದರ್ಶಿಸಲು ನಿರ್ಧರಿಸಿದೆ. ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ರಾಜ್ಯದ ಹಿತಾಸಕ್ತಿ, ವಿಶೇಷವಾಗಿ ರೈತರ ಹಿತ ಮತ್ತು ಕುಡಿಯುವ ನೀರಿನ ಅಗತ್ಯತೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಪ್ರತಿಪಾದಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, “ನಮ್ಮ ಸರ್ಕಾರ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತಾ, ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸಲು ಬದ್ಧವಾಗಿದೆ” ಎಂದರು.
“ಮಳೆಯ ಪ್ರಮಾಣ ಸುಧಾರಿಸಿರುವುದರಿಂದ ತಕ್ಷಣದ ಪರಿಸ್ಥಿತಿ ತುಸು ತಿಳಿಯಾಗಿದೆ ಮತ್ತು ಸರ್ಕಾರದ ನಿಲುವಿಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ” ಎಂದು ಹೇಳಿದರು. ಇದೇ ಸಮಯದಲ್ಲಿ, ಪ್ರಸ್ತಾವಿತ ಆಗಸ್ಟ್ 13ರ ಬಂದ್ ಅನ್ನು ಹಿಂಪಡೆಯುವಂತೆ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದರು.
“ರಾಜ್ಯದ 7.5 ಕೋಟಿ ಜನರಲ್ಲಿ ಸರ್ಕಾರದ ಬದ್ಧತೆಯ ಬಗ್ಗೆ ಯಾವುದೇ ಅನುಮಾನ ಬೇಡ. ಕಾವೇರಿ ವಿಚಾರದಲ್ಲಿ ಕರ್ನಾಟಕದ ರೈತರ ಹಿತಾಸಕ್ತಿಯನ್ನು ರಕ್ಷಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ” ಎಂದು ಅವರು ಹೇಳಿದರು.
“ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರ್ಕಾರವು ಕುಡಿಯುವ ನೀರಿನ ಅಗತ್ಯಗಳಿಗೆ ಆದ್ಯತೆ ನೀಡುವುದನ್ನು ಮುಂದುವರಿಸುತ್ತದೆ. ಕಾನೂನು ಮತ್ತು ಕೃಷಿ ತಜ್ಞರನ್ನು ಸಂಪರ್ಕಿಸುತ್ತದೆ. ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ” ಎಂದು ಅವರು ಹೇಳಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯಿಲಿ, ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಡಿ.ವಿ. ಸದಾನಂದ ಗೌಡ ಮತ್ತು ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ನಾಯಕರು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, “ರಾಜ್ಯದ ಹಿತಾಸಕ್ತಿ ಅಪಾಯದಲ್ಲಿದ್ದಾಗ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತುವ ಸುದೀರ್ಘ ಪರಂಪರೆ ಕರ್ನಾಟಕಕ್ಕಿದೆ. ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತು ಜನರ ಹಿತಾಸಕ್ತಿಯೇ ಮುಖ್ಯ,” ಎಂದು ಹೇಳಿದರು.
“ಕುಡಿಯುವ ನೀರಿಗೆ ರಾಜ್ಯದ ಮೊದಲ ಆದ್ಯತೆ. ಕುಡಿಯುವ ನೀರಿಗೆ ಅತ್ಯುನ್ನತ ಆದ್ಯತೆ ನೀಡಬೇಕು ಎಂಬುದು ಯಾವಾಗಲೂ ನಮ್ಮ ನಿಲುವಾಗಿದೆ. ಈ ನಿಲುವನ್ನು ನೀವೆಲ್ಲರೂ ಸಂಪೂರ್ಣವಾಗಿ ಒಪ್ಪುತ್ತೀರಿ ಎಂದು ನನಗೆ ತಿಳಿದಿದೆ” ಎಂದರು.
“ನಮ್ಮ ಎಲ್ಲಾ ಸಚಿವರು ಈಗಾಗಲೇ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ, ಅವರು ರೈತರೊಂದಿಗೆ ಸಂವಾದ ನಡೆಸಿ, ಪ್ರತಿ ತಾಲೂಕಿನ ನೈಜ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ ನನಗೆ ವಿವರವಾದ ವರದಿಗಳನ್ನು ಸಲ್ಲಿಸಲಿದ್ದಾರೆ. ತದನಂತರ, ಕಂದಾಯ ಸಚಿವರು ತಾಂತ್ರಿಕ ಅಂಶಗಳು, ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಮತ್ತು ಕೇಂದ್ರ ಸರ್ಕಾರದ ನಿಯಮಗಳನ್ನು ಪರಿಗಣಿಸಿ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಿದ್ದಾರೆ. ಆ ಮೌಲ್ಯಮಾಪನದ ಆಧಾರದ ಮೇಲೆ ಸರ್ಕಾರವು ತನ್ನ ನಿರ್ಧಾರಗಳನ್ನು ಮತ್ತು ಅಗತ್ಯ ಕ್ರಮಗಳನ್ನು ಪ್ರಕಟಿಸಲಿದೆ,” ಎಂದು ಅವರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯದ ನೆಲ, ಜಲ ಮತ್ತು ಭಾಷೆಗೆ ಸಂಬಂಧಿಸಿದ ವಿಷಯಗಳು ಬಂದಾಗ ಒಗ್ಗಟ್ಟಿನಿಂದ ನಿಲ್ಲುವ ಸುದೀರ್ಘ ರಾಜಕೀಯ ಪರಂಪರೆ ಕರ್ನಾಟಕಕ್ಕಿದೆ. ಹಿಂದೆಯೂ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ಇಂತಹ ಸವಾಲುಗಳನ್ನು ಎದುರಿಸಿದ್ದವು ಮತ್ತು ವಿರೋಧ ಪಕ್ಷಗಳಿಂದ ಬೆಂಬಲ ಪಡೆದಿದ್ದವು. ಈಗಲೂ ವಿರೋಧ ಪಕ್ಷಗಳು ರಚನಾತ್ಮಕ ಸಲಹೆಗಳನ್ನು ನೀಡಿ ರಾಜ್ಯದ ಹಿತಕ್ಕಾಗಿ ಸರ್ಕಾರಕ್ಕೆ ಬೆಂಬಲ ನೀಡುತ್ತವೆ ಎಂಬ ಭರವಸೆ ನನಗಿದೆ” ಎಂದರು.
ಮೇಕೆದಾಟು ಯೋಜನೆಗೆ ಒತ್ತಾಯ
ಕಾವೇರಿ ಕೊಳ್ಳಕ್ಕೆ ಸದ್ಯಕ್ಕೆ ನೀರು ಹರಿಯುತ್ತಿರುವುದನ್ನು ಬಳಸಿಕೊಂಡು ರೈತರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿರುವುದಾಗಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
“ಕಾವೇರಿ ನೀರು ವಿವಾದ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದರು. ಅದೃಷ್ಟವಶಾತ್ ಕಾವೇರಿ ಕೊಳ್ಳದಲ್ಲಿ ನೀರಿನ ಒಳಹರಿವು ಹೆಚ್ಚಿರುವುದರಿಂದ ತಮಿಳುನಾಡಿಗೆ ನೀರು ಹರಿಸಲು ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಸಭೆಯಲ್ಲಿ ನಾವು ನೀಡಿರುವ ಸಲಹೆಯೆಂದರೆ ರೈತರ ಹಿತರಕ್ಷಣೆ ಮಾಡುವುದು ಮುಖ್ಯಮಂತ್ರಿಗಳ ಜವಾಬ್ದಾರಿ” ಎಂದಿದ್ದಾರೆ.
“ಮೇಕೆದಾಟು ಯೋಜನೆಗೆ ನೆರೆಯ ರಾಜ್ಯದಿಂದ ಅನುಮತಿ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾಗಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ವರದಿಯನ್ನು ಮರುಸಲ್ಲಿಸುವ ಮೂಲಕ ಮುನ್ನಡೆಯಬೇಕು, ವಿಳಂಬ ಮಾಡಬಾರದು…” ಎಂದಿದ್ದಾರೆ.



