ಮಾನವ ಕೃತ್ಯಗಳಿಂದಾಗಿ ಭಾರೀ ಹವಾಮಾನ ವೈಪರೀತ್ಯ ಎದುರಾಗಿದೆ. ಉಳ್ಳವರ ಕೃತ್ಯಕ್ಕೆ ಇಡೀ ಮನುಕುಲವೇ ಬಲಿಯಾಗುವ ಅಪಾಯಕ್ಕೆ ಸಿಲುಕಿದೆ. ಭಾರತದಲ್ಲಿಯೂ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತಿದ್ದು, ಬಿಲಿಸಿಗೆ ದೇಶದ ಪ್ರಜೆಗಳು ಅಪಾಯಕಾರಿ ತುತ್ತಾಗುತ್ತಿದ್ದಾರೆ.
ಅಮೆರಿಕ ಮೂಲದ ‘ಕ್ಲೈಮೇಟ್ ಸೆಂಟ್ರಲ್’ ಎಂಬ ಸಂಸ್ಥೆ ನಡೆಸಿರುವ ಹೊಸ ಅಧ್ಯಯನದ ಪ್ರಕಾರ, 2026ರ ಜೂನ್ನಿಂದ ಆಗಸ್ಟ್ ಅವಧಿಯಲ್ಲಿ ಭಾರತದ ಸುಮಾರು 11.7 ಕೋಟಿ ಜನರು ಒಂದು ತಿಂಗಳಿಗೂ ಹೆಚ್ಚು ಕಾಲ ತೀವ್ರ ತಾಪಮಾನದ ಅಪಾಯವನ್ನು ಎದುರಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಜನರು ಈ ರೀತಿ ಅಪಾಯಕಾರಿ ಬಿಸಿಲಿಗೆ ತುತ್ತಾಗಿರುವುದು ಭಾರತದಲ್ಲೇ ಎಂಬ ಕಳವಳಕಾರಿ ವಿಷಯ ವರದಿಯಿಂದ ತಿಳಿದುಬಂದಿದೆ.
ದೇಶದ 59 ಪ್ರಮುಖ ನಗರಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಈ ಪೈಕಿ, ಶ್ರೀನಗರದಲ್ಲಿ ಅತ್ಯಧಿಕ ಅಂದರೆ 53 ಹೆಚ್ಚುವರಿ ದಿನಗಳು ಅಪಾಯಕಾರಿ ಬಿಸಿಲಿನಿಂದ ಕೂಡಿದ್ದವು. ತಮಿಳುನಾಡಿನ ಚೆನ್ನೈನಲ್ಲಿ 40 ದಿನಗಳು, ರಾಜಕೋಟ್ ಮತ್ತು ಅಮೃತಸರದಲ್ಲಿ ತಲಾ 29 ದಿನಗಳು ಹಾಗೂ ಲಖನೌದಲ್ಲಿ 27 ದಿನಗಳು ಹವಾಮಾನ ಬದಲಾವಣೆಯ ನೇರ ಪ್ರಭಾವದಿಂದ ತಾಪಮಾನ ಏರಿಕೆಯಾಗಿತ್ತು. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಬರೋಬ್ಬರಿ 86 ದಿನಗಳ ಕಾಲ ಉಷ್ಣಾಂಶವು ಮಾಮೂಲಿಗಿಂತ ಎರಡು ಪಟ್ಟು ಹೆಚ್ಚಿದ್ದು, ತೀವ್ರ ಹವಾಮಾನ ವೈಪರೀತ್ಯವನ್ನು ದಾಖಲಿಸಿದೆ.
1991 ರಿಂದ 2020 ರವರೆಗಿನ ಸರಾಸರಿ ತಾಪಮಾನಕ್ಕೆ ಹೋಲಿಸಿದರೆ ಈ ಬಾರಿ ಭಾರತದಲ್ಲಿ ಸರಾಸರಿ 0.7 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚು ಬಿಸಿಲಿನ ಕಾವು ದಾಖಲಾಗಿದೆ.
ಜಾಗತಿಕ ಮಟ್ಟದಲ್ಲೂ ಈ ಪರಿಸ್ಥಿತಿ ತೀವ್ರವಾಗಿದ್ದು, ವಿಶ್ವದಾದ್ಯಂತ 150 ಕೋಟಿಗೂ ಹೆಚ್ಚು ಜನರು ಕನಿಷ್ಠ ಒಂದು ತಿಂಗಳ ಕಾಲ ಆರೋಗ್ಯಕ್ಕೆ ಅಪಾಯ ತರುವಂತಹ ತಾಪಮಾನವನ್ನು ಅನುಭವಿಸಿದ್ದಾರೆ. ಆಫ್ರಿಕಾ ಮತ್ತು ಯುರೋಪ್ ಖಂಡಗಳ ಅನೇಕ ದೇಶಗಳಲ್ಲಿಯೂ ಭಾರಿ ಉಷ್ಣಾಂಶ ದಾಖಲಾಗಿದೆ. ಭಾರತದ ನಂತರ ಚೀನಾದಲ್ಲಿ 9.4 ಕೋಟಿ ಮತ್ತು ಇಂಡೋನೇಷ್ಯಾದಲ್ಲಿ 8.3 ಕೋಟಿ ಜನರು ಈ ತಾಪಮಾನದ ಹೊಡೆತಕ್ಕೆ ಸಿಲುಕಿದ್ದಾರೆ.
ನಾವು ಬಳಸುವ ಕಲ್ಲಿದ್ದಲು, ಪೆಟ್ರೋಲ್ ಮತ್ತು ಗ್ಯಾಸ್ಗಳ ಪ್ರಮಾಣ ಹೆಚ್ಚಾದಷ್ಟೂ ಈ ಹವಾಮಾನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಲಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥ ಸೈಮನ್ ಸ್ಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಶತಕೋಟಿಗೂ ಹೆಚ್ಚು ಜನರು ಇಂತಹ ಪ್ರಾಣಾಪಾಯ ತರುವ ಬಿಸಿಲಿನಲ್ಲಿ ಬೇಯುತ್ತಿರುವುದು ಜಾಗತಿಕ ಹವಾಮಾನ ಬದಲಾವಣೆಯ ಭೀಕರ ಪರಿಣಾಮವನ್ನು ಎತ್ತಿ ತೋರಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.



