ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

Date:

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ. ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದು, ಮನುಷ್ಯತ್ವದಿಂದ ಬಾಳುವುದೇ ಇವತ್ತಿನ ತುರ್ತು ಅಗತ್ಯ.

- Advertisement -

ಇತ್ತೀಚಿಗೆ ಟಿ. ನರಸೀಪುರದಾಗ ಒಬ್ಬ ಪೊಲೀಸ್ ಅಧಿಕಾರಿ ಬಹಳ ಸಣ್ಣ ಮಾತಿನಾಗ ದೊಡ್ಡ ಮರ್ಮ ಹೇಳ್ಯಾರ: “ಹಬ್ಬ ಮಾಡ್ರಿ, ಆದ್ರ ಸರ್ಕಾರದ ನಿಯಮದ ಪ್ರಕಾರ ಮಾಡ್ರಿ; ನಿಮ್ಮ ಸಂಭ್ರಮ ಬೇರೆ ಧರ್ಮದವರಿಗೂ ಹಿತ ಅನಿಸಬೇಕು, ಅವರೂ ಗೌರವಿಸುವಂತಿರಬೇಕು” ಅಂತ. ಎಂಥಾ ಚೊಕ್ಕ ಮಾತು ನೋಡ್ರಿ ಇದು! ಸಮಾಜದಾಗ ಶಾಂತಿ, ನೆಮ್ಮದಿ ಇರಬೇಕಂದ್ರ ಇಷ್ಟೇ ಸಾಕು. ಆದ್ರ ನಮ್ಮ ರಾಜಕಾರಣಿಗಳಿಗೆ ಇದು ಎಂದಿಗೂ ರುಚಿಸಂಗಿಲ್ಲ. ಯಾಕಂದ್ರ ಜನ ನೆಮ್ಮದಿಯಾಗಿದ್ರ ಅವರ ರಾಜಕೀಯದ ರೊಟ್ಟಿ ಹೆಂಗ ಬೇಯಬೇಕು? ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರಂಥವರು, “ನಾವು ಇಲ್ಲೇ ಹುಟ್ಟಿದೋರು, ನಾವ್ಯಾಕೆ ಪರ್ಮಿಷನ್ ತಗೋಬೇಕು? ನಾವು ಪಾಕಿಸ್ತಾನದಾಗಿದ್ದೀವೋ, ಹಿಂದೂಸ್ಥಾನದಾಗಿದ್ದೀವೋ? ಮಸೀದಿ ಮುಂದೆ ಪಟಾಕಿ ಹೊಡೆಯೋರು ನಾವೇ” ಅಂತ ಗಂಟಲು ಹರಿದುಕೊಳ್ತಾರ. ಇನ್ನೊಬ್ಬ ಮಾಜಿ ಸಂಸದ ಪ್ರತಾಪ್ ಸಿಂಹ “ಪೊಲೀಸ್ ಠಾಣೆಗೇ ನುಗ್ಗತೀನಿ” ಅಂತ ಬೆದರಿಕೆ ಹಾಕ್ತಾರ. ಮಸೀದಿಗಳ ಮುಂದೆ ಉದ್ದೇಶಪೂರ್ವಕವಾಗಿ ಡಿಜೆ ಹಚ್ಚಿ ಪ್ರಚೋದನೆ ಮಾಡೋದು, ಪಟಾಕಿ ಸಿಡಿಸೋದು ಇವರ ಪ್ರಕಾರ ಧರ್ಮ ರಕ್ಷಣೆಯಂತೆ! ಇಡೀ ಬಿಜೆಪಿ ನಾಯಕರು ಅಲ್ಲಿಗೆ ದೌಡಾಯಿಸಿ ಕೋಮು ವಿಷ ಬೆರೆಸಲು ಹೊರಟಿದ್ದಾರೆ. ಕಾನೂನು, ಸುವ್ಯವಸ್ಥೆ ಅನ್ನೋದು ಕಾಗದದ ಮೇಲಷ್ಟೇ ಇರಬೇಕೇನ್ರಿ? ಸ್ವತಂತ್ರ ಭಾರತದಾಗ ಸಂವಿಧಾನಕ್ಕಿಂತ ದೊಡ್ಡವರು ಯಾರಾದ್ರೂ ಅದಾರೇನು?
ಆದ್ರೆ, ನಾವೆಲ್ಲ ಬಾಲ್ಯದಾಗ ಕಂಡ ಗಣೇಶ ಹಬ್ಬ ಹಿಂಗಿತ್ತೇನ್ರಿ?

ನನ್ನ ಬಾಲ್ಯದ ನೆನಪುಗಳನ್ನು ಕೆದಕಿದ್ರ ಗಣೇಶೋತ್ಸವ ಅಂದ್ರೆ ಒಂದು ಮುಗ್ಧ ಸಂಭ್ರಮ, ಊರ ಮಂದಿಯ ಜೀವದ ಒಡನಾಟ. ನಮ್ಮ ಊರಾಗ ಮೊದಲ ಬಾರಿಗೆ ನೆಹರು ಯುವ ಕೇಂದ್ರದ ಅಧ್ಯಕ್ಷನಾಗಿದ್ದ ನಮ್ಮ ಕಾಕ ಭೀಮನಗೌಡ ರಾಯನಗೌಡ ಪಾಟೀಲ್ ಸಾರ್ವಜನಿಕ ಗಣೇಶೋತ್ಸವ ಶುರು ಮಾಡಿದ್ದ. ಆ ಕಾಲದಾಗ ಮೊಹರಂ ಹಬ್ಬಕ್ಕೂ ಅಕ್ಷಯ್ ಕುಮಾರ್‌ನ ‘ತೂ ಚೀಜ್ ಬಡಿ ಹೈ ಮಸ್ತ್ ಮಸ್ತ್’ ಹಾಡು ಮೊಳಗತಿತ್ತು, ಗಣೇಶನ ಮುಂದೂ ಅದೇ ಗುನುಗತಿತ್ತು. ಹಬ್ಬ ಯಾವುದಾದರೇನು, ಜನ ಜಾತಿ-ಧರ್ಮ ಮರೆತು ಒಟ್ಟಾಗಿ ಕುಣೀತಿದ್ರು!

ನಾನು ಐದನೇ-ಆರನೇ ತರಗತಿಯಲ್ಲಿದ್ದಾಗ ನಮ್ಮ ಸರ್ಕಾರಿ ಶಾಲೆಯಾಗ ಗಣೇಶೋತ್ಸವ ಮಾಡಿದ್ವಿ. ನಂಗ ಸ್ವಲ್ಪ ಮೈಕಟ್ಟು ದಪ್ಪ ಇತ್ತು, ಲೇಜಿಮ್ ಕುಣಿಯೋಕೆ ಬರಂಗಿಲ್ಲ ಅಂತ ಸಾತಿಹಾಳ ಸಾರು ನನಗ ಶಿವನ ವೇಷ ಹಾಕಿಸಿದ್ರು. ಮೈತುಂಬಾ ನೀಲಿ ಬಣ್ಣ ಬಳಿದು, ತಲೆಗೊಂದು ಕಿರೀಟ ತೊಡಿಸಿ, ನಮ್ಮವ್ವನ ಲಗ್ನದಾಗ ಅವಳು ಉಟ್ಟಿಕೊಂಡಿದ್ದ ರೇಷ್ಮೆ ಸೀರೆಯನ್ನೇ ಮಡಿಯಾಗಿ ನನಗ ದೋತರದಂಗ ಉಡಿಸಿದ್ರು. ನನ್ನ ಜೂನಿಯರ್ ರಾಚಯ್ಯನಿಗೆ ಪಾರ್ವತಿ ವೇಷ. ನಮ್ಮ ಅಪ್ಪು ಕಾಕ ಮತ್ತು ಒಕ್ಕಲುತನದ ರುದ್ರಪ್ಪಣ್ಣನ ಎತ್ತಿನ ಗಾಡಿ ಶೃಂಗರಿಸಿ, ಆ ಗಾಡಿ ಮೇಲೆ ನಾನೇ ಶಿವನಾಗಿ, ಪಕ್ಕದಲ್ಲಿ ಪಾರ್ವತಿಯಾದ ರಾಚಯ್ಯ ಕುಳಿತು, ನನ್ನ ತೊಡೆ ಮೇಲೆ ಗಣೇಶನ ಮೂರ್ತಿ ಹೊತ್ತು ಇಡೀ ಊರಾಗ ಮೆರವಣಿಗೆ ಹೋಗಿದ್ದು ಇವತ್ತಿಗೂ ಕಣ್ಣಿಗೆ ಕಟ್ಟಿದಂತೈತಿ.

ಅದಾದ ಮೇಲೆ ಕಲಬುರ್ಗಿಯ ಸಂತೋಷ್ ಕಾಲೋನಿಯಾಗ ನಮ್ಮ ಅಣ್ಣ ಶಿವಕುಮಾರ್ ಪಾಟೀಲ್ ಅಧ್ಯಕ್ಷನಾಗಿದ್ದಾಗ ನಡೆದ ಗಣೇಶೋತ್ಸವ. ವೇದಿಕೆ ಮೇಲೆ ನಮ್ಮ ತಮ್ಮ ಅವಿನಾಶ ಪ್ರಭುದೇವನ ‘ಮುಕ್ಕಾಬಲಾ ಮುಕ್ಕಾಬಲಾ’ ಹಾಡಿಗೆ ಹೆಜ್ಜೆ ಹಾಕಿ ಜನರನ್ನು ಹುಚ್ಚೆದ್ದು ಕುಣಿಸಿದ್ದ. ಆಮೇಲೆ ಮಂಗಳೂರಿಗೆ ಹೋದಾಗ ಅಲ್ಲಿ ನಡೀತಿದ್ದ ಅನ್ನದಾಸೋಹದ ಗಣೇಶೋತ್ಸವ ನೋಡಿ ಖುಷಿಪಟ್ವಿ.

ಮುಂದೆ 2002ರಿಂದ 2006ರವರೆಗೆ ನರ್ಸಿಂಗ್ ಓದುತ್ತಿದ್ದ ಕಾಲ. 2005-06ರಲ್ಲಿ ನಾನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದೆ. ಆ ರಕ್ತದ ಬಿಸಿ, ಯೌವನದ ಹುಮ್ಮಸ್ಸಿನಾಗ ಎರಡನೇ ಗಣಪತಿ ಮೆರವಣಿಗೆಯನ್ನು ನಾವೇ ನಿಂತು ಮಾಡಿಸಿದ್ವಿ. ಅವತ್ತು ನಾವೂ ಪರ್ಮಿಷನ್ ತಗೊಂಡಿದ್ದಿಲ್ಲ, ಸೌಂಡ್ ಸಿಸ್ಟಮ್ ರಜಪೂತ್ ವಿಜಯ್ ಅವರ ಭರ್ಜರಿ ಸೌಂಡು, ನಾನೇ ಖರ್ಚು ವೆಚ್ಚ ನೋಡಿಕೊಂಡು, ಆರು ತಾಸು ಮೆರವಣಿಗೆ ನಡೆಸಿ, ಕಾಲೇಜು ಚೇರ್ಮನ್ ಎಂ.ಬಿ. ಪಾಟೀಲರ ಕಾರನ್ನೇ ಅರ್ಧ ತಾಸು ನಿಲ್ಲಿಸಿ ಮೆರೆದಿದ್ದೆವು. ಬೆಳಗ್ಗೆ ತಂದು ರಾತ್ರಿಗೇ ವಿಸರ್ಜನೆ ಮಾಡೋ ಉತ್ಸಾಹ ಅದಾಗಿತ್ತು.

ಆದರೆ, ಕಾಲ ಕಳೆದಂತೆ ಕಣ್ಣು ತೆರೆಯಿತು. ವಿಶ್ವಗುರು ಬಸವಣ್ಣನವರ ಲಿಂಗಾಯತ ಧರ್ಮದ ತತ್ವ, ವಚನ ಸಾಹಿತ್ಯದ ವಿಚಾರಗಳು ನನ್ನೊಳಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದವು. ಇದು ನಿಜವಾದ ಸಾಮರಸ್ಯದ ಹಬ್ಬವಾಗಿ ಉಳಿದಿಲ್ಲ; ಬದಲಿಗೆ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು, ತರ್ಕ-ಬುದ್ಧಿಗಳನ್ನು ಬದಿಗೊತ್ತಿ, ಸಮಾಜದಾಗ ಜಗಳ ತಂದಿಡುವ ಅಸ್ತ್ರವಾಗಿ ಬದಲಾಗ್ತಿದೆ ಅನ್ನೋ ಸತ್ಯ ಮನವರಿಕೆಯಾಯ್ತು. ನಾನೊಬ್ಬ ನಿರೀಶ್ವರವಾದಿಯಾಗಿ, ಬಸವ ಪರಂಪರೆಯ ಸಾಮಾಜಿಕ-ಸಾಂಸ್ಕೃತಿಕ ಆಂದೋಲನವನ್ನು ಒಪ್ಪಿಕೊಂಡವನಾಗಿ ಆ ಆಡಂಬರದಿಂದ ದೂರ ಸರಿದೆ. ಮುಂದೆ 2016-17ರಲ್ಲಿ ಪುಣೆಯಲ್ಲಿದ್ದಾಗ ಅಪಾರ್ಟ್‌ಮೆಂಟ್ ಸೊಸೈಟಿಯ ಕಾರ್ಯಕ್ರಮಕ್ಕೆ ಹೆಂಡತಿಯ ಭಕ್ತಿಗಾಗಿ, ಆಕೆಯ ಸಂತೋಷಕ್ಕಾಗಿ ಜೊತೆಯಾಗಿ ಹೋದೆನಷ್ಟೇ.

ಇನ್ನು ರಾಜಕೀಯ ಇತಿಹಾಸದ ಕಡೆ ನೋಡ್ರಿ—ಸಾರ್ವಜನಿಕ ಗಣೇಶೋತ್ಸವವನ್ನು ಬೀದಿಗೆ ತಂದ ಬಾಲಗಂಗಾಧರ ತಿಲಕರೂ ಕಾಂಗ್ರೆಸ್ಸಿಗರೇ ಆಗಿದ್ದರು. ಆದರೆ ತಿಲಕರ ರಾಜಕೀಯ-ಸಾಮಾಜಿಕ ಸಿದ್ಧಾಂತವನ್ನು ನಾನು ಎಂದಿಗೂ ಒಪ್ಪುವುದಿಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ, ಅವರಲ್ಲಿದ್ದ ಸಾಮಾಜಿಕ ಸಂಪ್ರದಾಯವಾದ ತೀರಾ ಅಪಾಯಕಾರಿಯಾಗಿತ್ತು. ತಳಸಮುದಾಯದ ಕುಂಬಾರ, ಗಾಣಿಗ, ಹೂಗಾರರ ಮಕ್ಕಳಿಗೆ ಸಾರ್ವತ್ರಿಕ ಶಿಕ್ಷಣ ಸಿಗುವುದನ್ನು ಅವರು ಕಟುವಾಗಿ ವಿರೋಧಿಸಿದ್ದರು. ಇತಿಹಾಸದ ಸತ್ಯ ಇದು. ಅದೇ ಕಾಂಗ್ರೆಸ್ ಪರಂಪರೆಯಲ್ಲಿ ನೆಹರೂ ಇದ್ದರು, ಸುಭಾಷ್ ಚಂದ್ರ ಬೋಸ್ ಇದ್ದರು, ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳೂ ಆರಂಭದಲ್ಲಿ ಇದೇ ಸಂಘಟನಾ ವೇದಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಇವತ್ತು ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದವರು ಗಣೇಶೋತ್ಸವವನ್ನು ತಮ್ಮ ಸ್ವತ್ತಿನಂತೆ ಬಿಂಬಿಸುತ್ತಾ, ಕಾಂಗ್ರೆಸ್ ಅಂದರೆ ಕೇವಲ ಮುಸ್ಲಿಮರ ಪಕ್ಷ ಎಂಬಂತೆ ಸುಳ್ಳು ಕಥೆ ಕಟ್ಟಿ ಸಮಾಜವನ್ನು ಧ್ರುವೀಕರಿಸಲು ಹೊರಟಿದ್ದಾರೆ. ಮುಸ್ಲಿಮರು ಈದ್ ಮಿಲಾದ್ ಆಚರಿಸಿದರೆ ಇವರು ರಸ್ತೆಗೆ ಇಳಿದು ಬೆಂಕಿ ಹಚ್ಚಲು ನೋಡುತ್ತಾರೆ.

ಅಸಲಿಗೆ ಈ ಗಣಪತಿ ಯಾರು?

ಚಿಂತಕ ಡಾ. ವಡ್ಡಗೆರೆ ನಾಗರಾಜಯ್ಯನವರು ‘ಜನಪದರಲ್ಲಿ ಪಿಳ್ಳೇರಾಯನ ಪರಿಕಲ್ಪನೆ ಮತ್ತು ವಚನಕಾರರು ನಿರಾಕರಿಸಿದ ಕಾಲ್ಪನಿಕ ಗಣಪತಿ’ ಎಂಬ ಲೇಖನದಲ್ಲಿ ಎತ್ತಿರುವ ಪ್ರಶ್ನೆಗಳನ್ನು ನಾವಿಂದು ಗಂಭೀರವಾಗಿ ಗಮನಿಸಬೇಕಾಗಿದೆ. ಈ ನೆಲದ ಕೃಷಿಯ ಶೋಧಕರಾದ ತಳಸಮುದಾಯಗಳ ನಂಬಿಕೆಯಲ್ಲಿ ಗಣಪತಿ ಅಂದರೆ ‘ಪಿಳ್ಳೇರಾಯ’ ಅಥವಾ ‘ಬೆನಕ’. ಕುರಿ-ದನದ ಸಗಣಿ ಉಂಡೆಯ ಮೇಲೆ ಗರಿಕೆಯನ್ನಿಟ್ಟು, ಫಲ ನೀಡುವ ಭೂಮಿಗೆ ಮತ್ತು ಬೆಳೆಯ ಹುಲುಸಿಗೆ ಕೈಮುಗಿಯುತ್ತಿದ್ದ ಶ್ರಮಿಕ ಸಂಸ್ಕೃತಿ ಅದು. ಹೆಣ್ಣೊಬ್ಬಳು ಗಂಡನಲ್ಲದ ಗಂಡನಿಂದ ಮಕ್ಕಳನ್ನು ಪಡೆಯಲು ಸ್ವತಂತ್ರಳಾಗಿದ್ದ ತಾಯ್ಮೂಲದ ಕಲ್ಪನೆಯಲ್ಲಿ ಪಾರ್ವತಿಯ ಮೈಕೊಳೆಯಿಂದ ಹುಟ್ಟಿದವನು ಈತ. ಸಗಣಿ ಕೃಷಿಯ ತಿಪ್ಪೆಗೆ ಸೇರಿ ಬೆಳೆ ನೀಡುವ ತಿಪ್ಪಯ್ಯ, ತಿಪ್ಪೇಶ, ತಿಪ್ಪೇಸ್ವಾಮಿ ಆಗುವ ಜೀವಪರ ದಾರಿ ಅದು. ದೇವಿಪ್ರಸಾದ ಚಟ್ಟೋಪಾಧ್ಯಾಯ ಮತ್ತು ಡಿ.ಡಿ. ಕೋಸಾಂಬಿಯವರ ಅಧ್ಯಯನಗಳ ಪ್ರಕಾರ, ಗಣಪತಿಯು ಮೂಲತಃ ಮಾತಂಗ (ಆನೆ) ವಂಶದವರ ಗಣನಾಥ. ಆದರೆ ವೈದಿಕಶಾಹಿಯು ಈ ಮೂಲ ನೆಲೆಯನ್ನೇ ಕಸಿದುಕೊಂಡು, ಆನೆಯನ್ನು ಕಡಿದು ಕಾಲ್ಪನಿಕ ಗಣಪತಿಯನ್ನಾಗಿಸಿ ತನ್ನ ಅನುಕೂಲಕ್ಕೆ ಹೈಜಾಕ್ ಮಾಡಿಕೊಂಡಿತು.
ಹನ್ನೆರಡನೇ ಶತಮಾನದ ಶರಣರು ಇಂಥ ಕಾಲ್ಪನಿಕ ಮೂಢನಂಬಿಕೆಗಳನ್ನು ಅತ್ಯಂತ ಕ್ರಾಂತಿಕಾರಕವಾಗಿ ನಿರಾಕರಿಸಿದರು.

ಬಸವಣ್ಣನವರು ನೇರವಾಗಿಯೇ ಎಚ್ಚರಿಸಿದರು:
“ಸಗಣಿಯ ಬೆನಕಂಗೆ ಸಂಪಿಗೆಯರಳಲ್ಲಿ ಪೂಜಿಸಿದಡೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ,
ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ ನಿಚ್ಚ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ.
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ ?”
ಇನ್ನು ಚೆನ್ನಬಸವಣ್ಣನವರಂತೂ ವೈದಿಕರು ಸೃಷ್ಟಿಸಿದ ಇಲಿ ವಾಹನದ ಕಲ್ಪನೆಯನ್ನೇ ವಿಡಂಬಿಸುತ್ತಾ:
“ಬೇಡವೋ ಇಲಿಚಯ್ಯಾ !
ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ,
ಇಂದು ಬಂದು ನಮ್ಮ ವಸ್ತ್ರವ ಕಡಿದೆ.
ಬೇಡವೋ ಇಲಿಚಯ್ಯಾ !
ನಿನಗಂಜರು ನಿನ್ನ ಗಣಪತಿಗಂಜರು;
ಕೂಡಲಚೆನ್ನಸಂಗನ ಶರಣರು ಕಂಡಡೆ, ನಿನ್ನ ಹಲ್ಲ ಕಳೆವರು, ಹಂತವ ಮುರಿವರು” ಎಂದು ಧಿಕ್ಕರಿಸಿದರು.

ದೇಹವನ್ನೇ ದೇವಾಲಯವಾಗಿಸಿ, ಅರಿವಿನ ಕುರುಹಾಗಿ ಇಷ್ಟಲಿಂಗವನ್ನು ಕರಸ್ಥಲಕ್ಕೆ ತಂದುಕೊಟ್ಟ ಶರಣರು ಯಾವುದೇ ಕಾಲ್ಪನಿಕ ದೈವಗಳಿಗೆ ತಲೆಬಾಗಲಿಲ್ಲ. ಆದರೆ ಇವತ್ತು ಏನಾಗುತ್ತಿದೆ? ವೈದಿಕರು ಹೇರಿದ ಅದೇ ಕಾಲ್ಪನಿಕ ಗಣಪತಿಯನ್ನು ತಳಸಮುದಾಯದ ಯುವಕರು ನೆತ್ತಿಯ ಮೇಲೆ ಹೊತ್ತುಕೊಂಡು ಮೆರೆಯುತ್ತಿದ್ದಾರೆ; ಆ ಮೂಲಕ ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣತಂತ್ರ ಭಾರತದ ಸುಂದರ ಕಸೂತಿಯ ಸೌಹಾರ್ದತೆಯ ವಸ್ತ್ರವನ್ನೇ ಹರಿದು ಚಿಂದಿ ಮಾಡುತ್ತಿದ್ದಾರೆ!

ಜಗತ್ತಿನ ಧರ್ಮಗಳನ್ನು ನೋಡಿರಿ—ಮುಸಲ್ಮಾನರಿಗೆ ಕುರಾನ್ ಐತಿ, ಕ್ರಿಶ್ಚಿಯನ್ನರಿಗೆ ಬೈಬಲ್ ಐತಿ, ಸಿಖ್ಖರಿಗೆ ಗುರು ಗ್ರಂಥ ಸಾಹಿಬ್ ಐತಿ, ಬೌದ್ಧರಿಗೆ ತ್ರಿಪಿಟಕಗಳದಾವ. ಆದರೆ ಇಲ್ಲಿ 138 ಕೋಟಿ ದೇವರುಗಳನ್ನು ಸೃಷ್ಟಿಸಿ, ದಿನಕ್ಕೊಂದು ಹಬ್ಬ ತಂದು, ಧರ್ಮದ ಹೆಸರಿನಲ್ಲಿ ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ. ನಮ್ಮ ನೆಲಮೂಲದ ಬಸವ ತತ್ವದ ಲಿಂಗಾಯತ ಧರ್ಮಕ್ಕೆ ವಚನ ಸಾಹಿತ್ಯವೇ ಪರಮ ಧರ್ಮಗ್ರಂಥ. “ದಯವಿಲ್ಲದ ಧರ್ಮವದೇವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ” ಎಂದ ಕಲ್ಯಾಣದ ನಾಡು ನಮ್ಮದು.

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ. ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದು, ಮನುಷ್ಯತ್ವದಿಂದ ಬಾಳುವುದೇ ಇವತ್ತಿನ ತುರ್ತು ಅಗತ್ಯ.

ಆಕರಗಳು ಮತ್ತು ಉಲ್ಲೇಖಗಳು (References):

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ʻಬಳ್ಳಾರಿ ಚಲೋʼ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಪಾದಯಾತ್ರೆ; ಲಾಭ...

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಕಾಂಗ್ರೆಸ್‌ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಮಣಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ತನ್ನ ಪ್ರಾಬಲ್ಯವನ್ನು ಮುಂದುವರಿಸಿತು. ಇತ್ತೀಚೆಗೆ ನಡೆದ ಸಂಡೂರು ವಿಧಾನಸಭಾ ಕ್ಷೇತ್ರದ...
  • ಡಾ. ವಡ್ಡಗೆರೆ ನಾಗರಾಜಯ್ಯ: “ಜನಪದರಲ್ಲಿ ಪಿಳ್ಳೇರಾಯನ ಪರಿಕಲ್ಪನೆ ಮತ್ತು ವಚನಕಾರರು ನಿರಾಕರಿಸಿದ ಕಾಲ್ಪನಿಕ ಗಣಪತಿ” (ಲೇಖನ/ಟಿಪ್ಪಣಿ).
  • ಬಸವಣ್ಣನವರ ವಚನ ಸಂಪುಟ: ವಚನ ಸಂಖ್ಯೆ: “ಸಗಣಿಯ ಬೆನಕಂಗೆ ಸಂಪಿಗೆಯರಳಲ್ಲಿ ಪೂಜಿಸಿದಡೆ…” (ಕೂಡಲಸಂಗಮದೇವ ಅಂಕಿತ).
  • ಚೆನ್ನಬಸವಣ್ಣನವರ ವಚನ ಸಂಪುಟ: ವಚನ ಸಂಖ್ಯೆ: “ಬೇಡವೋ ಇಲಿಚಯ್ಯಾ ! ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ…” (ಕೂಡಲಚೆನ್ನಸಂಗ ಅಂಕಿತ).
  • ಡಿ.ಡಿ. ಕೋಸಾಂಬಿ: An Introduction to the Study of Indian History (ಪ್ರಾಚೀನ ಮಾತೃಪ್ರಧಾನ ಬುಡಕಟ್ಟುಗಳು, ಮಾತಂಗ ಕುಲಚಿಹ್ನೆಗಳು ಮತ್ತು ಗಣನಾಥ ಪರಿಕಲ್ಪನೆಯ ಅಧ್ಯಯನ).
  • ದೇವಿಪ್ರಸಾದ ಚಟ್ಟೋಪಾಧ್ಯಾಯ: Lokayata: A Study in Ancient Indian Materialism (ಭಾರತೀಯ ಲೋಕಾಯತ, ತಾಯ್ಮೂಲ ಸಂಸ್ಕೃತಿ ಮತ್ತು ಜನಪದ ಆಚರಣೆಗಳ ತಾತ್ವಿಕ ವಿಶ್ಲೇಷಣೆ).
  • ಭಾರತೀಯ ಇತಿಹಾಸ ಮತ್ತು ದಾಖಲೆಗಳು: ಬಾಲಗಂಗಾಧರ ತಿಲಕರ ಕೇಸರಿ/ಮರಾಠಾ ಪತ್ರಿಕೆಗಳ ಸಂಪಾದಕೀಯಗಳು ಹಾಗೂ ಮಹಾತ್ಮ ಜ್ಯೋತಿರಾವ್ ಫುಲೆಯವರ ಶೂದ್ರ-ಅತಿಶೂದ್ರರ ಸಾರ್ವತ್ರಿಕ ಶಿಕ್ಷಣ ಹೋರಾಟಕ್ಕೆ ತಿಲಕರ ಸಾಂಪ್ರದಾಯಿಕ ವಿರೋಧದ ಐತಿಹಾಸಿಕ ದಾಖಲೆಗಳು.
  • ಭಾರತದ ಸಂವಿಧಾನ: ಪ್ರಸ್ತಾವನೆ (Preamble) – ಜಾತ್ಯತೀತ, ಸಮಾಜವಾದಿ, ಪ್ರಜಾಸತ್ತಾತ್ಮಕ ಗಣರಾಜ್ಯದ ಆಶಯಗಳು ಮತ್ತು ಅನುಚ್ಛೇದ 25 (ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮಿತಿಗಳು
WhatsApp Image 2026 02 02 at 12.22.13 e1770015405615
ಬಸವ ಪಾಟೀಲ್‌
+ posts

ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

Advertisements

ಪೋಸ್ಟ್ ಹಂಚಿಕೊಳ್ಳಿ:

ಬಸವ ಪಾಟೀಲ್‌
ಬಸವ ಪಾಟೀಲ್‌
ಆರೋಗ್ಯ-ತಂತ್ರಜ್ಞಾನ ಸಲಹೆಗಾರ, ಬರಹಗಾರ. ಲಂಡನ್‌

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಪಿಎಸ್‌ಐ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾದ ಪೊಲೀಸ್ ಪೇದೆ

ಖಾಕಿ ಧರಿಸಿ ರಕ್ಷಣೆ ಮಾಡಬೇಕಾದವರೇ ಅಪರಾಧ ಕೃತ್ಯಕ್ಕೆ ಇಳಿದಿರುವ ಘಟನೆ...

ಪ್ರಜಾಪ್ರಭುತ್ವದ ಅಣಕ: ಪಕ್ಷಾಂತರಕ್ಕಾಗಿ ಶಾಸಕರ ರಾಜೀನಾಮೆ ಮತ್ತು ಮರು ಸ್ಪರ್ಧೆಗೆ ಮದ್ರಾಸ್ ಹೈಕೋರ್ಟ್ ಕಿಡಿ

ಚುನಾವಣೆಯಲ್ಲಿ ಗೆದ್ದ ಕೆಲವೇ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಾಂತರಗೊಂಡು...

ಕನ್ನಡದ ಹಿರಿಯ ನಟ ಅನಂತ್ ನಾಗ್‌ಗೆ 2024ನೇ ಸಾಲಿನ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗರಿ

ಭಾರತೀಯ ಚಿತ್ರರಂಗಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಪರಿಗಣಿಸಿ, ಕನ್ನಡದ ಹಿರಿಯ ನಟ...

ಬಾಗಲಕೋಟೆ | ಕೆಲಸ ಮಾಡದೇ ಸಂಬಳ; ಶಾಸಕ ಮೇಟಿ ಸೊಸೆ ವೈದ್ಯಾಧಿಕಾರಿ ಹುದ್ದೆಯಿಂದ ವಜಾ

ಸರ್ಕಾರಿ ನಮ್ಮ ಕ್ಲಿನಿಕ್‌ನಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ಬಾಗಲಕೋಟೆ ಕಾಂಗ್ರೆಸ್ ಶಾಸಕ ಉಮೇಶ್...