ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್-ವೇನಲ್ಲಿರುವ ಶೇಷಗಿರಿಹಳ್ಳಿ ಟೋಲ್ ಸಿಬ್ಬಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಟೋಲ್ ಸಿಬ್ಬಂದಿ ಪವನ್ ನಾಯಕ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು. ಇದೀಗ, ಬೆಂಗಳೂರಿನ ಸಂಕದಕಟ್ಟೆಯ ಅಭಿಷೇಕ್ ಮತ್ತು ಸಂತೋಷ್ ಎಂಬ ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ. ಈ ಇಬ್ಬರೂ, ಆಹಾರ ಪೂರೈಕೆ ಕಂಪನಿಯಲ್ಲಿ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಜೂನ್ 5ರ ರಾತ್ರಿ ರಾಮನಗರ ಕಡೆಯಿಂದ ಬೆಂಗಳೂರಿಗೆ ಆರೋಪಿಗಳು ಮತ್ತವರ ಸ್ನೇಹಿತರು ಕಾರಿನಲ್ಲಿ ಬಂದಿದ್ದರು. ಈ ವೇಳೆ, ಶೇಷಗಿರಿಹಳ್ಳಿ ಟೋಲ್ನಲ್ಲಿ ಟೋಲ್ ಶುಲ್ಕ ಪಾವತಿಸಲು ನಿಂತಿದ್ದರು. ಆರೋಪಿಗಳು ಬರುತ್ತಿದ್ದ ಲೇನ್ನಲ್ಲಿ ಆಟೋವೊಂದು ಶುಲ್ಕ ಪಾವತಿ ಮಾಡುತ್ತಿತ್ತು. ಆಟೋಗೆ ಫಾಸ್ಟ್ಯಾಗ್ ಇಲ್ಲದ ಕಾರಣ, ಪಾವತಿ ಮಾಡುವುದು ತಡವಾಗಿತ್ತು. ಈ ಕಾರಣಕ್ಕಾಗಿ, ಆರೋಪಿಗಳು ಟೋಲ್ ಸಿಬ್ಬಂದಿ ಪವನ್ ನಾಯಕ್ನೊಂದಿಗೆ ಗಲಾಟೆ ಮಾಡಿದ್ದರು ಎಂದು ವರದಿಯಾಗಿತ್ತು.
ಈ ಸುದ್ದಿ ಓದಿದ್ದೀರಾ?: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ₹10 ಸಾವಿರ ದರ ನಿಗದಿ ಆರೋಪ; ತನಿಖೆ ಮಾಡುತ್ತಾ ಆರೋಗ್ಯ ಇಲಾಖೆ?
ಗಲಾಟೆ ಅತೀರೇಕಕ್ಕೆ ಹೋಗಿ, ಸಿಬ್ಬಂದಿಗಳು ಮತ್ತು ಆರೋಪಿಗಳು ಕೈಕೈ ಮಿಲಾಯಿಸಿದ್ದರು. ಅಲ್ಲಿದ್ದ ಸ್ಥಳೀಯರು ಎಲ್ಲರನ್ನೂ ಸಮಾಧಾನಗೊಳಿಸಿ, ಅಲ್ಲಿಂದ ಕಳಿಸಿದ್ದರು. ಆದರೆ, ಆರೋಪಿ ಸಂತೋಷ್ ಮತ್ತು ಅಭಿಷೇಕ್ ಟೋಲ್ ಸಮೀಪವೇ ಪವನ್ಗಾಗಿ ಕಾದು ಕುಳಿದ್ದರು. ರಾತ್ರಿ 12.30ರ ಸುಮಾರಿಗೆ ಪವನ್ ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತ ಮಂಜುನಾಥ್ ಜೊತೆ ನಡೆದುಕೊಂಡು ಹೋಗುವಾಗ, ಇಬ್ಬರ ಮೇಲೂ ಆರೋಪಿಗಳು ಏಕಾಏಕಿ ದಾಳಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಯಿಂದ ತಲೆಗೆ ತೀವ್ರವಾಗಿ ಪಟ್ಟಾಗಿದ್ದ ಪವನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಿಸದೆ ಅತ ಮೃತಪಟ್ಟಿದ್ದರು. ಮಂಜುನಾಥ್ಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ.