- ಚುನಾವಣಾ ಅಧಿಕಾರಿ ಕಚೇರಿವರೆಗೂ ಕಾರಿನಲ್ಲೇ ಬಂದ ಅಭ್ಯರ್ಥಿ
- ₹5.65 ಕೋಟಿ ಮೌಲ್ಯದ ಸ್ಥಿರಾಸ್ತಿ ಘೋಷಿಸಿದ ಬಿ.ಸಿ ನಾಗೇಶ್
ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ, ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ಅಧಿಕಾರಿ ಕಚೇರಿಯಿಂದ 100 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಸಚಿವ ಬಿ.ಸಿ ನಾಗೇಶ್ ಅವರು ತಮ್ಮ ನಾಲ್ಕು ಕಾರುಗಳನ್ನು ಚುನಾವಣಾ ಅಧಿಕಾರಿಯ ಕಚೇರಿ ಮುಂಭಾಗದವರೆಗೂ ತಂದಿದ್ದಾರೆ. ಡಿವೈಎಸ್ಪಿ ಸಿದ್ದಾರ್ಥ್ ಗೊಯಲ್ ಅವರು ಕಾರುಗಳನ್ನು ಅಲ್ಲಿವರೆಗೆ ಬರಲು ಬಿಟ್ಟಿದ್ದಾರೆ.
ಬಿ.ಸಿ ನಾಗೇಶ್ ಬೆಂಬಲಿಗರ ಕಾರು, ಜೆಸಿ ಮಾಧುಸ್ವಾಮಿ, ನೆ ಲ ನರೇಂದ್ರಬಾಬು ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಅವರಿದ್ದ ಕಾರುಗಳನ್ನು ಕಚೇರಿ ಆವರಣದ ಒಳಗೆ ಬಿಟ್ಟು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೂರನೇ ತಲೆಮಾರಿನ ರಾಜಕೀಯ ಎಂಟ್ರಿಗೆ ಒಪ್ಪಿಗೆ ಮುದ್ರೆ ಒತ್ತಿದ ಸಿದ್ದರಾಮಯ್ಯ ಮೊಮ್ಮಗ
ಬಿ.ಸಿ ನಾಗೇಶ್ ಅವರು ತಿಪಟೂರು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಬಳಿ ₹4.35 ಕೋಟಿ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಪತ್ನಿ ವೀಣಾ ಅವರ ಹೆಸರಿನಲ್ಲಿ ₹90.92 ಲಕ್ಷ ಮೌಲ್ಯದ ಚರಾಸ್ತಿ. ಒಟ್ಟು ₹5.65 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಮಗ ವಿಶ್ವದೀಪ್ ಹೆಸರಿನಲ್ಲಿ ₹52.21 ಲಕ್ಷ ಚರಾಸ್ತಿ, ₹24 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ನಾಗೇಶ್ ಅವರು ಘೋಷಣೆ ಮಾಡಿದ್ದಾರೆ.