ಬೆಳಗಾವಿಯ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಮಣಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅದಕ್ಕಾಗಿ, ಕ್ಷೇತ್ರದಲ್ಲಿ ಪ್ರಬಲ ಮತದಾರರ ಸಮುದಾಯವಾಗಿರುವ ಲಿಂಗಾಯತ ಪಂಚಮಸಾಲಿ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಗುರುವಾರ ಬಿಡುಗಡೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ, ಪಕ್ಷವು ಡಾ. ಮಹಾಂತೇಶ ಕಡಾಡಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
2019ರಲ್ಲಿ ಪಕ್ಷದ 17 ಅತೃಪ್ತ ಶಾಸಕರ ಪಕ್ಷಾಂತರ ಮತ್ತು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣರಾಗಿದ್ದರು ಮತ್ತು ಬಿಜೆಪಿ ಅಧಿಕಾರಕ್ಕೇರಲು ನೆರವಾಗಿದ್ದರು. ಅವರನ್ನು ದ್ರೋಹಿ ಎಂದು ಕಾಂಗ್ರೆಸ್ ಪರಿಗಣಿಸಿದೆ. ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದೆ. ಜಾರಕಿಹೊಳಿಗೆ ಕಠಿಣ ಸವಾಲೊಡ್ಡಲು ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಅಶೋಕ್ ಪೂಜಾರಿ ಹೆಸರು ಮುಂಚೂಣಿಯಲ್ಲಿತ್ತು. ಅವರಿಗೆ ಟಿಕೆಟ್ ಸಿಗುತ್ತದೆಂಬ ಮಾತುಗಳೂ ಕ್ಷೇತ್ರದಲ್ಲಿ ಕೇಳಿಬಂದಿದ್ದವು. ಆದರೆ, ಮಹಾಂತೇಶ ಕಡಾಡಿ ಅವರಿಗೆ ಪಕ್ಷವು ಟಿಕೆಟ್ ನೀಡಿದ್ದು, ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಅಚ್ಚರಿ ಮೂಡಿಸಿದೆ.
ಡಾ. ಕಡಾಡಿ ಅವರು ಬಿಜೆಪಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಹೋದರನ ಪುತ್ರ. ಈರಣ್ಣ ಮತ್ತು ಜಾರಕಿಹೊಳಿ ಒಂದೇ ಪಕ್ಷದಲ್ಲಿದ್ದರೂ, ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎಂದೂ ಹೇಳಲಾಗಿದೆ.
ಕೆಲವು ತಿಂಗಳ ಹಿಂದೆ ಗೋಕಾಕದಲ್ಲಿ ಪಂಚಮಸಾಲಿಗಳು 2ಎ ವರ್ಗದಡಿ ಮೀಸಲಾತಿ ಕೋರಿ ಬೃಹತ್ ಸಮಾವೇಶ ಆಯೋಜಿಸಿದ್ದರು. ಪಂಚಮಸಾಲಿ ಸಮುದಾಯದ ಒಬ್ಬರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಈಗ ಸಮುದಾಯದ ಮತಗಳನ್ನು ಸೆಳೆಯುವ ನಿರೀಕ್ಷೆಯಲ್ಲಿದೆ.
ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ವರುಣಾದಲ್ಲಿ ಸಿದ್ದರಾಮಯ್ಯಗೆ ಸವಾಲೊಡ್ಡುವವರಾರು?
ಗೋಕಾಕ ಪಟ್ಟಣದ ಹೊರವಲಯದಲ್ಲಿ ಆರೋಗ್ಯ ಕೇಂದ್ರ ನಿರ್ಮಿಸುವುದಾಗಿ ಡಾ.ಕಡಾಡಿ ಭರವಸೆ ನೀಡಿದ್ದರು. ಆದಾಗ್ಯೂ, ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ಯೋಜನೆಯು ಸುಮಾರು ಮೂರು ವರ್ಷಗಳ ಕಾಲ ವಿಳಂಬವಾಯಿತು. ರಾಜಕೀಯ ಬಿಕ್ಕಟ್ಟಿನಿಂದ ಹತಾಶರಾಗಿರುವ ಡಾ. ಕಡಾಡಿ ಈಗ ತಮ್ಮ ಉದ್ದೇಶದ ಈಡೇರಿಕೆಗಾಗಿ ರಾಜಕೀಯವಾಗಿ ಹೋರಾಡಲು ನಿರ್ಧರಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ, ಡಾ.ಕಡಾಡಿ ಅವರು ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಆದರೆ, ಅವರ ಹಿನ್ನೆಲೆಯ ಬಗ್ಗೆ ತಿಳಿದಿದ್ದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗಡುವು ಮುಗಿದಿದ್ದರೂ, ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದರು. ಇದೀಗ, ಅವರಿಗೆ ಟಿಕೆಟ್ ನೀಡಿದ್ದಾರೆ.