ಈರುಳ್ಳಿ ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಯೋಜಿಸುತ್ತಿದ್ದರು. ಆ ವೇಳೆಗೆ ಅಕಾಲಿಕ ಮಳೆ ಸುರಿದ ಪರಿಣಾಮ ಈರುಳ್ಳಿ ಸಂಪೂರ್ಣವಾಗಿ ನೀರುಪಾಲಾಗಿದೆ. ಈರುಳ್ಳಿ ಬೆಳಿದಿದ್ದ ರೈತರು ಕಂಗಾಲಾಗಿದ್ದಾರೆ.
ಬೀದರ್ ಜಿಲ್ಲೆ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಈರುಳ್ಳಿ ಬೆಳೆದು ಖುಷಿಯಲ್ಲಿದ್ದ ರೈತರು ಅಕಾಲಿಕ ಮಳೆಯಿಂದ ಕಣ್ಣೀರು ಹಾಕುತ್ತಿದ್ದಾರೆ. ಗ್ರಾಮದ ಅನೇಕ ರೈತರು ಬೆಳೆದ ಈರುಳ್ಳಿ ಮಳೆಯಲ್ಲಿ ತೋಯ್ದುಹೋಗಿದ್ದು, ಅದನ್ನು ತೆಗೆಯಲು ಈಗ ಹರಸಾಹಸ ಪಡಬೇಕಾಗುತ್ತಿದೆ. ಕೈ ಸೇರಬೇಕಿದ್ದ ಬೆಳೆ ನೀರಿನಲ್ಲಿ ಕೊಳೆಯುತ್ತಿದೆ.
“ಅಕಾಲಿಕ ಮಳೆಯಿಂದ ಈರುಳ್ಳಿ ಬೆಳೆ ಕಳೆದುಕೊಂಡಿದ್ದು, ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ನಮ್ಮ ಬದುಕು ಬೀದಿಪಾಲಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಪರಿಹಾರ ನೀಡಲು ಮುಂದಾಗಬೇಕು” ಎಂದು ರೈತರು ಆಗ್ರಹಿಸಿದ್ದಾರೆ.
“ಔರಾದ ತಾಲೂಕಿನ ಬಹುತೇಕ ಗ್ರಾಮಗಳ ಈರುಳ್ಳಿ ಬೆಳೆಗಾರರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಮಳೆ ಅವಾತರದಿಂದ ಸಂಕಷ್ಟ ಎದುರಾಗಿರುವ ರೈತರಿಗೆ ಪರಿಹಾರ ಒದಗಿಸುವುದು ಅನಿವಾರ್ಯವಾಗಿದೆ” ಎಂದು ಅವಲತ್ತುಕೊಂಡರು.
ಈ ಸುದ್ದಿ ಓದಿದ್ದೀರಾ? ಜಲ್ಲಿಕಟ್ಟು, ಕಂಬಳಕ್ಕೆ ಅವಕಾಶ ನೀಡುವ ಕಾನೂನನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್
“ಸಾಲ ಸೋಲ ಮಾಡಿ ಈರುಳ್ಳಿ ಬೆಳೆದಿದ್ದ ಬೆಳಗಾರರಿಗೆ ಭಾರೀ ಮಳೆಯಿಂದ ನಷ್ಟ ಉಂಟಾಗಿದೆ. ಕಳೆದ ಕೆಲದಿನಗಳಿಂದ ಮಳೆ ಅಬ್ಬರಿಸಿದ್ದು, ಜಮೀನುಗಳು ಜಲಾವೃತವಾಗಿವೆ. ಇದರಿಂದಾಗಿ ಈರುಳ್ಳಿ ಗಡ್ಡೆಗಳು ಸಂಪೂರ್ಣವಾಗಿ ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ” ಎಂದರು.
“ಮೂರು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು ಈ ವರ್ಷ ಉತ್ತಮ ಇಳುವರಿ ಬಂದಿತ್ತು. ವಾರದಿಂದ ಬಿಡುವಿಲ್ಲದೆ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ನೀರುಪಾಲಾಗಿ ಕೊಳೆಯುತ್ತಿದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಬೇಕು” ಎಂದು ಈರುಳ್ಳಿ ಬೆಳೆಗಾರ ಖಂಡೆರಾವ ಪಾಟೀಲ ಕೊಳ್ಳೂರ ಒತ್ತಾಯಿಸಿದರು.