ವಾಣಿ ವಿಲಾಸ(ವಿವಿ) ಸಾಗರ ನಾಲೆಗಳಿಗೆ ತುರ್ತಾಗಿ ನೀರು ಹರಿಸಬೇಕು ಎಂದು ವಿವಿಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಚೇರಿ ಎದುರು ನಿಂತು ಮನವಿ ಮಾಡಿ ಮಾತನಾಡಿದರು.
ನಾಲೆಗಳಿಗೆ ನೀರು ಹರಿಸಬೇಕೆಂದು ಜನವರಿ 28ರಂದು ಸಮಿತಿಯಿಂದ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಗೆ ಮನವಿ ಪತ್ರ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ನೀರು ಹರಿಸಿ ರೈತರ ಹಿತಾಸಕ್ತಿ ಕಾಪಾಡುವಂತೆ ಕೋರಿದ್ದರೂ ಕೂಡ ಈವರೆಗೆ ಯಾವುದೇ ರೀತಿಯ ಪ್ರಗತಿಯಾಗಿಲ್ಲ, ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಕಳೆದ ವರ್ಷ ಭೀಕರವಾದ ಬರಗಾಲವಾಗಿ ಹಿರಿಯೂರು ತಾಲೂಕಿನಲ್ಲಿ ಅದರಲ್ಲೂ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮಳೆ ಬೀಳದೆ ಕೆರೆ ನೀರು ನಚ್ಚಿಕೊಂಡು ತೆಂಗು, ಅಡಿಕೆ, ಬಾಳೆ, ಪಪ್ಪಾಯಿ, ಶೇಂಗಾ ನಾಟಿ ಮಾಡಲಾಗಿದೆ. ಆದಕಾರಣ ಕೊಳವೆ ಬಾವಿಗಳು ಅಂತರ್ಜಲ ಕೊರತೆಯಿಂದ ಕೆಲವೊಂದು ನಿಂತು ಹೋಗಿವೆ. ಬಹಳಷ್ಟು ಕಡೆಗಳಲ್ಲಿ ಅಂತರ್ಜಲ ಕೆಳ ಮಟ್ಟಕ್ಕೆ ಹೋಗಿದೆ” ಎಂದರು.
“ಜಿಲ್ಲಾಧಿಕಾರಿಯವರು ತುರ್ತಾಗಿ ಸಂಬಂಧಪಟ್ಟ ಕೃಷಿ ತೋಟಗಾರಿಕೆ ರೇಷ್ಮೆ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರ ಅಧಿಕಾರಿಗಳ ಸಲಹೆ ಪಡೆದು ಶೀಘ್ರದಲ್ಲೇ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಐದು ಗ್ಯಾರಂಟಿ ಯೋಜನೆಗಳು ಜನಪರವಾಗಿವೆ : ಶಾಸಕ ಟಿ. ರಘುಮೂರ್ತಿ
ಈ ಸಂದರ್ಭದಲ್ಲಿ ನಿರ್ದೇಶಕ ಮಂಜುನಾಥ್ ಮಾಳಿಗೆ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ದೊಡ್ಡಘಟ್ಟ ಕುಮಾರ್ ಇದ್ದರು.