ರಾಜ್ಯದ ರೈತರು ಬೆಳೆದ ಮೆಣಸಿನಕಾಯಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ನೀಡಿ ಸರ್ಕಾರವೇ ಖರೀದಿಸಬೇಕು ಎಂದು ಎಐಕೆಕೆಎಂಎಸ್ ರೈತ ಸಂಘಟನೆಯಿಂದ ಆಗ್ರಹಿಸಿದರು.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮಂಗಳವಾರದಂದು ನಡೆದ ದುರ್ಘಟನೆ ಕುರಿತು ಎಐಕೆಕೆಎಂಎಸ್ ಧಾರವಾಡ ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಪತ್ರಿಕೆ ಕೇಳಿಕೆ ನೀಡಿದ್ದಾರೆ.
“ಬೀಜ- ರಸ ಗೊಬ್ಬರದ ಬೆಲೆ ಗಗನಕ್ಕೇರಿದ್ದಾಗಲೂ ಕೂಡ ರೈತರು ಈ ಬಾರಿ ಮೆಣಸಿಕಾಯಿ ಬೆಳೆ ಬೆಳೆಯಲು ಕೈ ಸಾಲ ಸೇರಿದಂತೆ ಇನ್ನಿತರ ಸಾಲ ಮಾಡಿ ಸಾಕಷ್ಟು ಖರ್ಚು ಮಾಡಿದ್ದಾರೆ. ಈ ಬಾರಿ ಮಳೆ ವಿಫಲವಾದಾಗಲೂ, ಕಾಲುವೆ ನೀರು ಲಭ್ಯವಿಲ್ಲದಿದ್ದಾಗಲೂ ಯಾವುದಕ್ಕೂ ಅಂಜದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ಯಾಂಕರ್ ನೀರು ಉಪಯೋಗಿಸಿ ಬಹಳ ಪರಿಶ್ರಮದಿಂದ ಬೆಳೆ ಬೆಳೆದಿದ್ದಾರೆ” ಎಂದು ಸಂಕಷ್ಟ ತೋಡಿಕೊಂಡಿದ್ದರು.
“ಮಾರುಕಟ್ಟೆಗೆ ಆವಕ ಬಂದಾಗ ಸರ್ಕಾರ ನೇರವಾಗಿ ಮಧ್ಯಸ್ಥಿಕೆ ವಹಿಸಿ ಉತ್ತಮ ಬೆಲೆ ನಿಗದಿ ಮಾಡಿ ಖರೀದಿಸಲು ಮುಂದಾಗದೆ, ನಿರ್ಲಕ್ಷ್ಯ ಮಾಡಿದುದರಿಂದ ರೈತರು ಮೆಣಸಿನಕಾಯಿ ಮಾರಾಟ ಮಾಡಲು ಬೇರೆ ದಾರಿಯಿಲ್ಲದೆ ಹಗಲು ರಾತ್ರಿ ಬ್ಯಾಡಗಿ ಮಾರುಕಟ್ಟೆಯಲ್ಲಿ ಅದರ ವಿಲೇವಾರಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರು. ರೈತರ ಈ ಅಸಹಾಯಕತೆಯನ್ನೇ ಉಪಯೋಗಿಸಿಕೊಂಡು ನೋಂದಣಿ ಮಾಡದ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಲು ರಣಹದ್ದಿನಂತೆ ಮುಗಿಬಿದ್ದಿದ್ದಾರೆ” ಎಂದರು.
“ದಿನೇ ದಿನೆ ಆವಕ ಮಾರುಕಟ್ಟೆಗೆ ಹೆಚ್ಚುತ್ತಿದ್ದಂತೆ ನೋಂದಣಿ ಮಾಡದ ದಲ್ಲಾಳಿಗಳು, ವ್ಯಾಪಾರಸ್ಥರ ಜೊತೆಗೂಡಿ ಅತ್ಯಂತ ಕಡಿಮೆ ದರದಲ್ಲಿ ಖರೀದಿಸಲು ಆರಂಭಿಸಿದರು. ಇದರಿಂದ ಕ್ರಮೇಣ ಬೆಲೆ ಸತತವಾಗಿ ಇಳಿಯಲಾರಂಭಿಸಿತು. ಇದು ರೈತರಲ್ಲಿ ಆತಂಕ ಹುಟ್ಟಿಸಿ, ನಷ್ಟಕ್ಕೀಡಾಗುವ ಭಯ ಮತ್ತು ಚಿಂತೆ ರೈತರನ್ನು ಆವರಿಸಿತು” ಎಂದು ಹೇಳಿದರು.
“ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಖರೀದಿ ಪ್ರಕ್ರಿಯೆ ಆರಂಭಿಸಿ ತಮ್ಮ ಬೆಳೆಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು. ನೋಂದಣಿಯಾಗದ ಖರೀದಿದಾರರ ಮೇಲೆ ಕ್ರಮ ಜರುಗಿಸಬೇಕೆಂದು ರೈತರು ಸಹಜವಾಗಿಯೇ, ಶಾಂತಿಯುತವಾಗಿ ಪ್ರತಿಭಟಿಸಿದರು. ಇಷ್ಟೆಲ್ಲಾ ನಡೆದರೂ ಕೂಡ ಯಾವುದೇ ರೈತರು ಗಲಾಟೆಯಾಗಲಿ ದಂಗೆಯಾಗಲಿ ನಡೆಸಿಲ್ಲ. ಯಾರೋ ಕೆಲವು ಕಿಡಿಗೇಡಿಗಳು ಈ ಪರಿಸ್ಥಿತಿಯನ್ನು ದುರ್ಬಳಕೆ ಬಳಸಿಕೊಂಡು ದಾಂಧಲೆ ಎಬ್ಬಿಸಿದ್ದಾರೆ. ಇದು ಅಲ್ಲಿ ಅಹಿತಕರ ಘಟನೆಗಳು ನಡೆಯಲು ಕಾರಣವಾಗಿದೆ. ಇಡೀ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ನಕಲಿ ದಾಖಲೆ ಸೃಷ್ಟಿಸಿ ಹುದ್ದೆ ಪಡೆದ ಆರೋಪ; ನೆರವು ನೀಡಿದ ಪಿಡಿಒ ಅಮಾನತಿಗೆ ಆಗ್ರಹ
“ಈಗಾಗಲೇ ಅಲ್ಲಿನ ಪೊಲೀಸರು ಬಂಧಿಸಿರುವ ಅಮಾಯಕ ರೈತರನ್ನು ಬಿಡುಗಡೆಗೊಳಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು. ಇನ್ನುಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು, ಸರ್ಕಾರವೇ ಕೂಡಲೇ ನೇರವಾಗಿ ರೈತರ ಎಲ್ಲ ಬೆಳೆಗಳನ್ನು ನ್ಯಾಯಯುತ ಬೆಲೆ ನಿಗದಿ ಮಾಡಿ ಖರೀದಿಸಬೇಕು. ಅದಕ್ಕೆ ಅಗತ್ಯವಾದ ಪ್ರಕ್ರಿಯೆಗೆ ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.