- ಕೆಇಬಿ ಕಚೇರಿಗೆ ಮುತ್ತಿಗೆ; ಅಧಿಕಾರಿಗಳಿಗೆ ತರಾಟೆ
- ಮೇ 17ರ ವೇಳೆಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ
ಬೇಸಿಗೆ ಕಾಲ ಆರಂಭವಾಗಿದ್ದು, ಹತ್ತಿ, ರಾಗಿ ಬೆಳೆಗಳಿಗೆ ನೀರು ಹಾಯಿಸಲು ಸೂಕ್ತ ಪ್ರಮಾಣದಲ್ಲಿ ಕನಿಷ್ಟ 7 ಗಂಟೆಗಳ ಕಾಲ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಿಂಡಸ್ಕಟ್ಟೆ ಕೆಇಬಿಯಿಂದ ಯಲ್ಲದಕೆರೆ ಗ್ರಾಮದ ಕರೇಕೆಂಚಯ್ಯನಹಟ್ಟಿ ಸುತ್ತಮುತ್ತಲಿನ ಪ್ರದೇಶಗಳ ರೈತರಿಗೆ ಕಳೆದ 15 ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಸುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ರೈತ ಪ್ರಸನ್ನ ಕುಮಾರ್ ಅವರು ಈದಿನ.ಕಾಮ್ ಜೊತೆಗೆ ಮಾತನಾಡಿ, “ಪ್ರಸ್ತುತ ರಾಗಿ ಮತ್ತು ಹತ್ತಿ ಬೆಳೆ ಹರತೆ ಹೊಡೆದಿದ್ದು, ಈ ಸಂದರ್ಭದಲ್ಲಿ ಬೆಳೆಗೆ ನೀರು ಹಾಯಿಸುವುದು ಅನಿವಾರ್ಯವಾಗಿದೆ. ಆದರೆ, ಅಧಿಕಾರಿಗಳು ಇನ್ನು ಹದಿನೈದು ದಿನ ಕಳೆದ ನಂತರ ಸಮಸ್ಯೆ ಪರಿಹರಿಸುವುದಾಗಿ ಹೇಳುತ್ತಿದ್ದಾರೆ. ಹದಿನೈದು ದಿನದಲ್ಲಿ ಮಳೆಯ ಬರಲಿದೆ. ಆಗ ವಿದ್ಯುತ್ ಅವಶ್ಯಕತೆಯೇ ಇರುವುದಿಲ್ಲ” ಎಂದರು.
“ಇನ್ನ ಒಂದು ತಿಂಗಳು ಕಳೆದರೆ ಈರುಳ್ಳಿ ಹಾಕುತ್ತೇವೆ. ಆದರೆ ಕೆಇಬಿ ಅಧಿಕಾರಿಗಳು ನಮಗೆ ಸಾಕಷ್ಟು ವಿದ್ಯುತ್ ನೀಡುತ್ತಿಲ್ಲ. ಒಂದೇ ಲೈನ್ನಲ್ಲಿ ನಮಗೆ ಮೂರು ಗಂಟೆ ಮಾತ್ರವೇ ವಿದ್ಯುತ್ ನೀಡಿ, ಉಳಿದ ಅವದಿಯಲ್ಲಿ ಬೇರೆ ಗ್ರಾಮಕ್ಕೆ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸಚಿವ ಸುಧಾಕರ್ ಉಡುಗೊರೆ ನೀಡಿದ್ದ ಗ್ಯಾಸ್-ಸ್ಟೌ ಸ್ಫೋಟ
“ಇಂದು ರೈತರು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿದ್ದ ವೇಳೆ, ಮುಂದಿನ ತಿಂಗಳು 15ರ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ವಿಭಾಗಿಯ ಅಧಿಕಾರಿ ಮುಸ್ತಾಕ್ ಭರವಸೆ ನೀಡಿದ್ದಾರೆ. ಅಷ್ಟರೊಳಗೆ ತುಂಬಾ ತಡ ಆಗಲಿದೆ. ರೈತರು ಇದರಿಂದ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ” ಎಂದರು.
ಈ ವೇಳೆ ಗ್ರಾಮಸ್ಥರಾದ ಅವಿನಾಶ್, ಸುಧಾಕರ್, ಮಂಜುನಾಥ್, ಸಂತೋಷ್, ಕೃಷ್ಣ, ಕೃಷ್ಣಮೂರ್ತಿ ಹಾಗೂ ಶಿವಣ್ಣ ಇದ್ದರು.