“ಬಳ್ಳಾರಿ ಜಿಲ್ಲೆ ಕುಡಿತಿನಿ ಮತ್ತು ಸುತ್ತಲ ಗ್ರಾಮಗಳ ಸುಮಾರು 900 ಎಕರೆ ರೈತರ ಜಮೀನನ್ನು ಜಿಂದಾಲ್ ಕಂಪನಿಗೆ ವರ್ಗಾವಣೆ ಮಾಡುವ ತೀರ್ಮಾನದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ರೈತ ಮುಖಂಡರನ್ನು ಬಂಧಿಸಿರುವುದು ಖಂಡನೀಯ” ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದು, “ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರು, ಸಿಪಿಐ(ಎಂ)ನ ರಾಜ್ಯ ಮುಖಂಡರೂ ಆದ ಯು.ಬಸವರಾಜ ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರೂ, ಸಿಪಿಐ(ಎಂ) ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಯಾದ ಜೆ.ಸತ್ಯಬಾಬು ಅವರನ್ನೂ ಒಳಗೊಂಡು ಸುಮಾರು 300 ಕ್ಕೂ ಹೆಚ್ಚು ರೈತರು ಮತ್ತು ರೈತ ಮಹಿಳೆಯರನ್ನು ಬಂಧಿಸಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಬಂಧಿತರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಅರ್ಸೆಲರ್ ಮಿತ್ತೆಲ್ ಕಂಪನಿಗಾಗಿ 2012 ರಲ್ಲಿ ಕೆಐಎಡಿಬಿ ಸ್ವಾಧೀನ ಮಾಡಿ ಇದುವರೆಗೂ ಉಪಯೋಗಿಸಿದೇ ಇದ್ದ ರೈತರ ಜಮೀನುಗಳನ್ನು ಆಕ್ರಮವಾಗಿ ಜಿಂದಾಲ್ ಕಂಪನಿಗೆ ಕಳ್ಳತನದಲ್ಲಿ ಮಾರಾಟ ಮಾಡಿರುವುದನ್ನು ಖಂಡಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದರು. ಶತಾಯಗತಾಯ ಜಿಂದಾಲ್ ಕಂಪನಿಗೆ ಜಮೀನನ್ನು ವರ್ಗಾವಣೆ ಮಾಡಲೇಬೇಕೆಂದು ಪಟ್ಟು ಹಿಡಿದಿರುವ ಕೆಐಎಡಿಬಿ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಸಂಸದರು, ಶಾಸಕರು ಮತ್ತು ಸರ್ಕಾರ ರೈತರ ವಿರುದ್ಧ ಕುಮ್ಮಕ್ಕು ನೀಡಿ, ಪೊಲೀಸರನ್ನು ದೊಡ್ಡ ಪ್ರಮಾಣದಲ್ಲಿ ಬಳಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಆರ್ಸೆಲರ್ ಮಿತ್ತಲ್ ಕಂಪನಿಗೆ ಸುಮಾರು 14 ವರ್ಷಗಳ ಹಿಂದೆ ರೈತರಿಂದ 5-10 ಲಕ್ಷ ರೂಗಳಿಗೆ ಜಮೀನನ್ನು ಕೆಐಎಡಿಬಿ ವಶಪಡಿಸಿಕೊಂಡಿತ್ತು. ಇದರ ವಿರುದ್ಧ ರೈತರ ಕಾನೂನಿನ ಹೋರಾಟವನ್ನೂ ನಡೆಸುತ್ತಿದ್ದರು. ಇಲ್ಲಿನ ರೈತರ ಫಲವತ್ತಾದ ಭೂಮಿ ಎಕರೆಗೆ ಒಂದೂವರೆ ಕೋಟಿ ರೂಗಳಿಗೂ ಹೆಚ್ಚು ಬೆಲೆ ಬಾಳುತ್ತದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ನೂರಾರು ರೈತರಿಗೆ ಒಂದು ಕೋಟಿಗೂ ಹೆಚ್ಚಿನ ಪರಿಹಾರ ನೀಡುವಂತಾಗಿದೆ. ಮಿತ್ತೆಲ್ ಕಂಪನಿ ಬಳಿಯಿದ್ದ ಹೆಚ್ಚಿನ ಭೂಮಿಯನ್ನು ವಾಪಸ್ ಕೊಡಬೇಕೆಂದು ರೈತರು ಹೋರಾಟ ನಡೆಸುತ್ತಿದ್ದರು” ಎಂದು ತಿಳಿಸಿದ್ದಾರೆ.
“ಇಂತಹ ಸಂದರ್ಭದಲ್ಲಿ ಸುಮಾರು 900 ಎಕರೆ ಜಮೀನನ್ನು ಜಿಂದಾಲ್ ಕಂಪನಿಗೆ ಎಕರೆಗೆ ಕೇವಲ 28 ಲಕ್ಷ ರೂಗಳಿಗೆ ಮಾರಾಟ ಮಾಡಲು ಕೆಐಎಡಿಬಿ ಅಕ್ರಮವಾಗಿ ತೀರ್ಮಾನ ಮಾಡಿದೆ. ಇದರ ಹಿಂದೆ ಬೃಹತ್ ಭ್ರಷ್ಟಾಚಾರ ನಡೆದಿದೆ. ಜಿಂದಾಲ್ ಕಂಪನಿಗೆ ಭೂಮಿಯನ್ನು ಕೊಡಬಾರದು ಎಂದು” ರೈತರು ಸತತವಾಗಿ ಹೋರಾಡುತ್ತಿದ್ದಾರೆ.
“ಸುಪ್ರೀಂ ಕೋರ್ಟ್ ತೀರ್ಪಿನಂತೆ ಪರಿಹಾರ ಒದಗಿಸಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಅಥವಾ ರೈತರಿಗೆ ಅವರ ಭೂಮಿಯನ್ನು ವಾಪಸ್ಸು ನೀಡಬೇಕು. ಬಂಧನ ಮಾಡಿರುವ ಎಲ್ಲಾ ರೈತ ಮುಖಂಡರನ್ನು, ರೈತರನ್ನು ಮತ್ತು ಮಹಿಳೆಯರನ್ನು ಬಿಡುಗಡೆ ಮಾಡಬೇಕು. ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ರೈತರೊಂದಿಗೆ ಮಾತುಕತೆ ನಡೆಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ , ಗದಗ್ ಜಿಲ್ಲಾ ಸಮಿತಿ ಸಮಿತಿ ಒತ್ತಾಯಿಸುತ್ತದೆ. ದಮನಕಾರಿ ನೀತಿಯನ್ನು ಮುಂದುವರಿಸಿದರೆ ರಾಜ್ಯವ್ಯಾಪಿ ಹೋರಾಟವನ್ನು ನಡೆಸುವ ಎಚ್ಚರಿಕೆಯನ್ನು ನೀಡುತ್ತದೆ” ಬಾಲು ರಾಠೋಡ ತಿಳಿಸಿದ್ದಾರೆ.




