ಉತ್ತರ ಕನ್ನಡ: ಭಾರತೀಯ ಸೇನೆ ಹಾಗೂ ಇತರ ಸಮವಸ್ತ್ರಧಾರಿ ಸೇವೆಗಳಿಗೆ ಸೇರಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಸುವರ್ಣಾವಕಾಶವೊಂದು ಒದಗಿಬಂದಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮೊದಲ ತಂಡದ ಆಯ್ಕೆಯ ಪೂರ್ವ ಸಿದ್ಧತೆಗಾಗಿ ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿಯನ್ನು ಆಯೋಜಿಸಲಾಗಿದ್ದು, ಆಸಕ್ತ ಬಾಲಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ತರಬೇತಿಯು ಕಾರವಾರದ “ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ”ಯಲ್ಲಿ ನಡೆಯಲಿದ್ದು, ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗುಂಪಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೇ 28, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಹತೆಯ ಮಾನದಂಡಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ಪ್ರವರ್ಗ-1ಕ್ಕೆ 2.50 ಲಕ್ಷ ರೂಪಾಯಿಗಳು ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಅಭ್ಯರ್ಥಿಗಳಿಗೆ 1 ಲಕ್ಷ ರೂಪಾಯಿಗಳ ಮಿತಿಯೊಳಗಿರಬೇಕು.
ಅಭ್ಯರ್ಥಿಯು 10ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳು ಹಾಗೂ ಸರಾಸರಿ ಶೇ. 45 ರಷ್ಟು ಅಂಕಗಳನ್ನು ಪಡೆದಿರುವುದು ಕಡ್ಡಾಯವಾಗಿದೆ. ಗ್ರೇಡಿಂಗ್ ಪದ್ಧತಿಯಡಿ ವ್ಯಾಸಂಗ ಮಾಡಿದವರು ಸಹ ಇದಕ್ಕೆ ಸಮಾನವಾದ ಅಂಕಗಳನ್ನು ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳ ವಯಸ್ಸು 17 ರಿಂದ 20 ವರ್ಷದೊಳಗಿರಬೇಕು. ಅಂದರೆ, ಅಭ್ಯರ್ಥಿಯು 28-05-2006 ರಿಂದ 28-05-2009 ರ ನಡುವಿನ ಅವಧಿಯಲ್ಲಿ ಜನಿಸಿರಬೇಕು. ವಯಸ್ಸಿನ ಲೆಕ್ಕಾಚಾರಕ್ಕೆ 10ನೇ ತರಗತಿಯ ಅಂಕಪಟ್ಟಿಯಲ್ಲಿರುವ ಜನ್ಮ ದಿನಾಂಕವನ್ನೇ ಪರಿಗಣಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮಾನವ ಹಕ್ಕುಗಳ ರಕ್ಷಣೆ ಅಧಿಕಾರಿಗಳ ಹೊಣೆ: ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್
ಆಸಕ್ತರು ತಮ್ಮ ಜಿಲ್ಲೆಯ ಅಥವಾ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಮೇ 28ರ ಒಳಗಾಗಿ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ನೆಲಮಹಡಿಯಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 08382-226588 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




